ಬಿಜೆಪಿಯವರಿಗೆ ಈಗ ದಲಿತರು, ಅಲ್ಪಸಂಖ್ಯಾತರ ನೆನಪು: ಎಚ್ ಡಿಕೆ ವ್ಯಂಗ್ಯ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತದೇ ಹಳೇ ಆರೋಪ ಮಾಡಿದ್ದಾರೆ. ಈ ಬಾರಿ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು ಹೇಳಿದ್ದೇನು ಎಂದು ತಿಳಿಯಲು ಈ ವರದಿ ಓದಿ
ಮಾಗಡಿ, ಮೇ 19: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಹಳೆ ಡೈಲಾಗ್ ಹೊಡೆದಿದ್ದಾರೆ. ಅದೇನು ಅಂತೀರಾ? ಜೆಡಿಎಸ್ ಜನಪ್ರಿಯತೆಯನ್ನು ಕಂಡು ಆತಂಕಗೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಕ್ಷದ ಬೆಳವಣಿಗೆಯನ್ನು ತಡೆಯುವ ಸಲುವಾಗಿ ಷಡ್ಯಂತ್ರ ನಡೆಸಿದ್ದಾರಂತೆ. ಆದರೆ ಅದು ಫಲಕಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಇಲ್ಲಿನ ಸರಕಾರಿ ಪಿಯು ಕಾಲೇಜಿನ ಮಿನಿ ಕ್ರೀಡಾಂಗಣದ ಹೆಲಿಪ್ಯಾಡ್ ನಲ್ಲಿ ಸಾವನದುರ್ಗ ಮತ್ತು ಕುದೂರಿಗೆ ಕಾರಿನಲ್ಲಿ ತೆರಳುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ವರ್ಚಸ್ಸಿಗೆ ಕಳಂಕ ತರುವ ಸಲುವಾಗಿ ಸರಕಾರ ಗಣಿಕಪ್ಪ ಹಗರಣದ ತನಿಖೆಗೆ ಮರು ಜೀವ ನೀಡಿದೆ. ಆದರೆ ಇದು ನಡೆಯುವುದಿಲ್ಲ ಎಂದು ಹೇಳಿದ್ದಾರೆ.[ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸಿಗೆ ಬೆಂಕಿ ಇಟ್ಟರಾ ಕುಮಾರಸ್ವಾಮಿ!]
ಇಪ್ಪತ್ತು ತಿಂಗಳ ನನ್ನ ಅಧಿಕಾರಾವಧಿಯಲ್ಲಿ ಮಾಡಿದ ಕಾರ್ಯವನ್ನು ಜನ ನೆನೆಯುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ಮನೆಗಳಿಗೆ ಹೋಗಿ ಜನಸೇವೆ ಮಾಡದೆ ಈಗ ಚುನಾವಣೆ ಹತ್ತಿರ ಬರುವಾಗ ರಾಜ್ಯದಲ್ಲಿ ಬರವೀಕ್ಷಣೆ ನೆಪದಲ್ಲಿ ಮುಸಲ್ಮಾನರು, ಪರಿಶಿಷ್ಟರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದ್ದಾರೆ.[ಕಾರ್ಯಕರ್ತನ ಕಪಾಳಕ್ಕೆ ಹೊಡೆದ ಎಚ್ ಡಿ ಕುಮಾರಸ್ವಾಮಿ]
ರಾಜ್ಯದಲ್ಲಿ ಜೆಡಿಎಸ್ ಪ್ರವರ್ಧಮಾನಕ್ಕೆ ಬರುತ್ತಿರುವುದು ಕಂಡು ನಮ್ಮ ವೇಗವನ್ನು ತಡೆಯುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ. ಇದು ಫಲಕಾರಿಯಾಗುವುದಿಲ್ಲ ಎಂದರು.
ನೀರಾವರಿ ವಿಚಾರದಲ್ಲಿ ರಾಜ್ಯದ ಜನತೆಗೆ ಅನ್ಯಾಯವಾದಾಗ ಮಧ್ಯ ಪ್ರವೇಶ ಮಾಡದ ಕೇಂದ್ರ ಸರಕಾರ, ಬರ ಸಂದರ್ಭದಲ್ಲಿ ಸೂಕ್ತ ಪರಿಹಾರ ಬೇಡಿದರೆ ಸಹಾಯಹಸ್ತವನ್ನು ಮೊಟಕುಗೊಳಿಸುವುದು ನಡೆದು ಬಂದಿದೆ. ಈ ಬಗ್ಗೆ ರಾಜ್ಯ ಸರಕಾರವು ಎಚ್ಚೆತ್ತುಕೊಳ್ಳದೆ ಲೋಪಗಳನ್ನು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.[ಸದ್ಯದಲ್ಲೇ ವಿಶ್ವನಾಥ್ ಜೆಡಿಎಸ್ ಗೆ: ಎಚ್ ಡಿಕೆ ಸ್ಪಷ್ಟನೆ]
ಈ ಎರಡೂ ರಾಷ್ಟ್ರೀಯ ಪಕ್ಷಗಳನ್ನು ನಂಬಿದರೆ ಏನೂ ಪ್ರಯೋಜನವಿಲ್ಲ ಎಂಬುದು ಜನಕ್ಕೆ ಗೊತ್ತಾಗಿದೆ. ಹೀಗಾಗಿ ಜನ ಜೆಡಿಎಸ್ ನತ್ತ ಒಲವು ತೋರುತ್ತಿದ್ದಾರೆ ಎಂದರು.