ಮಹದಾಯಿ ಸಮಸ್ಯೆ ಎತ್ತಿದ ರೈತನ ಮೇಲೆ 'ಕೈ'ಎತ್ತಿದ ಬಿಜೆಪಿ ಮುಖಂಡ!
ಮಹದಾಯಿ ಸಮಸ್ಯೆ ಪರಿಹರಿಸಿ ಸ್ವಾಮಿ ಎಂದು ಮನವಿ ಮಾಡಿದ ರೈತನ ಮೇಲೆ ಬಿಜೆಪಿ ಮುಖಂಡರೊಬ್ಬರ ದರ್ಪ.
ಗದಗ, ಮೇ 23: ದೇಶದ ಅನ್ನದಾತ ರೈತನ ಮೇಲೆ ಬಿಜೆಪಿಯ ಮುಖಂಡರೊಬ್ಬರು ದರ್ಪ ತೋರಿದ ಘಟನೆ ಮಂಗಳವಾರ (ಮೇ 23) ಗದಗದಲ್ಲಿ ನಡೆದಿದೆ.
ನಗರದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ 'ಜನಸಂಪರ್ಕ ಅಭಿಯಾನ' ಸಾರ್ವಜನಿಕ ಸಭೆಯಲ್ಲಿ, ಬಿಜೆಪಿ ಮುಖಂಡ ಕಳಕಪ್ಪ ಬಂಡಿ, ರೈತನ ಮೇಲೆ ಕೈಎತ್ತಿ ಜೊತೆಗೆ ಆತನನ್ನು ಸಭೆಯಿಂದ ಹೊರಗೆ ಕಳುಹಿಸಿದ ಘಟನೆ ವರದಿಯಾಗಿದೆ. (ಗದಗದ ದಲಿತನ ಮನೆಯಲ್ಲಿ ಬಿಎಸ್ವೈ)
ಯಡಿಯೂರಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಎದ್ದುನಿಂತ ರೈತರೊಬ್ಬರು 'ಮೊದಲು ಮಹದಾಯಿ ಸಮಸ್ಯೆ ಪರಿಹರಿಸಿ ಸ್ವಾಮಿ'ಎಂದು ಮನವಿ ಮಾಡುತ್ತಿದ್ದರು.
ಬಿಎಸ್ವೈ ಭಾಷಣದ ಮಧ್ಯೆ ರೈತ ಪದೇಪದೇ ಮಹದಾಯಿ ವಿಚಾರದ ಬಗ್ಗೆ ಮನವಿ ಮಾಡುತ್ತಿದ್ದಾಗ, ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡ ಕಳಕಪ್ಪ ಬಂಡಿ ಕೆಳಗಿಳಿದು ಬಂದು, ರೈತನ ಕೆನ್ನೆಗೆ ಬಾರಿಸಲು ಹೋದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೂಡಲೇ ಮಧ್ಯ ಪ್ರವೇಶಿಸಿದ ಸ್ಥಳೀಯ ಮುಖಂಡರು ಕಳಕಪ್ಪ ಬಂಡಿಯನ್ನು ತಡೆದು, ರೈತನನ್ನು ಸಭೆಯಿಂದ ಹೊರಗೆ ಕಳುಹಿಸಿದ್ದಾರೆ. ಈ ಎಲ್ಲಾ ಘಟನೆ ನಡೆಯುತ್ತಿದ್ದರೂ, ಯಡಿಯೂರಪ್ಪನವರ ಭಾಷಣ ನಿರಾಂತಕವಾಗಿ ಸಾಗುತ್ತಿತ್ತು.
ಗದಗ ಜಿಲ್ಲಾ ಪ್ರವಾಸದಲ್ಲಿರುವ ಯಡಿಯೂರಪ್ಪ, ಜಿಲ್ಲೆಯ ದಲಿತಕೇರಿಗಳು, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊ೦ದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಜಿಲ್ಲೆಯ ರೋಣ ತಾಲೂಕಿನ ಗಜೇ೦ದ್ರಗಢ, ನರಗುಂದದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಪ್ರತಿಪಕ್ಷವಾಗಿ ಆಡಳಿತ ಪಕ್ಷದ ವೈಫಲ್ಯ ಮತ್ತು ಹುಳುಕುಗಳನ್ನು ಎತ್ತಿ ತೋರಿಸುವುದು ಬಿಜೆಪಿಯ ಕರ್ತವ್ಯ. ಈ ಬಗ್ಗೆ ಜನರ ನಡುವೆ ಸ೦ಚರಿಸುತ್ತಾ ಜಾಗೃತಿ ಮೂಡಿಸುವಲ್ಲಿ ಬಿಜೆಪಿ ನಿರತವಾಗಿದೆ ಎಂದು ಬಿಎಸ್ವೈ ಹೇಳಿದ್ದಾರೆ.
ಕೊನೇಮಾತು: ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದ ನಿಮ್ಮದು ಅದೆಂತಹಾ ರೈತರ ಪರ ಕಾಳಜಿ ಸ್ವಾಮಿ ಎಂದು ಯಡಿಯೂರಪ್ಪ ಸಭೆಯಲ್ಲಿ ಕೂತಿದ್ದ ಮಹದಾಯಿ ಹೋರಾಟಗಾರರು ಅದೆಷ್ಟು ನೋವು ಉಂಡುತ್ತಿದ್ದರೋ ಏನೋ?