ಯಡಿಯೂರಪ್ಪ, ಈಶ್ವರಪ್ಪ ಮನಸ್ತಾಪಕ್ಕೆ ತುಪ್ಪ ಸುರಿದ ಆಯನೂರು
ಶಿವಮೊಗ್ಗ, ಜ 19: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಹಿರಂಗ ಬಿಕ್ಕಟ್ಟನ್ನು ಶಮನಗೊಳಿಸುವುದಕ್ಕೆ ಪ್ರಯತ್ನಿಸುವುದನ್ನು ಬಿಟ್ಟು, ಪಕ್ಷದ ಹಿರಿಯ ಮುಖಂಡ ಆಯನೂರು ಮಂಜುನಾಥ್ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾರೆ.
ಗುರುವಾರ (ಜ 19) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆಯನೂರು, ಈಶ್ವರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ಪಕ್ಷ ಮುಂದಿನ ಚುನಾವಣೆಯಲ್ಲಿ 160ಕ್ಕೂ ಹೆಚ್ಚಿನ ಸ್ಥಾನವನ್ನು ಗೆಲ್ಲುವುದು ಖಚಿತ ಎಂದು ವ್ಯಂಗ್ಯವಾಡಿದ್ದಾರೆ. (ಬಿಎಸ್ವೈ, ಈಶ್ವರಪ್ಪ ಮುನಿಸು ತಗ್ಗಿಸಲು ಆರೆಸ್ಸೆಸ್ ಕೂಡಾ ವಿಫಲ)
ರಾಜ್ಯ ಬಿಜೆಪಿ ಘಟಕದಲ್ಲಿ ಸದ್ಯ ನಡೆಯುತ್ತಿರುವ ಬಹಿರಂಗ ಮನಸ್ತಾಪವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಆಯನೂರು, ಬಿ ಎಸ್ ಯಡಿಯೂರಪ್ಪನವರು ಈ ಕೂಡಲೇ ರಾಜ್ಯಾಧಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಣಕವಾಡಿದ್ದಾರೆ.
ಯಡಿಯೂರಪ್ಪನವರ ವೈಯಕ್ತಿಕ ವರ್ಚ್ಚಸ್ಸಿನಿಂದ ಪಕ್ಷ ಗೆಲ್ಲುವುದಿಲ್ಲ ಎಂದು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಆಯನೂರು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರವನ್ನು ಈಶ್ವರಪ್ಪನವರು ಮುಂದೆ ನಿಂತು ಗೆದ್ದು ತೋರಿಸಲಿ ನೋಡೋಣ ಎಂದು ಈಶ್ವರಪ್ಪನವರಿಗೆ ಸವಾಲೆಸೆದಿದ್ದಾರೆ.
ತಮ್ಮ ಮತ್ತು ಯಡಿಯೂರಪ್ಪನವರ ನಡುವಿನ ವೈಮನಸ್ಸಿನ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಈಶ್ವರಪ್ಪ, ಬಿಜೆಪಿಯಲ್ಲಿದ್ದಾಗ ಮಾತ್ರ ಯಡಿಯೂರಪ್ಪನವರು ಸಿಂಹ. ಕೆಜೆಪಿಯಲ್ಲಿ ಇದ್ದಾಗ ಅಲ್ಲ.
ಅವರು ನಿಜವಾಗಿಯೂ ಸಿಂಹವಾಗಿದ್ದರೆ, ಕೆಜೆಪಿಯೂ ಕಳೆದ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ಮಾಡಬೇಕಿತ್ತು, ಯಾಕೆ ಮಾಡಿಲ್ಲ ಎಂದು ಈಶ್ವರಪ್ಪ ಖಾರವಾಗಿ ಉತ್ತರಿಸಿದ್ದರು.