ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?
ಬೆಂಗಳೂರು, ಜ. 9: ಭಟ್ಕಳ ನಿವಾಸಿಗಳೆಲ್ಲ ಕೆಲವೇ ವರ್ಷಗಳ ಹಿಂದೆ ಉಗ್ರವಾದದ ಕಳಂಕಕ್ಕೆ ಬೆದರಿದವರು. ಭಟ್ಕಳ್ ಸಹೋದರರ ಕಾರಣದಿಂದ ಇಲ್ಲಿನ ಅನೇಕ ಮುಗ್ಧ ನಿವಾಸಿಗಳೂ ಪೊಲೀಸರ ವಿಚಾರಣೆ ಎದುರಿಸಬೇಕಾಯಿತು. ಈಗ ಮತ್ತೆ ಮೂವರು ಬಂಧನಕ್ಕೊಳಗಾಗಿದ್ದಾರೆ.
ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ನೀಡಿರುವ ಮಾಹಿತಿಯಂತೆ ಬಂಧಿತ ಸೈಯದ್ ಇಸ್ಮೈಲ್ ಅಫಾಕ್ (34), ಸದ್ದಾಂ ಹುಸೇನ್ (35) ಹಾಗೂ ಅಬ್ದುಸ್ ಸುಬುರ್ (24) ಎಂಬ ಎಂಬಿಎ ವಿದ್ಯಾರ್ಥಿ ಮೂಲತಃ ಭಟ್ಕಳದವರು. ಅಲ್ಲದೆ, ಇವರೆಲ್ಲ ಅನ್ಸರ್-ಉಲ್-ತವಹಿದ್ ಸಂಘಟನೆಗೆ ಕಾರ್ಯಕರ್ತರನ್ನು ನೇಮಿಸುತ್ತಿರುವ ಮೂಲತಃ ಭಟ್ಕಳದವನೇ ಆದ ಸುಲ್ತಾನ್ ಅರ್ಮರ್ ಎಂಬುವನೊಂದಿಗೆ ಸಂಪರ್ಕ ಹೊಂದಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸತ್ತಿದ್ದಾನೆ ಅನ್ವರ್ : ಭಟ್ಕಳ ಮೂಲದ ರಿಯಾಜ್, ಇಕ್ಬಾಲ್ ಮತ್ತು ಯಾಸಿನ್ ಅವರದ್ದು ಇಂದಿಗೂ ಭಯೋತ್ಪಾದನೆಯಲ್ಲಿ ದೊಡ್ಡ ಹೆಸರು. ಸುಲ್ತಾನ್ ಅರ್ಮರ್ನಿಂದಲೇ ಉಗ್ರವಾದ ಕೂಪಕ್ಕೆ ಬಿದ್ದ ಅನ್ವರ್ ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ ಸಾವಿಗೀಡಾಗಿದ್ದಾನೆ. ಇದಕ್ಕೂ ಮೊದಲು ದುಬೈನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಅನ್ಸರ್-ಉಲ್-ತವಹಿದ್ ಮೂಲಕ ಅಫ್ಘಾನಿಸ್ತಾನ ತಲುಪಿದ್ದ. [ಉಗ್ರರ ವಿರುದ್ಧ ಹೋರಾಟ ಭಾರತಕ್ಕೆ ಅಸಾಧ್ಯವೇ?]
2013ರ ವರೆಗೂ ಕುಟುಂಬದವರೊಂದಿಗೆ ಅನ್ವರ್ ನಿರಂತರ ಸಂಪರ್ಕದಲ್ಲಿದ್ದ. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಕಣ್ಮರೆಯಾದ, ದೂರವಾಣಿ ಕರೆ ಮಾಡುವುದನ್ನೂ ನಿಲ್ಲಿಸಿದ ಎಂದು ಆತನ ಕುಟುಂಬದವರು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ. ಇಂಡಿಯನ್ ಮುಜಾಹಿದೀನ್ ಹಾಗೂ ಐಎಸ್ಐ ಸಂಬಂಧ ಹಳಸಿದ ಮೇಲೆ ಯಾಸಿನ್ ಹಾಗೂ ಅರ್ಮರ್ ಕೂಡ ಬೇರೆಯಾದರು.
ಎಲ್ಲದಕ್ಕೂ ಮೂಲ ಚಿತ್ತರಂಜನ್ ಕೊಲೆ : ರಿಯಾಜ್ ಭಟ್ಕಳ್ ಹೆಸರು ಮೊದಲು ಹೊರಬಂದಿದ್ದು ಡಾ. ಚಿತ್ತರಂಜನ್ ಕೊಲೆ ಪ್ರಕರಣದಲ್ಲಿ. ಆಗ ಭಟ್ಕಳದಲ್ಲಿ ಸಂಭವಿಸಿದ ಗಲಭೆಯ ಲಾಭವನ್ನು ಪಾಕಿಸ್ತಾನದ ಐಎಸ್ಐ ಬಳಸಿಕೊಂಡಿತು. [ಶಂಕಿತರಲ್ಲಿ ಓರ್ವ ಎಂಬಿಎ ವಿದ್ಯಾರ್ಥಿ]
ರಿಯಾಜ್ ತನ್ನ ಸಹೋದರನೊಂದಿಗೆ ಭಯೋತ್ಪಾದನೆಗಿಳಿದದ್ದು ಹಣಕ್ಕಾಗಿ ಎನ್ನಲಾಗಿದೆ. ಐಎಸ್ಐ ನೀಡಿದ ಭಾರೀ ಮೊತ್ತಕ್ಕೆ ತಮ್ಮನ್ನು ಮಾರಿಕೊಂಡ ರಿಯಾಜ್, ಇಕ್ಬಾಲ್ ಹಾಗೂ ಯಾಸಿನ್ ಸೇರಿ ಇಂಡಿಯನ್ ಮುಜಾಹಿದೀನ್ ಹುಟ್ಟುಹಾಕಿ ಭಾರತದಲ್ಲಿ ಹಲವು ಸ್ಫೋಟಗಳನ್ನು ನಡೆಸಿದರು.
ಬಿರಿಯಾನಿ ಜಾಗದಲ್ಲಿ ಬಾಂಬ್ : ಕೇವಲ 20 ವರ್ಷಗಳ ಹಿಂದಿನ ಮಾತು. ಭಟ್ಕಳ ಎಂಬ ಕರಾವಳಿ ಪ್ರದೇಶ ಕಡಿಮೆ ದರದಲ್ಲಿ ವಿದೇಶಿ ವಾಕ್ಮನ್ ಖರೀದಿಗೆ ಹಾಗೂ ಸ್ವಾದಿಷ್ಟಕರ ಬಿರಿಯಾನಿಗೆ ಪ್ರಸಿದ್ಧವಾಗಿತ್ತು. ಆದರೆ, ಡಾ. ಚಿತ್ತರಂಜನ್ ಹತ್ಯೆ ನಂತರ ನಡೆದ ತೀವ್ರ ಕೋಮುಸಂಘರ್ಷ ಭಟ್ಕಳವನ್ನು ಉಗ್ರರ ಕಾರಸ್ಥಾನವಾಗಿ ಬದಲಾಯಿಸಿತು. [ಉಗ್ರರಿಗೆ ಬಹುಮಾನ ಘೋಷಿಸಿದ ಖುರೇಶಿಗಾಗಿ ಹುಡುಕಾಟ]
ಉಗ್ರ ರಿಯಾಜ್ನ ಅಡ್ಡ ಹೆಸರು ಮೂಲತಃ ಶಾಬಂದ್ರಿ ಎಂದಾಗಿತ್ತು. ಯಾಸಿನ್ ಕೂಡ ಸಿದ್ದಿಬಪ್ಪಾ ಆಗಿದ್ದ. ಆದರೆ, ಇವರಿಗೆ ಭಟ್ಕಳ್ ಎಂಬ ಅಡ್ಡ ಹೆಸರು ಸೇರಿಸಿದ ಕಾರಣ ಸ್ಥಳೀಯರೆಲ್ಲ ಭಯೋತ್ಪಾದನೆಯ ಕಳಂಕ ಹೊತ್ತಿರುವಂತೆ ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ. ಭಾರತೀಯ ಗೂಢಚಾರರು ಇಲ್ಲಿ ಯಾವಾಗಲೂ ತಿರುಗುತ್ತಿರುತ್ತಾರೆ.
ಮೊದಲು ಬಿರಿಯಾನಿಗೆ ಹೆಸರಾಗಿದ್ದ ಈ ಪ್ರದೇಶ ಈಗ ಭಟ್ಕಳ್ ಸಹೋದರರ ಕಾರಣದಿಂದ ಕಳಂಕಿತವಾಗಿದೆ ಎಂಬುದು ಇಲ್ಲಿನ ಹಿಂದೂ ಹಾಗೂ ಮುಸ್ಲಿಮರು ಬೇಸರ ವ್ಯಕ್ತಪಡಿಸಿದ್ದಾರೆ.