ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಜನರ ಕಿವಿಗೆ ’ಹೂ’
ಬೆಂಗಳೂರು, ಡಿ 27: ರಾಷ್ಟೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ರಾಜ್ಯದ ಜನರ ಕಿವಿಗೆ ಹೂ ಇಡುತ್ತಿದ್ದಾರೆ. ನಾವು ಮಾಡದ ತಪ್ಪನ್ನು ನಮ್ಮ ಪಕ್ಷದ ಮೇಲೆ ಹೊರೆಸಿ ನಮ್ಮ ಕಿವಿಗೂ ಹೂ ಇಡುಲು ಪ್ರಯತ್ನಿಸುತ್ತಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಶನಿವಾರ (ಡಿ 27) 2015ರ ಡೈರಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಮಠದ ಮೇಲಿನ ನಿಯಂತ್ರಣ ಮಸೂದೆಗೆ ಹಿಂದಿನ ಜೆಡಿಎಸ್ - ಬಿಜೆಪಿ ಸ್ಮಮ್ಮಿಶ್ರ ಸರಕಾರ ಕಾರಣವೆಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ.
ಇದಕ್ಕೆ ಸತ್ಯಕ್ಕೆ ದೂರವಾದ ಮಾತು, ಮೊದಲು ಮುಖ್ಯಮಂತ್ರಿಗಳು ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಮಠಗಳಿಗೆ ಸಂಬಂಧಿಸಿದ ವಿಧೇಯಕದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. (ಮಠ ಮಸೂದೆ ವಾಪಸ್ ಪಡೆಯಲು ವೀರಶೈವರ ಆಗ್ರಹ)
ಕಾರ್ಯಕ್ರಮದಲ್ಲಿ ಎಚ್ಡಿಕೆ ಮಾತನಾಡುತ್ತಾ, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮುಜರಾಯಿ ಖಾತೆ ಬಿಜೆಪಿಯ ಹಿಡಿತದಲ್ಲಿತ್ತು. ಆ ಮಸೂದೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. 2011ರಲ್ಲಿ ಬಿಜೆಪಿ ಸರಕಾರವಿದ್ದಾಗ ದಿವಂಗತ ಡಾ. ವಿ ಎಸ್ ಆಚಾರ್ಯ ಅವರು ಈ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದರು.
ಮಠಗಳಿಗೆ, ಮತ್ತು ಜನರಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಕೈಹಾಕಲು ಹೋಗಿಲ್ಲ. ಮೊದಲು ಎರಡು ರಾಷ್ಟೀಯ ಪಕ್ಷಗಳು ಜನರ ಕಿವಿಗೆ ಹೂವು ಇಡುವುದನ್ನು ನಿಲ್ಲಿಸಲಿ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ 2014ನ್ನು ಬೆಳಗಾವಿ ಅಧಿವೇಶನದಲ್ಲಿ ಸರಕಾರ ಮಂಡಿಸಿತ್ತು.
ನಾಡಿನ ಮಠಾಧೀಶರು ಮತ್ತು ಧಾರ್ಮಿಕ ಮುಖಂಡರು ಮಸೂದೆಯ ವಿರುದ್ದ ತಿರುಗಿ ಬಿದ್ದಾಗ, ಇದು 'ಸಮ್ಮಿಶ್ರ ಸರಕಾರ ಕೂಸೆಂದು' ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಯಚಂದ್ರ, ಬಿಜೆಪಿ ಮತ್ತು ಜೆಡಿಎಸ್ ಮೇಲೆ ಈ ಆರೋಪವನ್ನು ಹೊರಿಸಿದ್ದರು.
ಬೆಳಗಾವಿಯಲ್ಲಿ ಮಂಡಿಸಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಹಿಂದಕ್ಕೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಶುಕ್ರವಾರ (ಡಿ 26) ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಡೈರಿ ಬಿಡುಗಡೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ವೈ ಎಸ್ ವಿ ದತ್ತಾ, ಕುಪೇಂದ್ರ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.