ಭಟ್ಕಳ ಪ್ರಕರಣ : ಎಲ್ಲಿಗೆ ಬಂತು ಪೊಲೀಸರ ತನಿಖೆ?
ಉಗ್ರರೊಂದಿಗೆ ಸಂಬಂಧ ಹೊಂದಿರುವ ಆರೋಪದ ಮೇಲೆ ಭಟ್ಕಳದಲ್ಲಿ ಪೊಲೀಸರು ಬಂಧಿಸಿರುವ ಡಾ. ಸೈಯದ್ ಇಸ್ಮೈಲ್ ಅಫಾಕ್ ಬಂಧನ ಪೊಲೀಸರಿಗೆ ಗೊಂದಲ ಮೂಡಿಸುತ್ತಿದೆ. ಆತ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಕುರಿತೂ ಸಾಕಷ್ಟು ಗೊಂದಲವಿದೆ.
ಬಂಧಿತ ಡಾ. ಅಫಾಕ್ ಮಾಫಿದಾರನಾಗಲು ಒಪ್ಪಿಕೊಂಡಿದ್ದು, ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಅಫಾಕ್ ಪರ ವಕೀಲ ಅಕ್ಮಲ್ ರಿಜ್ವಿ ಈ ಕುರಿತು ತಮಗೇನೂ ಮಾಹಿತಿ ಇಲ್ಲ ಎಂದಿದ್ದಾರೆ.
ಮಾಫಿದಾರನಾಗಲು ಒಪ್ಪಿಕೊಳ್ಳುವುದು ಎಂದರೆ ಓರ್ವ ವ್ಯಕ್ತಿ ತನ್ನ ತಪ್ಪಿನ ಕುರಿತು ಪಶ್ಚಾತ್ತಾಪ ಪಡುವುದು ಹಾಗೂ ತನ್ನ ಅಪರಾಧವನ್ನು ಒಪ್ಪಿಕೊಳ್ಳುವುದು ಎಂದರ್ಥ. ಓರ್ವ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡು ಮಾಫಿದಾರನಾಗಲು ಬಯಸಿದಲ್ಲಿ ನ್ಯಾಯಾಲಯದಲ್ಲೂ ಆತನ ಮೇಲೆ ಕನಿಕರ ತೋರಲಾಗುತ್ತದೆ.
ಉಗ್ರ ಚಟುವಟಿಕೆಯ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿರುವ ಹಲವರಲ್ಲಿ ಡಾ. ಅಫಾಕ್ ಮಾಫಿದಾರನಾಗಲು ಒಪ್ಪಿದಲ್ಲಿ ಪ್ರಕರಣ ಇನ್ನಷ್ಟು ಶಕ್ತಿಯುತಗೊಳ್ಳುತ್ತದೆ ಹಾಗೂ ಅಪರಾಧಿಗಳನ್ನು ಹಿಡಿಯಲು ಸುಲಭವಾಗುತ್ತದೆ.
ಅಫಾಕ್ ಕುಟುಂಬಕ್ಕೆ ವಿಷಯ ಗೊತ್ತಿಲ್ಲ : ಅಫಾಕ್ ತನ್ನ ತಪ್ಪು ಒಪ್ಪಿಕೊಂಡು ಮಾಫಿದಾರನಾಗಲು ಬಯಸಿದ್ದಾನೆ ಎಂದು ಹಲವು ಅಧಿಕಾರಿಗಳು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ಆದರೆ, ಆತನ ವಕೀಲರು ಹಾಗೂ ಕುಟುಂಬದವರು ಇದನ್ನು ಒಪ್ಪಲು ತಯಾರಿಲ್ಲ.
ಈ ಪ್ರಕರಣ ಅತ್ಯಂತ ನಿಧಾನವಾಗಿ ಪ್ರಗತಿ ಕಾಣುತ್ತಿದೆ. ಅವರ ಬಂಧನದ ಸಂದರ್ಭ ಹಲವು ಪ್ರಾಥಮಿಕ ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಪೊಲೀಸರು ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ.
ಅಫಾಕ್ ಸೇರಿದಂತೆ ಭಟ್ಕಳದ ಈ ಯುವಕರು ಮುಂಬೈ 13/7 ಹಾಗೂ ದಿಲ್ಸುಖ್ನಗರ ಸ್ಫೋಟ ಪ್ರಕರಣಗಳಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ.
ಸಿಗುತ್ತಿಲ್ಲ ಬೇರೆ ರಾಜ್ಯಗಳ ಸಹಕಾರ : ಆದರೆ, ಈ ಕುರಿತು ಮಹಾರಾಷ್ಟ್ರ ಎಟಿಎಸ್ ಹಾಗೂ ಹೈದರಾಬಾದ್ ಪೊಲೀಸರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಇಲ್ಲಿಗೆ ಬಂದು ತನಿಖೆ ನಡೆಸಿದ್ದರೂ ಆರೋಪಿಗಳನ್ನು ವಶಕ್ಕೆ ಪಡೆಯಲಿಲ್ಲ.
ಆರೋಪಿಗಳು ಇಂಡಿಯನ್ ಮುಜಾಹಿದೀನ್ ಜೊತೆ ಸೇರಿ ಹಲವು ರಾಜ್ಯಗಳಲ್ಲಿ ಚಟುವಟಿಕೆ ನಡೆಸಿದ್ದರು. ಆದ್ದರಿಂದ ಉಳಿದ ರಾಜ್ಯಗಳ ಸಹಾಯವೂ ಅತ್ಯಗತ್ಯವಾಗಿರುತ್ತದೆ.
ನವದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ ಹಾಗೂ ತೆಲಂಗಾಣದಲ್ಲಿ ಸಾಕಷ್ಟು ಬೆಂಬಲ ಸಿಗದಿದ್ದರೆ ಪ್ರಕರಣದಲ್ಲಿ ಪ್ರಗತಿ ಕಾಣುವುದು ಅತ್ಯಂತ ಕಠಿಣವಾಗಲಿದೆ.
ಬಂಧಿತ ಅಫಾಕ್ ಮಾಫಿದಾರನಾಗಲು ಒಪ್ಪಲಿಲ್ಲ. ಆದ್ದರಿಂದ ಭಟ್ಕಳಕ್ಕೆ ತೆರಳು ಇನ್ನಷ್ಟು ಆರೋಪಿಗಳನ್ನು ಬಂಧಿಸಿ ತರಲಾಯಿತು. ಆದರೆ, ಅವರೂ ಅಫಾಕ್ ವಿರುದ್ಧ ಮಾಫಿದಾರರಾಗಲು ಒಪ್ಪಲಿಲ್ಲ. ಅಲ್ಲದೆ, ಅಫಾಕ್ ಯಾರೆಂಬುದೇ ತಮಗೆ ತಿಳಿದಿಲ್ಲ ಎಂದರು.
ಪೊಲೀಸರಿಗಿದೆ ವಿಶ್ವಾಸ : ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ "ಇದೊಂದು ಕ್ಲಿಷ್ಟಕರ ಪ್ರಕರಣವಾಗಿದೆ. ಏಕೆಂದರೆ ದಿಲ್ಸುಖ್ನಗರದಂತಹ ಪ್ರಕರಣಗಳು ನಾಲ್ಕು ವರ್ಷಗಳ ಹಿಂದೆಯೇ ನಡೆದಿವೆ. ಈ ಸಮಯದಲ್ಲಿ ಹಲವು ಸಾಕ್ಷ್ಯಗಳು ಮುಚ್ಚಿಹೋಗಿವೆ. ಆದ್ದರಿಂದ ಪ್ರಕರಣ ದಾಖಲಿಸುವುದು ಕಷ್ಟವಾಗುತ್ತಿದೆ" ಎಂದಿದ್ದಾರೆ.
"ಈ ಪ್ರಕರಣದಲ್ಲಿ ಪ್ರಗತಿ ಸಾಧಿಸುವುದು ನಿಧಾನವಾಗುತ್ತದೆ. ಆದರೆ, ಪ್ರಕರಣ ಬಯಲಿಗೆಳೆದು ಈ ಯುವಕರನ್ನು ನ್ಯಾಯಾಂಗದೆದುರು ನಿಲ್ಲಿಸುವ ವಿಶ್ವಾಸವಿದೆ. ಬಂಧಿತ ಯುವಕರು ಅಪರಾಧದಲ್ಲಿ ಭಾಗವಹಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಹೇಳಿದ್ದಾರೆ.