ಭಟ್ಕಳ ಬಂದ್ ಕರೆ ವಾಪಸ್, ಅನ್ಯಾಯವಾದರೆ ಪ್ರತಿಭಟಿಸುವ ಎಚ್ಚರಿಕೆ
ಭಟ್ಕಳ, ಜ. 12: ಭಯೋತ್ಪಾದನೆ ಚಟುವಟಿಕೆ ಆರೋಪದಲ್ಲಿ ಮೂವರ ಬಂಧನ ಖಂಡಿಸಿ ಸೋಮವಾರ ನೀಡಿದ್ದ ಭಟ್ಕಳ ಬಂದ್ ಕರೆಯನ್ನು ಮಜ್ಲಿಸ್-ಇಸ್ಲಾಹ್-ಓ-ತಂಜೀಂ ಸಂಘಟನೆ ವಾಪಸ್ ಪಡೆದಿದೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸಂಘಟನೆಯ ಮುಖಂಡರ ಜೊತೆ ಸಭೆ ನಡೆಸಿ ಬಂದ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸಂಘಟನೆ ಅಧ್ಯಕ್ಷ ಮೊಹಮ್ಮದ್ ಮುಜಾಮ್ಮೀಲ್ ಖಾಜಿಯಾ, "ಪ್ರಕರಣದಲ್ಲಿ ನಿಸ್ಪಕ್ಷಪಾತ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಉದ್ದೇಶಿತ ಪ್ರತಿಭಟನೆಯು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಬಹುದೆಂದು ವಾಪಸ್ ಪಡೆದಿದ್ದೇವೆ. ಒಂದು ವೇಳೆ ಬಂಧಿತರಿಗೆ ಅನ್ಯಾಯವಾದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ. [ಹಣ ಉಳಿಸಲು ಹೋಗಿ ಸಿಕ್ಕಿಬಿದ್ದ ರಿಯಾಜ್]
"ಉಗ್ರರನ್ನು ಬಂಧಿಸಿರುವುದು ಸಂಶಯಾಸ್ಪದವಾಗಿದೆ. ಭಟ್ಕಳವು ಉಗ್ರರ ಅಡಗುತಾಣ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಆರೋಪಿಸಿದ್ದ ಮಜ್ಲಿಸ್-ಇಸ್ಲಾಹ್-ಓ-ತಂಜೀಂ ಸಂಘಟನೆ ಸೋಮವಾರ ಭಟ್ಕಳ ಬಂದ್ಗೆ ಕರೆ ನೀಡಿತ್ತು.
ರಿಯಾಜ್ ಅಂಥವನಲ್ಲ : ಈ ಮಧ್ಯೆ ಮಂಗಳೂರಿನಲ್ಲಿ ಬಂಧಿತ ರಿಯಾಜ್ ಅಹ್ಮದ್ ಸಯೀದಿ ತಂದೆ ಖ್ವಾಜಾ ಸಯೀದಿ ಭಾನುವಾರ ಮಾತನಾಡಿ, "ನನ್ನ ಮಗ ತಪ್ಪು ಮಾಡಿಲ್ಲ. ನನ್ನ ಮಗನ ಮೇಲೆ ಯಾವ ಪ್ರಕರಣ ದಾಖಲಿಸಲಾಗಿದೆ ಎಂಬುದೂ ನಮಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ. [ಕರ್ನಾಟಕದಲ್ಲಿ ಟೆರರಿಸಂ ತನಿಖೆ : ಎನ್ಐಎ ವಿಳಂಭ ನೀತಿ]
"ಸಿಸಿಬಿ ಪೊಲೀಸರು ಭಾನುವಾರ ನಮ್ಮ ಮನೆಗೆ ಬಂದ ಮೇಲೆಯೇ ರಿಯಾಜ್ ಸಯೀದಿ ಬಂಧನ ನಮಗೆ ತಿಳಿದಿದೆ. ದುಬೈನಲ್ಲಿ ವಾಸಿಸುತ್ತಿದ್ದ ರಿಯಾಜ್ ರಜೆಗಾಗಿ 2-14ರ ಡಿಸೆಂಬರ್ 8ರಂದು ಭಟ್ಕಳ್ಗೆ ಬಂದಿದ್ದ. ವಿಮಾನ ಟಿಕೆಟ್ ದರ ಹೆಚ್ಚಿದ್ದ ಕಾರಣ ದುಬೈ ಪ್ರಯಾಣವನ್ನು ಮುಂದೂಡಿದ್ದ" ಎಂದು ತಿಳಿಸಿದ್ದಾರೆ. [ಭಟ್ಕಳ ಮೂಲದ ನಾಲ್ಕನೇ ಶಂಕಿತ ಉಗ್ರ ಬಲೆಗೆ]
ರಿಯಾಜ್ ಸಹೋದರಿಯರಾದ ನಫೀಜಾ ಹಾಗೂ ನಫಿಯಾ ಪ್ರತಿಕ್ರಿಯಿಸಿ, "ನಮ್ಮ ಸಹೋದರ ಒಳ್ಳೆಯ ವ್ಯಕ್ತಿ. ಪೊಲೀಸರು ತಪ್ಪು ಮಾಹಿತಿಯ ಮೇಲೆ ಆತನನ್ನು ಬಂಧಿಸಿದ್ದಾರೆ" ಎಂದು ಸಮರ್ಥಿಸಿಕೊಂಡಿದ್ದಾರೆ. [ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]