ಕಲ್ಲಪ್ಪ ಆತ್ಮಹತ್ಯೆ ಹಿಂದೆ ಭಜರಂಗಿಗಳ ಕೈವಾಡ : ಪರಮೇಶ್ವರ
ಬೆಂಗಳೂರು, ಜುಲೈ 21: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಪೋಷಣೆಯ ಭಜರಂಗದಳದವರ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ ತೇಜಸ್ ಗೌಡ ಕಿಡ್ನಾಪ್ ಹಾಗೂ ಕಲ್ಲಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಲ್ಲಿ ಒಬ್ಬರಾದ ಭಜರಂಗ ದಳದ ಮುಖಂಡ ಅಭಿರಾಮ್ ರನ್ನು ಸಿಐಡಿ ತಂಡ ಬಂಧಿಸಿದೆ. ಆದರೆ, ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯ ಇನ್ನೂ ನಾಪತ್ತೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ.[ಕಲ್ಲಪ್ಪ ಹಂಡಿಭಾಗ್ ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ]
ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರನ್ನು ಈ ಬೆಟ್ಟಿಂಗ್ ಜಾಲ, ಚಿಟ್ ಫಂಡ್ ವ್ಯವಹಾರದಲ್ಲಿ ಸಿಲುಕಿ ಹಾಕುವಂತೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣ ಮಾಡಿದವರಲ್ಲಿ ಭಜರಂಗದಳದವರ ಕೈವಾಡವಿರುವ ಬಗ್ಗೆ ತನಿಖೆ ನಡೆಯುತ್ತಿದೆ.[ಕಲ್ಲಪ್ಪ ಆತ್ಮಹತ್ಯೆ ಪ್ರಕರಣ: ಸಿಐಡಿಗೆ ಮಾಹಿತಿ ನೀಡುವುದು ಹೇಗೆ?]
ಪ್ರಕರಣದ ಬಗ್ಗೆ ಇಬ್ಬರು ಭಜರಂಗದಳದ ಪ್ರಮುಖರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಪ್ರವೀಣ್ ಖಾಂಡ್ಯ ಸೇರಿದಂತೆ ಮತ್ತಿಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇವರ ಬಂಧನದ ನಂತರ ಸತ್ಯಾಂಶ ಹೊರಬರಲಿದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಸತ್ಯಾಂಶ ಹೊರತರಲು ಸರ್ಕಾರ ಬದ್ಧವಾಗಿದೆ. ಆದರೆ, ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಅವರ ಮೇಲೆ ಯಾವುದೇ ಒತ್ತಡವಿರಲಿಲ್ಲ. ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.[ಹಂದಿಗುಂದಿ ಗ್ರಾಮದ ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ]
ಭಜರಂಗಿಗಳ ಗೆಳತನವೇ ಮುಳುವಾಯಿತೇ?: ಡಿವೈಎಸ್ಪಿ ಕಲ್ಲಪ್ಪ ಅವರು ಜಿಲ್ಲೆಯ ಜನಪ್ರಿಯ ಶಾಸಕ ಸಿಟಿ ರವಿ, ಹಿಂದೂಪರ ಸಂಘಟನೆ ಮುಖಂಡ ಪ್ರವೀಣ್ ಖಾಂಡ್ಯ, ಕಲ್ಮನೆ ಚಿಟ್ ಫಂಡ್ ನಟರಾಜ್, ಬೆಟ್ಟಿಂಗ್ ಪರಿಣಿತ ತೇಜಸ್ ಗೌಡ ಎಲ್ಲರಿಗೂ ಪರಸ್ಪರ ಗುರುತು ಪರಿಚಯ ಚೆನ್ನಾಗೇ ಇತ್ತು. ಈ ಪ್ರಕರಣದಲ್ಲಿ ಸಿಟಿ ರವಿಯಾಗಲಿ, ಪ್ರವೀಣ್ ಖಾಂಡ್ಯ ಅವರಾಗಲಿ ನೇರವಾಗಿ ಭಾಗಿಯಾಗಿರುವುದಕ್ಕೆ ಸಾಕ್ಷಿಗಳಿಲ್ಲ.
ಆದರೆ, ಪ್ರವೀಣ್ ರನ್ನು ಬಿಜೆಪಿ ಶಾಸಕರು ರಕ್ಷಿಸುತ್ತಿದ್ದಾರೆ ಎಂಬ ಆರೋಪವಿದೆ. ಅಲ್ಲದೆ, ತೇಜಸ್ ಗೌಡ ಕಿಡ್ನಾಪ್ ಮಾಡಿದ್ದು ಕೂಡಾ ಪ್ರವೀಣ್ ಖಾಂಡ್ಯ ಕಡೆ ಹುಡುಗರು ಎಂಬ ಸುದ್ದಿಯಿದೆ. ತೇಜಸ್ ನೀಡಬೇಕಿದ್ದ ಲಕ್ಷಾಂತರ ರುಪಾಯಿ ನಗದನ್ನು ನಟರಾಜ್ ಗೆ ಕೊಡಿಸುವುದಷ್ಟೆ ಕಲ್ಲಪ್ಪ ಅವರ ಕೆಲಸವಾಗಿತ್ತು. ಗೆಳೆತನದಲ್ಲಿ ನೆರವು ನೀಡಲು ಮುಂದಾದ ಕಲ್ಲಪ್ಪ ಕೊನೆಗೆ ಬಲಿಪಶು ಆಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.