ಜಾಲತಾಣದಲ್ಲಿ ದೇವೇಗೌಡರಿಗೆ ಅವಹೇಳನ, ಕಾರ್ಯಕರ್ತರಿಂದ ಆಕ್ರೋಶ
ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿ ಬೆಂಗಳೂರು ನಗರ ಯುವ ಜೆಡಿಎಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಈ ಕುರಿತು ದೂರು ಕೂಡಾ ದಾಖಲಿಸಿದ್ದಾರೆ.
ಬೆಂಗಳೂರು, ಮಾರ್ಚ್ 28: ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿ ಬೆಂಗಳೂರು ನಗರ ಯುವ ಜೆಡಿಎಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಈ ಕುರಿತು ದೂರು ಕೂಡಾ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಮೂಲದ 'ಜಗದೀಶ್ ಗೌಡ ಗುಡ್' ಎನ್ನುವ ಫೇಸ್ಬುಕ್ ಅಕೌಂಟಿನಲ್ಲಿ 'ದೇಶದ್ರೋಹಿ ದೇವೇಗೌಡ' ಎಂದು ಬರೆದಿದ್ದಾರೆ ಎನ್ನಲಾಗಿದೆ. ದೇವೇಗೌಡರವರ ವಿರುದ್ಧ ಅಸಭ್ಯ ವಾಗಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಜಗದೀಶ್ ನನ್ನು ಕೂಡಲೇ ಬಂಧಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.[ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಜೆಡಿಎಸ್]
ಇಂದು ಬೆಂಗಳೂರಿನ ಮೌರ್ಯ ಹೊಟೇಲ್ ಬಳಿಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬೆಂಗಳೂರು ಯುವ ಜನತಾ ದಳ ಕಾರ್ಯಕರ್ತರು ಜಗದೀಶ್ ಗೌಡ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜೆಡಿಎಸ್ ನಗರ ಯುವ ಜನತಾದಳ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪೊಲೀಸ್ ಮಹಾ ನಿರ್ದೇಶಕರು ಹಾಗು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ ಆತನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ದಕ್ಷಿಣ ಕನ್ನಡದಲ್ಲೂ ದೂರು ದಾಖಲು
ಇದೇ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಕೂಡಾ ಪೊಲೀಸರಿಗೆ ದೂರು ನೀಡಿದೆ.[ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ- ಕುಮಾರಸ್ವಾಮಿ]
ಫೇಸ್ಬುಕ್ ನಲ್ಲಿ ದೇವೇಗೌಡರ ಮೇಲೆ ಅವಹೇಳನಕಾರಿ ಬರಹ ನೋಡಿದ ಮಧುಸೂದನ ಗೌಡ ನೀಡಿದ ಮಾಹಿತಿಯಂತೆ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಮಂಗಳೂರು ಉತ್ತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮುಂದಿನ ವಿಚಾರಣೆಗಾಗಿ ದೂರನ್ನು ಮಂಗಳೂರು ಸಿಸಿಬಿ ಪೋಲೀಸ್ ರಿಗೆ ವರ್ಗಾವಣೆ ಮಾಡಲಾಗಿದೆ