ಬೆಂಗಳೂರು: ದಾಖಲೆ ಮುರಿದ ಭಾನುವಾರದ ಬಿಸಿಲು
ಬೆಂಗಳೂರು, ಏಪ್ರಿಲ್, 25: ಭಾನುವಾರ ಬೆಂಗಳೂರಿನ ಉಷ್ಣತೆ ಹಿಂದಿನ ದಾಖಲೆಗಳನ್ನೆಲ್ಲ ಮುರಿದು ಹಾಕಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಏಪ್ರಿಲ್ 24 ರಂದು ಬೆಂಗಳೂರಿನಲ್ಲಿ 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ವಾರಗಳ ಕಾಲ 38 ಡಿಗ್ರಿ ಉಷ್ಣತೆಯಲ್ಲಿದ್ದ ಮಹಾನಗರ ಭಾನುವಾರ ಮತ್ತಷ್ಟು ಬಿಸಿಯಾಗಿತ್ತು. ಈ ವಾರ ಸಹ ಇದೇ ಬಗೆಯಲ್ಲಿ ಬಿಸಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]
ದೇಶದ ಇತರ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ತೇವಾಂಶ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ತಾಪಮಾನ ಏರಲು ಮುಖ್ಯ ಕಾರಣವಾಗಿದೆ.
ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿದಿನ ಬಿಗಡಾಯಿಸುತ್ತಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ತುರ್ತು ಅನುದಾನ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬರ ಅಧ್ಯಯನ ನಡೆಸುತ್ತಿದ್ದಾರೆ.
ದಾಖಲೆ ಮುರಿದ ಬೆಂಗಳೂರು
ಏಪ್ರಿಲ್ನಲ್ಲಿ ಸಾಮಾನ್ಯವಾಗಿ ಬೆಂಗಳೂರಿನ ಉಷ್ಣಾಂಶ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಇರುತ್ತಿತ್ತು. ಆದರೆ, ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. 1931ರಲ್ಲಿ 38.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದ್ದರೆ ಭಾನುವಾರದ ಬಿಸಿ ಎಲ್ಲ ದಾಖಲೆಗಳನ್ನು ಮೀರಿ ನಿಂತಿತು.
ಸುಡುತ್ತಿದೆ ಕರ್ನಾಟಕ
ರಾಯಚೂರಿನಲ್ಲಿ ಅತಿ ಹೆಚ್ಚು ಅಂದೆ 43 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮಂಡ್ಯದಲ್ಲೂ ಸಹ 39.2 ಡಿಗ್ರಿ ತಾಪಮಾನ ದಾಖಲೆಯಾಗಿದ್ದು 43 ವರ್ಷಗಳ ದಾಖಲೆಯನ್ನು ಮುರಿದು ಹಾಕಿದೆ.
ಕುಡಿಯುವ ನೀರಿಗೆ ಹಾಹಾಕಾರ
ಜನರು ಕುಡಿಯುವ ನೀರನ್ನು ಅರಸಿ ಗುಳೆ ಹೊರಟಿದ್ದಾರೆ. ಉತ್ತರ ಕರ್ನಾಟಕದ ಜನ ಮತ್ತು ಜಾನುವಾರುಗಳ ಸ್ಥಿತಿ ಹೇಳತೀರದಾಗಿದ್ದು ಕುಡಿಯುವ ನೀರು ಪೂರೈಕೆಗೆ ಸರ್ಕಾರ 100 ಕೋಟಿ ರು. ಬಿಡುಗಡೆ ಮಾಡಿದೆ.
ಸಿಎಂ ಪ್ರವಾಸ
ಸಿಎಂ ಸಿದ್ದರಾಮಯ್ಯ ಬೀದರ್, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಂದು ಸುತ್ತಿನ ಬರ ಅಧ್ಯಯನ ಪ್ರವಾಶವನ್ನು ಮುಗಿಸಿದ್ದಾರೆ. ಇನ್ನೊಂದು ಸುತ್ತಿನ ಪ್ರವಾಸಕ್ಕೂ ಅಣಿಯಾಗಿದ್ದಾರೆ. ಆದರೆ ಜನರ ಸಮಸ್ಯೆಗಳು ಮಾತ್ರ ಬಿಡಗಾಯಿಸುತ್ತಲೇ ಇದೆ.
ಮಲೆನಾಡು ಸುಡುತ್ತಿದೆ
ಮಲೆನಾಡಿನಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಶಿವಮೊಗ್ಗದಲ್ಲಿ 40 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸುಡುತ್ತಿವೆ.