ಸಿಸಿಬಿ ಪೊಲೀಸರ ಬಲಗೆ ಬಿದ್ದ ವಿಗ್ರಹ ಚೋರರು
ಬೆಂಗಳೂರು, ಸೆಪ್ಟೆಂಬರ್. 29: ಪುರಾತನ ವಿಗ್ರಹ ಹಾಗೂ ವಜ್ರ ಮಾರಾಟ ಜಾಲವನ್ನು ಬೇಧಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿ 10 ಲಕ್ಷ ರು. ಬೆಲೆ ಬಾಳುವ ಬುದ್ಧನ ವಿಗ್ರಹ, ನಗದು ಸೇರಿದಂತೆ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯ ವಿನಯ್ಕುಮಾರ್, ದಾದಾಫೀರ್, ಪ್ರಾಣೇಶ್ ಶೆಟ್ಟಿ, ಮಹಮ್ಮದ್ ದಾದಾಪೀರ್, ಬೆಂಗಳೂರಿನ ರಘು ಪ್ರಸಾದ್, ನರಸಿಂಹ, ತುಮಕೂರು ಜಿಲ್ಲೆಯ ವೆಂಕಟೇಶ್ಕುಮಾರ್, ಶಿವಮೊಗ್ಗದ ಪ್ರಕಾಶ್, ಮಂಡ್ಯದ ಅಭಿಷೇಕ್ ಬಂಧಿತರು. ಕಾಟನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.[ಈ ಎರಡು ಕೆಜಿ ಚಿನ್ನದಲ್ಲಿ ನಿಮ್ಮ ಸರವೂ ಇದೆಯಾ ನೋಡಿ?]
ಆರೋಪಿಗಳು ಪುರಾತನ ಕಾಲದ ಬುದ್ಧನ ವಿಗ್ರಹ ಹಾಗೂ ವಜ್ರಗಳನ್ನು ಬೇರೆಡೆ ಕಳ್ಳತನ ಮಾಡಿಕೊಂಡು ಬಂದು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿ ದಾದಾಫೀರ್ ವಿರುದ್ಧ 2013ನೆ ಸಾಲಿನಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ವಿಗ್ರಹ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಶಾಮೀಲಾಗಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನೊಬ್ಬ ಆರೋಪಿ ಪ್ರಾಣೇಶ್ಶೆಟ್ಟಿ ವಿರುದ್ಧ ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ವಿಗ್ರಹ ಮಾರಾಟ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 26 ರಂದು ಕಾಟನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಕಾರೊಂದನ್ನು ನಿಲ್ಲಿಸಿ ಪುರಾತನ ಕಾಳದ ಬುದ್ಧನ ವಿಗ್ರಹ ಮಾರಾಟ ಮಾಡಲು ಯತ್ನ ನಡೆಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಬೇರೆ ಬೇರೆ ಜಿಲ್ಲೆಯವರಾಗಿದ್ದು ವಿಶೇಷವಾಗಿದೆ.