ಲಾಠಿ ಚಾರ್ಜ್: ರೈತರ ಮೇಲಿನ ಎಲ್ಲ ಪ್ರಕರಣ ಹಿಂದಕ್ಕೆ
ಬೆಂಗಳೂರು, ಮಾರ್ಚ್, 05: ಬೆಂಗಳೂರಿಗೆ ನೀರು ಕೇಳಲು ಬಂದಿದ್ದ ರೈತರ ಮೇಲೆ ದಾಖಲಿಸಿರುವ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಅಲ್ಲದೇ ಮಾರ್ಚ್ 6 ರಂದು ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ.
ಗಂಭೀರ ಗಾಯಗೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಸರ್ಕಾರ ಅನ್ನದಾತನ ಸಿಟ್ಟಿಗೆ ಮಣಿದಿದೆ. ಗುರುವಾರ ನಡೆದ ರೈತರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ರಾಜ್ಯದ್ಯಾದ್ಯಂತ ಪ್ರತಿಭನಟೆಗಳು ನಡೆದವು. ವಿಪಕ್ಷಗಳು ಸರ್ಕಾರದ ಮೇಲೆ ಹರಿಹಾಯ್ದಿದ್ದವು. ಇದಕ್ಕೆ ಸರ್ಕಾರ ಅಂತಿಮವಾಗಿ ಮಣಿದಿದೆ.["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?]
ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಪ್ರಹಾರ ಆಗಿಲ್ಲ. ಶಾಂತಿ ಸುವ್ಯವಸ್ಥೆ ಮತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವುದನ್ನು ತಡೆಯಲು ರೈತರನ್ನು ನಿಯಂತ್ರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದರು.
ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಲಾಠಿ ಪ್ರಹಾರ ನಡೆದಿಲ್ಲ. ಕೇವಲ ತಳ್ಳಾಟ ಮತ್ತು ನೂಕುನುಗ್ಗಲು ನಡೆದಿದೆ ಅಷ್ಟೇ ಎಂದು ವಿಧಾನಸಭೆಯಲ್ಲಿ ಹೇಳಿದ್ದು ಮತ್ತಷ್ಟು ಕೋಲಾಹಲ ಸೃಷ್ಟಿಸಿತ್ತು.[ಒಂದು ದುರ್ಘಟನೆ: ದೇಶದ ಬೆನ್ನೆಲುಬಿಗೆ ಬಾರಿಸಿದ್ರು]
ಒಟ್ಟಿನಲ್ಲಿ ನೀರು ಕೇಳಿ ಕೊಂಡು ಬಂದ ಅನ್ನದಾತನಿಗೆ ಬೆಂಗಳೂರಲ್ಲಿ ಪೊಲೀಸರಿಂದ ಲಾಠಿ ಏಟು ಸಿಕ್ಕ ಮೇಲೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ ಗೆ ಶುಕ್ರವಾರ ಕರೆ ನೀಡಿದ್ದು ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಂಧಿಸಿದ್ದ 11 ರೈತ ಮುಂಖಂಡರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಿಡುಗಡೆ ಮಾಡಿದ್ದರು. ಅತ್ತ ದಾವಣಗೆರೆ, ಗದಗ, ಹುಬ್ಬಳ್ಳಿ-ಧಾರವಾಡದಲ್ಲೂ ನೀರಿಗೆ ಪ್ರತಿಭಟನೆ ನಡೆದಿತ್ತು.