ಬಳ್ಳಾರಿ, ವಿಜಯಪುರವನ್ನು ಮತ್ತೆ ಸೈಡ್ ಹೊಡೆದ ಕಲಬುರಗಿ
ಎಳನೀರು ತನ್ನ ಬೆಲೆಯನ್ನು ಧಿಗ್ಗನೆ ಏರಿಸಿಕೊಂಡು 35 ರುಗೆ ಬಂದು ನಿಂತಿದೆ. ಏನ್ ಸಾರ್ ರೇಟು ಜಾಸ್ತಿ ಮಾಡಿಬಿಟ್ಟಿದ್ದೀರಲ್ಲ ಎಂದು ಜನ ತಕರಾರು ತೆಗೆದರೂ ಬೇರೆ ದಾರಿಯಿಲ್ಲದೆ ಹಣ ತೆತ್ತು ಎಳನೀರು ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು, ಮೇ 13 : ಕಲಬುರಗಿಯೊಂದಿಗೆ ಪೈಪೋಟಿಗೆ ಬಿದ್ದವರಂತೆ ಸುಡುತ್ತಿದ್ದ ಬಳ್ಳಾರಿ ಮತ್ತು ಬಿಜಾಪುರಗಳು ಸ್ವಲ್ಪ ತಣ್ಣಗಾಗಿದ್ದು, ಕಲಬುರಗಿಗೆ ಮೊದಲನೇ ಸ್ಥಾನ ಬಿಟ್ಟುಕೊಟ್ಟಿವೆ. ಅಲ್ಲಿ ಶನಿವಾರ ಗರಿಷ್ಠ ತಾಪಮಾನ 40.1 ಡಿಗ್ರಿ ಸೆಲ್ಶಿಯಸ್.
ಎರಡು ದಿನಗಳ ಹಿಂದೆ 40 ದಾಟಿದ್ದ ಬಳ್ಳಾರಿಯ ತಾಪಮಾನ ಕೊಂಚ ತಣ್ಣಗಾಗಿದ್ದು, ಶನಿವಾರ ಅಲ್ಲಿ 38 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಮೂರು ದಿನಗಳ ಹಿಂದೆಯಷ್ಟೇ 41 ಗಡಿ ತಲುಪಿದ್ದ ವಿಜಯಪುರದ ತಾಪಮಾನ ಇದ್ದಕ್ಕಿದ್ದಂತೆ ತಣ್ಣಗಾಗಿದ್ದು ಶನಿವಾರ 34 ಡಿಗ್ರಿಗಿಳಿದಿದೆ.
ಇನ್ನು ಬೆಂಗಳೂರಿನಲ್ಲಿ ಬಿಸಿಲಿನ ಮೆರೆದಾಟದ ತೀವ್ರತೆ ಕಡಿಮೆಯಾಗಿದೆ. ಎರಡು ದಿನಗಳ ಹಿಂದೆ ಅಲ್ಲಲ್ಲಿ ಅಷ್ಟಿಷ್ಟು ಮಳೆಯಾಗಿದ್ದು, ಮಧ್ಯಾಹ್ನದ ಬಿಸಿಲು ಅಷ್ಟೊಂದು ನೆತ್ತು ಸುಡುತ್ತಿಲ್ಲ. ಮಳೆ ಮೋಡಗಳು ನಾಪತ್ತೆಯಾಗಿವೆ. ಆದರೆ, ನೀರಿಗಾಗಿ ಎಂದಿನಂತೆ ಪರದಾಟ ಮುಂದುವರಿಸಿದೆ. [ಕಳೆದ ವರ್ಷ ಇದೇ ದಿನ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿತ್ತು!]
ದುಬಾರಿಯಾಗಿರುವ ಎಳನೀರು : ಈಬಾರಿ ಎಳನೀರು ತನ್ನ ಬೆಲೆಯನ್ನು ಧಿಗ್ಗನೆ ಏರಿಸಿಕೊಂಡು 35 ರುಪಾಯಿಗೆ ಬಂದು ನಿಂತಿದೆ. ಏನ್ ಸಾರ್ ರೇಟು ಜಾಸ್ತಿ ಮಾಡಿಬಿಟ್ಟಿದ್ದೀರಲ್ಲ ಎಂದು ಜನ ತಕರಾರು ತೆಗೆದರೂ ಬೇರೆ ದಾರಿಯಿಲ್ಲದೆ 35 ರುಪಾಯಿ ತೆತ್ತು ಎಳನೀರು ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತಿದ್ದಾರೆ.
ದಕ್ಷಿಣ ಕರ್ನಾಟಕದಲ್ಲಿ ಮಳೆಯ ಅಂಥ ಆರ್ಭಟ ಕಂಡುಬಂದಿಲ್ಲ. ಆದರೆ, ಕರ್ನಾಟಕದ ಮಧ್ಯ ಭಾಗದಲ್ಲಿರುವ ಮಲೆನಾಡು, ಕರಾವಳಿಯ ಜಿಲ್ಲೆಗಳಲ್ಲಿ ಹಲವಾರು ಪ್ರದೇಶಗಳಲ್ಲಿ ಸುರಿದಿದೆ. ಎರಡು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಆಲಿಕಲ್ಲು ಮಳೆ ಬಿದ್ದಿತ್ತು. ಭಾರೀ ಗಾತ್ರದ ಆಲಿಕಲ್ಲುಗಳು ಧರೆಗಿಳಿದಿದ್ದವು.
ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆ : ಶುಕ್ರವಾರ ಶಿವಮೊಗ್ಗದ ಹೊಸನಗರದಲ್ಲಿ 8 ಸೆಂ.ಮೀ., ಉಡುಪಿಯ ಕೊಲ್ಲೂರು, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 3 ಸೆಂ.ಮೀ., ಉತ್ತರ ಕನ್ನಡದ ಹಳಿಯಾಳ, ಬೆಳಗಾವಿಯ ಸೆಡಬಾಳ, ಕೊಡಗಿನ ಭಾಗಮಂಡಲ, ಚಿಕ್ಕಮಗಳೂರಿನ ಕೊಪ್ಪ, ಚಿಕ್ಕಮಗಳೂರು, ಹಾಸನದ ಸಿಆರ್ ಪಟ್ಣ, ತುಮಕೂರಿನ ಬುಕ್ಕಾಪುರಗಳಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ. ಇನ್ನು ಬೆಳಗಾವಿಯ ಲೋಂಡಾ, ಹಾಸನದ ಬೇಲೂರಿನಲ್ಲಿಯೂ 1 ಸೆಂ.ಮೀ. ಮಳೆಯಾಗಿ ಇಳೆಯನ್ನು ತೋಯಿಸಿದೆ.
ವಾಡಿಕೆಗಿಂತ ಹೆಚ್ಚು ಮಳೆ : ಮತ್ತೊಂದು ಸಂಗತಿಯೆಂದರೆ, ಈ ಮೊದಲು ತಿಳಿಸಿದಂತೆ ಎಲ್ ನಿನೋ ಪ್ರಭಾವ ಕಡಿಮೆಯಾಗಿ ಈ ವರ್ಷ ಭಾರತದಲ್ಲಿ ಅಂದಾಜಿಗಿಂತ ಉತ್ತಮ ಮಳೆಯಾಗಲಿದೆ ಮತ್ತು ಆರ್ಥಿಕ ಅಭಿವೃದ್ಧಿ ಕಾಣಲಿದೆ ಭಾರತೀಯ ಹವಾಮಾನ ಇಲಾಖೆ ಸಿಹಿಸುದ್ದಿಯನ್ನು ಹಂಚಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. [ಮುಂಗಾರು ಮುನ್ಸೂಚನೆ, ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ]