ಎಲ್ಲಯ್ಯಾ ಬಿಎಸ್ವೈ, ಆಗ್ಲೇ ತಿರುಪತಿಗೆ ಕಳ್ಸಿಲ್ವಾ ಅಂದ್ರಾ ಅಶೋಕ್?
ದಿನದಿಂದ ದಿನಕ್ಕೆ ಬಿಬಿಎಂಪಿ ಚುನಾವಣಾ ಕಾವು ಏರ ತೊಡಗಿದೆ. ಜೊತೆಗೆ ಬಿಜೆಪಿಯಲ್ಲಿ ಅಸಮಾಧಾನದ ಕಿಡಿ ಭುಗಿಲೆದ್ದಿದೆ. ಬಿಜೆಪಿಯ ಹಲವು ಮುಖಂಡರು ಆದಿಯಾಗಿ, ಮಠಾಧೀಶರು ಕೂಡಾ ಅಶೋಕ್ ವಿರುದ್ದ ಅಸಮಾಧಾನ ಹೊರಗೆಡವಿದ್ದಾರೆ.
ಒಂದು ಕಾಲದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದ ಈಗಲೂ ಪಕ್ಷದ ಮಾಸ್ ಲೀಡರ್ ಯಡಿಯೂರಪ್ಪ ಮಾತಿಗೆ ಎಳ್ಳಷ್ಟೂ ಬೆಲೆಯಿಲ್ಲ ಎನ್ನುವ ಮಾತಿಗೆ ಪುಷ್ಠಿ ನೀಡುವಂತಹ ಹಲವು ಬೆಳವಣಿಗೆಗಳು ಪಕ್ಷದಲ್ಲಿ ನಡೆಯುತ್ತಲೇ ಬರುತ್ತಿದೆ.
ಬಿಬಿಎಂಪಿಯ 198 ವಾರ್ಡುಗಳ ಪೈಕಿ ಯಡಿಯೂರಪ್ಪ ತನ್ನ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಸೂಚಿಸಿದ್ದು ಕೇವಲ ಐದೋ ಅಥವಾ ಆರು ವಾರ್ಡಿಗೆ ಮಾತ್ರ.(ಕಾಂಗ್ರೆಸ್ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರ)
ಅದನ್ನೂ ಅಶೋಕ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ತಿರಸ್ಕರಿಸಿದ್ದು ಯಡಿಯೂರಪ್ಪ ಅವರ ಕಡೆಗಣನೆಗೆ ಕೊಡಬಹುದಾದ ತಾಜಾ ಉದಾಹರಣೆ ಎನ್ನುವುದು ಬಿಜೆಪಿ ವಲಯದಿಂದ ಕೇಳಿ ಬರುತ್ತಿರುವ ಸುದ್ದಿ.
ತಾನು ಸೂಚಿಸಿದ ಕೆಲವೇ ಕೆಲವು ಹೆಸರುಗಳನ್ನು ಅಶೋಕ್ ಕಡೆಗಣಿಸಿದ್ದು, ಜೊತೆಗೆ ತಾನು ರೆಕಮೆಂಡ್ ಮಾಡಿದ್ದ ಟಿಕೆಟ್ ಆಕಾಂಕ್ಷಿಯ ಜೊತೆ, ಅಶೋಕ್ ಕೀಳಾಗಿ ಮಾತನಾಡಿದ್ದು ಯಡಿಯೂರಪ್ಪ ಸಿಟ್ಟಿಗೆ ಕಾರಣವಾಗಿದೆ.
ನಿಮ್ಮ ಸಹವಾಸವೇ ಬೇಡ, ಹೇಗೂ ಲೋಕಸಭಾ ಅಧಿವೇಶನ ನಡೆಯುತ್ತಿದೆ ನಾನು ದೆಹಲಿಯಲ್ಲೇ ಇದ್ದು ಬಿಡುತ್ತೇನೆ. ಪ್ರಚಾರಕ್ಕೆ ಬರುವುದಿಲ್ಲ ಎಂದು ಯಡಿಯೂರಪ್ಪ, ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಷಿ ಮೂಲಕ ಸಿಟ್ಟು ಹೊರಗೆಡವಿದ್ದಾರೆ ಎನ್ನುವ ಸುದ್ದಿಯೂ ಇದೆ.
ಯಡಿಯೂರಪ್ಪ ರೆಕಮೆಂಡ್ ಮಾಡಿದ್ದ ಟಿಕೆಟ್ ಆಕಾಂಕ್ಷಿ
ಯಡಿಯೂರಪ್ಪ ರೆಕಮೆಂಡ್ ಮಾಡಿದ್ದ ಟಿಕೆಟ್ ಆಕಾಂಕ್ಷಿಯ ಜೊತೆ ಅಶೋಕ್, ಮಾಜಿ ಸಿಎಂ ಬಿಎಸ್ವೈ ಬಗ್ಗೆ ಕೀಳಾಗಿ ಮಾತಾಡಿದರು ಎಂದು ಟಿಕೆಟ್ ಆಕಾಂಕ್ಷಿ ಮಾಧ್ಯಮದ ಮುಂದೆ ಹೇಳಿದ್ದು ಬಿಜೆಪಿಯಲ್ಲಿನ ಗೊಂದಲಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಮಠಾಧೀಶರ ಬೇಸರ ಕೂಡಾ
ಯಡಿಯೂರಪ್ಪ ಸೂಚಿಸಿದ ಕೆಲವು ಅಭ್ಯರ್ಥಿಗಳನ್ನು ಅಶೋಕ್ ಕಡೆಗಣಿಸುವ ಮೂಲಕ ಲಿಂಗಾಯಿತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ, ಟಿಕೆಟ್ ಹಂಚಿಕೆಯಲ್ಲಿ ಜಾತಿಭೇದ ತೋರಿದ್ದಾರೆ ಎಂದು ಹಲವು ಲಿಂಗಾಯಿತ ಮಠಾಧೀಶರು ಅಶೋಕ್ ವಿರುದ್ದ ಯಡಿಯೂರಪ್ಪ ಬಳಿ ಬಹಿರಂಗ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನುವ ಸುದ್ದಿಯಿದೆ.
ಚುನಾವಣೆಯ ಸಮಯದಲ್ಲಿ ಇದೆಲ್ಲಾ ಬೇಡ
ಚುನಾವಣೆಯ ಸಮಯದಲ್ಲಿ ನಿಮ್ಮ ಸಹಕಾರ ಮತ್ತು ಆಶೀರ್ವಾದ ಬೇಕು. ನೀವು ದಯವಿಟ್ಟು ಸಿಟ್ಟಾಗ ಬಾರದು ಮತ್ತು ದಯವಿಟ್ಟು ಮಾಧ್ಯಮದ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಮಠಾಧೀಶರನ್ನು ಯಡಿಯೂರಪ್ಪ ಸಮಾಧಾನ ಮಾಡಿ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಹೆಮ್ಮಿಗೆಪುರ ವಾರ್ಡ್
ಹೆಮ್ಮಿಗೆಪುರ ವಾರ್ಡಿನಲ್ಲಿ ಯಡಿಯೂರಪ್ಪ ಆಪ್ತ ರುದ್ರೇಶ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರು ಅಶೋಕ್ ಅವರನ್ನು ಭೇಟಿಯಾದಾಗ ಯಡಿಯೂರಪ್ಪ ಬಗ್ಗೆ ಕೀಳಾಗಿ ಮಾತನಾಡಿದರು ಎಂದು ಖುದ್ದು ರುದ್ರೇಶ್ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ.
ಯಡಿಯೂರಪ್ಪ ಅವರನ್ನು ತಿರುಪತಿಗೆ ಕಳುಹಿಸಿದ್ದೇನೆ
ಅಲ್ಲಯ್ಯಾ ಯಡಿಯೂರಪ್ಪ, ಅವರನ್ನ ಈಗಾಗಲೇ ತಿರುಪತಿಗೆ ಕಳುಹಿಸಿಲ್ವಾ, ಅವರ ಹೆಸರು ಹೇಳ್ಕೊಂಡು ಟಿಕೆಟ್ ಕೇಳೋಕೆ ಬರ್ತಿಯಲ್ಲಾ ಎಂದು ರುದ್ರೇಶ್ ಜೊತೆ ಅಶೋಕ್ ಅಸಭ್ಯವಾಗಿ ಮಾತನಾಡಿದ್ದಾರೆ. ನಮ್ಮ ನಾಯಕರ ಬಗ್ಗೆ ಹೀಗಾ ಮಾತಾನಾಡುವುದು ಎಂದು ರುದ್ರೇಶ್, ಮಾಧ್ಯಮದ ಮುಂದೆ ಅವಲತ್ತು ತೋಡಿಕೊಂಡಿದ್ದರು.
ಅಯ್ಯೋ ನಾನು ಹಾಗೆ ಹೇಳೇ ಇಲ್ಲ
ಬಿಎಸ್ವೈ ಪಕ್ಷದ ಮತ್ತು ವೈಯಕ್ತಿಕವಾಗಿ ನನ್ನ ಮುಖಂಡರು. ಅವರ ನೆರಳಲ್ಲಿ ಬೆಳೆದವನು ನಾನು, ಅವರ ಬಗ್ಗೆ ನಾನು ಕೀಳಾಗಿ ಮಾತನಾಡುತ್ತೇನಾ, ಟಿಕೆಟ್ ಸಿಗದ ಹಿನ್ನಲೆಯಲ್ಲಿ ನನ್ನ ಮತ್ತು ಯಡಿಯೂರಪ್ಪ ನಡುವೆ ತಂದಿಡುವ ಕೆಲಸವನ್ನು ರುದ್ರೇಶ್ ಮಾಡಿದ್ದಾರೆಂದು ಅಶೋಕ್ ಸ್ಪಷ್ಟನೆ ನೀಡಿದ್ದಾರೆ.