ಸಚಿವರೇ, ಕಾಂಗ್ರೆಸ್ಸಿಗೆ ಮತ ಹಾಕಿದವರು ಅವಿದ್ಯಾವಂತರಾ?
ಬೆಂಗಳೂರು, ಆಗಸ್ಟ್ 24: ಕಳೆದ ಶನಿವಾರ (ಆ 22) ನಡೆದ ಬಿಬಿಎಂಪಿ ಚುನಾವಣೆಯ ನೀರಸ ಮತದಾನದ ಬಗ್ಗೆ ವ್ಯಾಖ್ಯಾನಿಸುತ್ತಾ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ವಿವಾದಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಬೆಂಗಳೂರಿನ ನಾಗರೀಕರು ನಿರೀಕ್ಷಿತ ಮಟ್ಟದಲ್ಲಿ ಮತ ಚಲಾಯಿಸಲಿಲ್ಲ. ಇದರಿಂದ ಕಾಂಗ್ರೆಸ್ಸಿಗೆ ಲಾಭವಾಗಲಿದೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ. (ವಿಜಯವಾಣಿ ಎಕ್ಸಿಟ್ ಪೋಲ್)
ಇಷ್ಟೇ ಅಲ್ಲದೇ, ಬೆಂಗಳೂರಿನ ಪ್ರಜ್ಞಾವಂತ ಮತ್ತು ಸುಶಕ್ಷಿತ ಮತದಾರ ತನ್ನ ಮತ ಚಲಾಯಿಸಲಿಲ್ಲ. ಇವರೆಲ್ಲಾ ಮತದಾನದಲ್ಲಿ ಪಾಲ್ಗೊಂಡಿದ್ದರೆ ಬಿಜೆಪಿಗೆ ಲಾಭವಾಗುತ್ತಿತ್ತು ಎಂದು ಸಚಿವ ರೆಡ್ಡಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೆಡ್ಡಿ, ಕಾಂಗ್ರೆಸ್ ನೂರಕ್ಕೂ ಹೆಚ್ಚು ಸ್ಥಾನ ಬಿಬಿಎಂಪಿ ಚುನಾವಣೆಯಲ್ಲಿ ಪಡೆಯಲಿದೆ. ವಿದ್ಯಾವಂತರು ಮತ್ತು ಪ್ರಜ್ಞಾವಂತರು ಮತದಾನಕ್ಕೆ ಬರಲಿಲ್ಲ.
ಇವರು ಬಿಜೆಪಿ ಮತದಾರರಾದ ಕಾರಣ ಇದರಿಂದ ಕಾಂಗ್ರೆಸ್ಸಿಗೆ ಅನುಕೂಲವಾಗಿದೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಸಚಿವರ ಈ ಹೇಳಿಕೆ ಈಗ ಹಲವು ಚರ್ಚೆಗೆ ನಾಂದಿ ಹಾಡಿದೆ. ಜೊತೆಗೆ, ಕಾಂಗ್ರೆಸ್ಸಿಗೆ ಮತ ಚಲಾಯಿಸಿದವರು ಅವಿದ್ಯಾವಂತರಾ ಎನ್ನುವ ಗೊಂದಲಕ್ಕೆ ಕಾರಣವಾಗಿದೆ. (ಬಿಬಿಎಂಪಿ ಎಕ್ಸಿಟ್ ಪೋಲ್ ಫಲಿತಾಂಶ)
ಸಿಎಂ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡು, ಸಚಿವ ರಾಮಲಿಂಗ ರೆಡ್ಡಿ ರಾಜೀನಾಮೆಗೆ ಮುಂದಾಗಿದ್ರಾ, ಮುಂದೆ ಓದಿ..
ರಾಮಲಿಂಗ ರೆಡ್ಡಿ ಹೇಳಿಕೆ
ಸಚಿವ ರೆಡ್ಡಿಯವರು ಬಿಬಿಎಂಪಿ ಮತದಾನದ ಬಗ್ಗೆ ನೀಡಿದ ಹೇಳಿಕೆ, ಚರ್ಚೆಯ ಜೊತೆಗೆ ಕಾಂಗ್ರೆಸ್ ಪಕ್ಷ ಮುಜುಗರಕ್ಕೀಡಾಗುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವರು ಅವಿದ್ಯಾವಂತರಾ ಎನ್ನುವ ಪ್ರಶ್ನೆ ಈಗ ಎದ್ದೇಳಿರುವುದು ಸಹಜ.
ಬಿಜೆಪಿಯನ್ನು ಹೊಗಳಿದಂತೆ ಆಯ್ತು
ಬಿಜೆಪಿಯನ್ನು ಬೆಂಬಲಿಸುವವರು ವಿದ್ಯಾವಂತರು ಎಂದು ಸಚಿವರೇ ಹೇಳಿದ್ದಾರೆ. ಹಾಗಾಗಿ, ಕಾಂಗ್ರೆಸ್ಸಿಗೆ ಮತಹಾಕುವವರು ಅವಿದ್ಯಾವಂತರು ಎಂದಾಗಿಲ್ಲವೇ ಎಂದು ಬಿಜೆಪಿ ಬೆಂಬಲಿಗರು ಕಿಚಾಯಿಸುತ್ತಿರುವುದು ಒಂದೆಡೆಯಾದರೆ, ಕಾಂಗ್ರೆಸ್ ಬೆಂಬಲಿಗರು ಅನಕ್ಷರಸ್ಥರಾ ಎಂದು ಕೈಪಾರ್ಟಿ ಪರವಾಗಿರುವವರು ಪ್ರಶ್ನೆ ಎತ್ತಲಾರಂಭಿಸಿದ್ದಾರೆ.
ಸಿದ್ದರಾಮಯ್ಯ ಜೊತೆ ರಾಮಲಿಂಗ ರೆಡ್ಡಿ ವಿರಸ
ಬಿಬಿಎಂಪಿ ಚುನಾವಣೆಯ ಸೋಲು, ಗೆಲುವು, ಖರ್ಚುವೆಚ್ಚದ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಮಲಿಂಗ ರೆಡ್ಡಿಯವರಿಗೆ ಹೇಳಿದ್ದಾರೆ ಎನ್ನಲಾಗಿದೆ. ಇದು ಇಬ್ಬರ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನುವ ಸುದ್ದಿಯಿದೆ.
ರಾಜೀನಾಮೆಗೆ ಮುಂದಾಗಿದ್ರಾ ರಾಮಲಿಂಗ ರೆಡ್ಡಿ?
ಸಿದ್ದರಾಮಯ್ಯ ಅವರ ಸೂಚನೆಗೆ ಒಪ್ಪದ ರೆಡ್ಡಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ. ಬೇಕಾದರೆ ರಾಜೀನಾಮೆ ನೀಡುತ್ತೇನೆ, ಏನಾದರೂ ಮಾಡಿಕೊಳ್ಳಿ ಎಂದು ಸಿಟ್ಟು ಮಾಡಿಕೊಂಡು ಸಿಎಂ ನಿವಾಸದಿಂದ ಹೊರ ನಡೆದರು ಎನ್ನುವ ಸುದ್ದಿ ಲೇಟಾಗಿ ಹರಿದಾಡುತ್ತಿದೆ.
ಸಿದ್ದು, ರೆಡ್ಡಿ ಮಾತಿನ ಚಕಮಕಿ
ಬೆಂಗಳೂರು ವ್ಯಾಪ್ತಿಯಲ್ಲಿ ನಾಲ್ಕು ಜನ ಸಚಿವರಿದ್ದಾರೆ. ನನ್ನ ಸ್ವಕ್ಷೇತ್ರ ಬಿಟಿಎಂ ಲೇಔಟ್ ಮತ್ತು ಇನ್ನೊಂದು ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳುತ್ತೇನೆ. ಎಲ್ಲಾ 27 ಅಸೆಂಬ್ಲಿ ಕ್ಷೇತ್ರದ ಜವಾಬ್ದಾರಿ ವಹಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಯಾರಿಗೆ ಬೇಕಾದರೂ ವಹಿಸಿಕೊಡಿ, ಬೇಕಾದರೆ ನನ್ನ ರಾಜೀನಾಮೆ ಪಡೆದುಕೊಳ್ಳಿ ಎಂದು ರಾಮಲಿಂಗ ರೆಡ್ಡಿ ಮುಖ್ಯಮಂತ್ರಿಗಳಿಗೆ ನೇರವಾಗಿ ಹೇಳಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.