ಕೊಪ್ಪಳ ರೈತನ ಮುಖದಲ್ಲಿ ಕಳೆ ತಂದ ಬಾಳೆ, ತರಕಾರಿ
ಕೊಪ್ಪಳ, ಆಗಸ್ಟ್ 25 : ಕಡಿಮೆ ವೆಚ್ಚ ಹಾಗೂ ವಿಶೇಷ ತಾಂತ್ರಿಕತೆಯೊಂದಿಗೆ ಬಾಳೆ ಹಾಗೂ ತರಕಾರಿ ಬೆಳೆ ಬೆಳೆದು ಕೊಪ್ಪಳದ ರೈತರೊಬ್ಬರು ಬದುಕನ್ನು ಬಂಗಾರವಾಗಿಸಿಕೊಂಡಿದ್ದಾರೆ. ಕೊಪ್ಪಳದ ಈ ರೈತರ ಸಾಧನೆ ಇತರರಿಗೆ ಮಾದರಿಯಾಗಿದೆ.
ಕೊಪ್ಪಳ ತಾಲೂಕು ಚಿಕ್ಕಸಿಂದೋಗಿ ಗ್ರಾಮದ ರೈತ ಇಂದಿರೇಗೌಡ ಅವರು ಬಾಳೆ ಮತ್ತು ತರಕಾರಿ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಇಂದಿರೇಗೌಡ ಅವರದ್ದು ಅವಿಭಕ್ತ ಕುಟುಂಬ, ಒಟ್ಟು ಮೂವರು ಸಹೋದರರು ಸೇರಿದಂತೆ ಸುಮಾರು 25 ಮಂದಿ ಮನೆಯಲ್ಲಿದ್ದಾರೆ.[ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]
'ವಾರ್ಷಿಕವಾಗಿ ಎಲ್ಲ ಖರ್ಚು ಕಳೆದು ಸುಮಾರು 4 ರಿಂದ 5 ಲಕ್ಷ ರೂ. ಆದಾಯ ಗಳಿಸುತ್ತೇವೆ. ಇಬ್ಬರು ಮಕ್ಕಳು ಓದುತ್ತಿದ್ದಾರೆ. ಅವರ ಶಿಕ್ಷಣಕ್ಕೂ ಸ್ವಲ್ಪ ಹಣ ವ್ಯಯಿಸುತ್ತಿದ್ದೇನೆ. ಕೃಷಿ ಬದುಕಿನಲ್ಲಿ ನೆಮ್ಮದಿಯನ್ನು ನಮ್ಮ ಕುಟುಂಬ ಕಂಡುಕೊಂಡಿದೆ' ಎನ್ನುತ್ತಾರೆ ಪ್ರಗತಿಪರ ರೈತ ಇಂದಿರೇಗೌಡ.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]
ತೋಟಗಾರಿಕೆ ಇಲಾಖೆ ಇಂದಿರೇಗೌಡ ಅವರಿಗೆ ಸಹಕಾರ ನೀಡಿದೆ. ಇಲಾಖೆಯು ರಾಷ್ಟ್ರೀಯ ತೋಟಗಾರಿಕೆ ಮಿಷನ್ನಲ್ಲಿ ಪ್ರತಿ ಹೆಕ್ಟೇರ್ಗೆ ಮೊದಲ ವರ್ಷ 30 ಸಾವಿರ ರೂ. ಸಹಾಯಧನ, 2ನೇ ವರ್ಷಕ್ಕೆ 10 ಸಾವಿರ ರೂ., ಹನಿ ನೀರಾವರಿಗೆ ಶೇ. 90 ರಷ್ಟು ಸಹಾಯಧನ ಜೊತೆಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ಸಮಗ್ರ ಪೀಡೆ ನಿರ್ವಹಣೆಗೆ ಸಹಾಯಧನ ನೀಡುತ್ತದೆ...[ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ಸಾಂದ್ರ ಪದ್ಧತಿಯಲ್ಲಿ ಬಾಳೆ ಬೆಳೆ
ಇಂದಿರೇಗೌಡ ಅವರು ಸಾಂದ್ರ ಪದ್ಧತಿಯಲ್ಲಿ ಬಾಳೆ ಬೆಳೆಯನ್ನು ಬೆಳೆದಿದ್ದಾರೆ. ಗೊನೆಯ ತೂಕಕ್ಕೆ ಹಾಗೂ ಗಾಳಿಯ ರಭಸಕ್ಕೆ ಬಾಳೆಗಿಡ ಬೀಳದಂತೆ ಸಾಮಾನ್ಯವಾಗಿ ಕಟ್ಟಿಗೆಯ ಕೋಲನ್ನು ಗಿಡಕ್ಕೆ ಆಧಾರವಾಗಿ ನಿಲ್ಲಿಸುತ್ತಾರೆ. ಆದರೆ, ಇಂದಿರೇಗೌಡ ಅವರು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಒಂದೂವರೆ ಇಂಚು ಅಗಲದ ಗಟ್ಟಿಯಾದ ಪ್ಲಾಸ್ಟಿಕ್ ಸ್ಟ್ರಿಪ್ ಬೆಲ್ಟ್ ಪಟ್ಟಿ ಕಟ್ಟಿದ್ದಾರೆ. [ಮಾಹಿತಿ : ಕೊಪ್ಪಳ ವಾರ್ತೆ]
ಹಣ್ಣುಗಳು ಹಾಳಾಗಲು ಸಾಧ್ಯವಿಲ್ಲ
ಕಟ್ಟಿಗೆಯ ಕೋಲು ಬಳಸಿದಲ್ಲಿ, ಬಾಳೆ ಗೊನೆಯು ಕಟ್ಟಿಗೆಗೆ ತಾಗಿ ಹಣ್ಣುಗಳು ಕಪ್ಪಾಗುವುದಲ್ಲದೆ, ದರ ಕಡಿಮೆ ಆಗುತ್ತದೆ. ಪ್ಲಾಸ್ಟಿಕ್ ಪಟ್ಟಿಯನ್ನು ಕಟ್ಟಿರುವುದರಿಂದ ಗಾಳಿಯ ರಭಸವನ್ನು ಗಿಡಗಳು ತಡೆದುಕೊಳ್ಳುತ್ತವೆ. ಬಾಳೆ ಗೊನೆ ಪ್ಲಾಸ್ಟಿಕ್ ಪಟ್ಟಿಗೆ ತಾಗುವುದೇ ಇಲ್ಲ. ಇದರಿಂದ ಹಣ್ಣುಗಳು ಹಾಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ.
3 ಸಾವಿರ ಗಿಡಗಳಿವೆ
ಅಂಗಾಂಶ ಕೃಷಿ ಬಾಳೆ ಜಿ-9 ತಳಿಯನ್ನು ಇವರು ಬೆಳಸಿದ್ದು, 3 ಸಾವಿರ ಗಿಡಗಳನ್ನು ನೆಡಲಾಗಿದೆ. ಗಿಡಗಳಿಗೆ ಉತ್ತಮ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಕಾಲಕಾಲಕ್ಕೆ ಪೊಟ್ಯಾಷ್, ಡಿಎಪಿ ಗೊಬ್ಬರವನ್ನೂ ಹಾಕುತ್ತಾರೆ. ಹನಿ-ನೀರಾವರಿ ಅಳವಡಿಸಿಕೊಂಡಿದ್ದಾರೆ. ಪ್ರತಿ ಎಕರೆಗೆ ಸುಮಾರು 80 ರಿಂದ 90 ಸಾವಿರದಷ್ಟು ಖರ್ಚು ಬರುತ್ತದೆ, ಬಾಳೆ ತೋಟದಲ್ಲಿ ಪ್ರತಿಯೊಂದು ಗೊನೆ 30 ರಿಂದ 35 ಕೆ.ಜಿ. ತೂಗುತ್ತಿದ್ದು, ಒಂದು ಹಂತದ ಕೊಯ್ಲು ಮುಗಿದಿದೆ. ಈ ಹಂತದಲ್ಲಿ ಸುಮಾರು 1.20 ಲಕ್ಷ ನಗದು ಕೈಗೆ ಬಂದಿದೆ.
ಲಾಭ ತಂದುಕೊಟ್ಟ ತರಕಾರಿ ಬೆಳೆ
ತಮ್ಮ ಜಮೀನಿನ ಪೈಕಿ ಮುಕ್ಕಾಲು ಎಕರೆ ಜಮೀನಿನಲ್ಲಿ ಕುಂಬಳ ಜಾತಿಯ ಬಳ್ಳಿಗಳನ್ನು ಬೆಳೆದಿದ್ದು, ಬೂದು ಕುಂಬಳ, ಸಿಹಿ ಕುಂಬಳ, ಸೋರೆಕಾಯಿಯನ್ನು, ಸೌತೆಕಾಯಿ, ಹಾಗಲಕಾಯಿ ಬೆಳೆದು ನಿತ್ಯ ಹಣ ಸಂಪಾದಿಸುತ್ತಿದ್ದಾರೆ. ಈ ಭಾಗದಲ್ಲಿ ಹೆಚ್ಚೇನು ಬೆಳೆಯದ ಪಡುವಲ ಕಾಯಿ ಬೆಳೆಯನ್ನು ಸಹ ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದು, ಉತ್ತಮ ಇಳುವರಿ ಪಡೆದಿದ್ದಾರೆ.
ತೋಟಗಾರಿಕಾ ಬೆಳೆ ಬೆಳೆಯುತ್ತಾರೆ
ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಎಷ್ಟು ದರ ಇದೆ?, ಯಾವ ಬೆಳೆಯ ಬೆಲೆ ಕುಸಿತವಾಗುತ್ತಿದೆ? ಎಂಬುದನ್ನು ಅರಿತುಕೊಂಡು, ಬೆಳೆ ಬೆಳೆಯುತ್ತಾರೆ. ಮಾರುಕಟ್ಟೆ ಸ್ಥಿತಿಗತಿ ಅಧ್ಯಯನ, ಹವಾಮಾನ ಇತ್ಯಾದಿ ಅಂಶಗಳನ್ನು ನೋಡಿಕೊಂಡೇ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.