ಡಿಜಿಧನ್ ಯೋಜನೆ ಯಶಸ್ವಿಗೊಳಿಸಲು ಕರೆ
ಎಲ್ಲ ವರ್ಗದ ಜನರಿಗೆ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ.
ಬಾಗಲಕೋಟೆ, ಏಪ್ರಿಲ್ 17: ವ್ಯಾಪಾರಸ್ಥರು, ಉದ್ದಿಮೆದಾರರು, ಸ್ವಂತ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರು ನಗದು ರಹಿತಿ ವ್ಯವಹಾರ ಮಾಡುವ ಮೂಲಕ ಡಿಜಿಧನ್ ಪಾವತಿ ಯೋಜನೆ ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ಅಂಬೇಡ್ಕರ ಜಯಂತಿ ಪ್ರಯಕ್ತ ಹಮ್ಮಿಕೊಂಡ ಲಕ್ಕಿ ಗ್ರಾಹಕರ ಯೋಜನೆ ಹಾಗೂ ಡಿಜಿಧನ್ ವ್ಯಾಪಾರ ಯೋಜನೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ವರ್ಗದ ಜನರಿಗೆ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಜಿಧನ್ ವ್ಯಾಪಾರ ಯೋಜನೆ ಹಾಗೂ ಲಕ್ಕಿ ಗ್ರಾಹಕರ ಯೋಜನೆ ಜಾರಿ ಮಾಡಿ ಡಿಜಿಧನ್ ಪಾವತಿಯನ್ನು ಯೋಜನೆಯನ್ನು ಎಲ್ಲ ವರ್ಗದವರು ಅಳವಡಿಸಿಕೊಳ್ಳಲು ಪ್ರೋತ್ಸಾಹ ರೂಪದಲ್ಲಿ ಬಹುಮಾನ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಡಿಜಿಧನ್ ಪಾವತಿ ಮುಖಾಂತರ ಸದೃಡಗೊಳಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಅಗ್ರಣಿಯ ಮುಖ್ಯ ಪ್ರಬಂದಕರಾದ ಶಿವಾನಂದ ಮಳಗಿ ಅವರು ಡಿಜಿಟಲ್ ಪಾವತಿಯ ವಿವಿಧ ಪದ್ದತಿಗಳಾದ ಡೆಬಿಟ್ ಕಾರ್ಡ, ಕ್ರೇಡಿಟ್ ಕಾರ್ಡ, ಯುಎಸ್ಎಸೋ, ಆಧಾರ ಕಾರ್ಡ ಮುಖಾಂತರ ಯುಪಿಐ, ಇ-ವ್ಯಾಲೇಟ್, ಪಿಓಎಸ್ ಬಗ್ಗೆ ಸವಿಸ್ತವಾರವಾಗಿ ಮಾಹಿತಿ ನೀಡಿದರು.
ಮೊಬೈಲ್ ಉಪಯೋಗದಿಂದ *99#, ಎಂಎಂಐಡಿ ಮತ್ತು ಎಂಪಿಐಡಿಗಳಿಂದ ಅತ್ಯಂತ ಸರಳ ರೀತಿಯಲ್ಲಿ ವ್ಯವಹಾರ ಮಾಡುವುದು ಹಾಗೂ ಮೊಬೈಲ್ ಇಲ್ಲದವರು ಹೆಬ್ಬಟ್ಟಿನ ಗುರುತಿನ ಮುಖಾಂತರ ಆಧಾರ ಸಂಖ್ಯೆ ಉಪಯೋಗಿಸಿ ವ್ಯವಹಾರ ಮಾಡವುದು, ವಿವಿಧ ಬ್ಯಾಂಕ್ಗಳು ಜಾರಿ ಮಾಡಿದ ಯುಪಿಐ ಪದ್ದತಿ ಉಪಯೋಗಿಸಿ ಡಿಜಿಟಲ್ ಪಾವತಿ ಮಾಡುವುದು, ವ್ಯಾಪಾರಸ್ಥರು ಪಿಓಎಸ್ ಮಶೀನ್ ಬಳಸಿ ನಗದು ವ್ಯವಹಾರ ಮಾಡುವ ಬಗ್ಗೆ ತಿಳುವಳಿಕೆ ನೀಡಿದರು.
ಡಿಜಿಟಲ್ ಪಾವತಿ ಬಗ್ಗೆ ಎಲ್ಇಡಿ ಪರದೆಯ ಪಿಪಿಡಿ ಮೂಡಿಸುವ ಮೂಲಕ ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಇದೇ ಸಂದರ್ಭದಲ್ಲಿ ಎನ್ಐಸಿಯವರು ಈ ಎಲ್ಲ ಯೋಜನೆಗಳ ವಿಡಿಯೋ ಪ್ರದರ್ಶನ ಮಾಡಿದರು. ಪ್ರಧಾನ ಮಂತ್ರಿಗಳು ನಾಗಪುರದಲ್ಲಿ ಮಾಡಿದ ಕಾರ್ಯಕ್ರಮದ ಭಾಷಣವನ್ನು ಎಲ್ಲ ಸಭಿಕರು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಅಲಬಾಳ, ಸತೀಶ ನಾಯಕ ಭಾಗವಹಿಸಿದ್ದರು. ಎಂ.ಎಸ್.ಹಾಲಹಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ವ್ಯಾಪಾರಸ್ಥರು, ಉದ್ದಿಮೆದಾರು, ನೌಕರ ವರ್ಗ, ರೈರರು, ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.