ಬೈಕ್ ಆಂಬುಲೆನ್ಸ್: ಏನಿದು, ಬಳಸುವುದು ಹೇಗೆ?
ಬೆಂಗಳೂರು, ಏ. 15: 'ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ 20 ನಿಮಿಷಕ್ಕೆ ಪಿಜ್ಜಾ ಬರುತ್ತದೆ, ಹಾಗಾದರೆ ಆಂಬುಲೆನ್ಸ್ ಏಕೆ ಬರಬಾರದು? ಹೌದು ಈ ಬಗೆಯ ಆಲೋಚನೆಯಿಂದಲೇ ಸಾಕಾರಗೊಂಡಿದ್ದು ಬೈಕ್ ಅಂಬುಲೆನ್ಸ್ ಸೇವೆ' ಹೀಗೇಂದು ಹೊಸ ಯೋಜನೆಯ ಹುಟ್ಟನ್ನು ಬಿಚ್ಚಿಟ್ಟವರು ಆರೋಗ್ಯ ಸಚಿವ ಯು. ಟಿ. ಖಾದರ್.
ಸರ್ಕಾರ ಹೊಸ ಯೋಜನೆ ಅನುಷ್ಠಾನ ಮಾಡಿದೆ. ಆದರೆ ಇದನ್ನು ಯಶಸ್ಚಿಗೊಳಿಸುವ ಜವಾಬ್ದಾರಿ ಬೈಕ್ ಚಾಲಕರ ಮೇಲಿದೆ. ನೀವು ಕೇವಲ ಚಾಲನೆ ಮಾಡುವುದು ಮಾತ್ರವಲ್ಲ. ಅಪಘಾತಕ್ಕೆ ತುತ್ತಾದವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. 108ಕ್ಕೆ ಕರೆ ಮಾಡಿದ 20 ನಿಮಿಷದಲ್ಲಿ ಆಂಬುಲೆನ್ಸ್ ಧಾವಿಸುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಯೋಜನೆ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. [ ಏರ್ ಆಂಬುಲೆನ್ಸ್ ಸೇವೆ ಅಕ್ಟೋಬರ್ ನಲ್ಲಿ ಲಭ್ಯ]
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನಪರ ಯೋಜನೆಗಳಿಗೆ ಸದಾ ಬೆಂಬಲ ಇದ್ದೇ ಇರುತ್ತದೆ. ಅಪಘಾತ ಸಂಭವಿಸಿದ ವೇಳೆ 10 ನಿಮಿಷ ಮೊದಲು ಕರೆದುಕೊಂಡು ಬಂದಿದ್ದರೆ ಬದುಕುತ್ತಿದ್ದರು, ಸರ್ ..ರಕ್ತ ಸ್ರಾವ ದಿಂದ ಮೃತಪಟ್ಟರು ಎಂದು ಹೇಳುವುದನ್ನು ಕೇಳಿದ್ದೇವೆ. 5 ನಿಮಿಷ ತಡವಾಗಿದ್ದಕ್ಕೆ ಜೀವವೇ ಹೋದ ಉದಾಹರಣೆಗಳಿವೆ. ಅದಕ್ಕೆಲ್ಲ ಈ ಯೋಜನೆ ಪರಿಹಾರವಾಗಬಲ್ಲದು ಎಂದು ಹೇಳಿದರು.[ಬೈಕ್ ಆಂಬುಲೆನ್ಸ್ ಮತ್ತಷ್ಟು ಚಿತ್ರಗಳು]
ಜನದಟ್ಟಣೆ ನಗರಗಳಿಗೆ ಬೆಸ್ಟ್
ಏಷ್ಯಾದಲ್ಲೇ ಈ ಬಗೆಯ ಚಿಂತನೆ ಮೊದಲನೆಯದಾಗಿದ್ದು ಜನದಟ್ಟಣೆಯ ನಗರಗಳಿಗೆ ಹೇಳಿ ಮಾಡಿಸಿದ್ದಾಗಿದೆ. ನೀಲಿ ಬಣ್ಣದ ಗೂಟ, ಸೈರನ್ ಮಾಡಿಕೊಂಡು ಹೋಗುವ ಬೈಕ್ ವೊಂದಕ್ಕೆ 1 ಲಕ್ಷ 70 ಸಾವಿರ ರೂ. ತಗುಲಿದೆ. ಪ್ರಥಮ ಚಿಕಿತ್ಸೆಗೆ ಬೇಕಾದ ಅಷ್ಟೂ ಪರಿಕರ ಇಲ್ಲಿರುತ್ತದೆ.
ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ
ಸದ್ಯ 30 ಬೈಕ್ ಆಂಬ್ಯುಲೆನ್ಸ್ಗಳು ರಸ್ತೆಗಿಳಿಯಲಿದ್ದು ಕಿರಿದಾದ ರಸ್ತೆ, ಟ್ರಾಫಿಕ್ ನಲ್ಲಿ ಶೀಘ್ರವಾಗಿ ತಲುಪಿ ಅಪಘಾತಕ್ಕೀಡಾದವರ ಪ್ರಾಣ ಉಳಿಸಲಿದೆ. ಹಲವು ವೈದ್ಯಕೀಯ ಉಪಕರಣಗಳನ್ನು ಹೊಂದಿರುವುದು ವಿಶೇಷ. ಔಷಧ ಕಿಟ್, ಆಕ್ಸಿಜನ್ ಸಿಲಿಂಡರ್ ನ್ನು ಒಳಗೊಂಡಿದೆ.
ರಾಜ್ಯದ ಎಲ್ಲೆಲ್ಲಿ ಸೇವೆ?
ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಮೈಸೂರು, ಶಿವಮೊಗ್ಗ, ಮಂಗಳೂರು, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಜನರಿಗೆ ಈ ಸೇವೆ ಲಭ್ಯವಾಗಲಿದೆ. ಬೆಂಗಳೂರಿಗೆ ಅತಿ ಹೆಚ್ಚು ಬೈಕ್ ಆಂಬುಲೆನ್ಸ್ ನೀಡಲಾಗಿದ್ದು, ಕಾರ್ಪೋರೇಶನ್, ಫ್ರೀಡಂ ಪಾರ್ಕ್ ಬಳಿ ಸದಾ ಸೇವೆಯಲ್ಲಿರುತ್ತದೆ.
ಚಾಲಕರೇ ಚಿಕಿತ್ಸಕರು
ಬೈಕ್ ಆಂಬುಲೆನ್ಸ್ನ ಚಾಲಕರೇ ಚಿಕಿತ್ಸಕರು ಆಗಿರುತ್ತಾರೆ. ಚಾಲಕರಿಗೆ ಗಾಢ ಬಣ್ಣದ ಜಾಕೆಟ್ ನೀಡಲಾಗುತ್ತದೆ. ಅಪಘಾತ ಸ್ಥಳಕ್ಕೆ ಬಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಅಗತ್ಯವಿದ್ದರೆ ಆಸ್ಪತ್ರೆಗಳಿಗೆ ರವಾನಿಸುವ ವ್ಯವಸ್ಥೆ ಯನ್ನು ಅವರೇ ಮಾಡುತ್ತಾರೆ.
ನಿಮ್ಮ ಸೇವೆಗಾಗಿ ಬೈಕ್ ಆಂಬುಲೆನ್ಸ್
ಅಪಘಾತ ಸಂಭವಿಸಿದ ಕೂಡಲೇ 108 ಕ್ಕೆ ಕರೆ ಮಾಡಬೇಕು. ಜಿಪಿಎಸ್ ಮೂಲಕ ವಾಹನ ದಟ್ಟಣೆ ಆಧರಿಸಿ ಬೈಕ್ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು. ಈ ಆಂಬುಲೆನ್ಸ್ ಸಹ ಸೈರನ್ ಮೊಳಗಿಸುವುದರಿಂದ ಜನರು ಸ್ವಯಂಪ್ರೇರಿತವಾಗಿ ದಾರಿ ಮಾಡಿ ಕೊಡುವುದು ಒಳಿತು.