ಸುತ್ತೂರಿನಲ್ಲಿ ಜ್ಯೋತಿಷಿಗಳ ಎಕ್ಕಿಳಿಸಿದ ಸಿಎಂ ಸಿದ್ದರಾಮಯ್ಯ
ಸುತ್ತೂರಿನಲ್ಲಿ ಜ್ಯೋತಿಷಿಗಳ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ.
ಮೈಸೂರು, ಜ 25: ಕಾರಿನಲ್ಲಿ ಕಾಗೆ ಕೂತಿತು, ಪಂಚೆ ಮೇಲೆ ಹಿಕ್ಕೆ ಹಾಕಿತು.. ಇದು ಅಪಶಕುನ ಎನ್ನುವ ಪೊಳ್ಳು ಮಾತಿನಿಂದ ಜ್ಯೋತಿಷಿಗಳು ಸಮಾಜದ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸುತ್ತೂರಿನಲ್ಲಿ ಮಂಗಳವಾರ (ಜ) ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಜನರ ನಂಬಿಕೆಗಳ ಮೇಲೆ ನನಗೆ ಆಕ್ಷೇಪವಿಲ್ಲ, ಆದರೆ ಮೂಢನಂಬಿಕೆ ಮತ್ತು ಮೌಢ್ಯವನ್ನು ವಿರೋಧಿಸುತ್ತೇನೆಂದು ಹೇಳಿದರು. (ವಿಧಾನಸೌಧದಲ್ಲಿ ಗೂಬೆ, ಸಿಎಂಗೆ ಅಪಶಕುನ)
ಅನಾರೋಗ್ಯಕ್ಕೆ ಒಳಗಾಗಿದ್ದ ಕಾಗೆಯೊಂದು ಕಾರಿನಲ್ಲಿ ಕೂತಿತ್ತು. ಅದನ್ನೇ ಹಿಡಿದುಕೊಂಡು ಟಿವಿ ವಾಹಿನಿಯಲ್ಲಿ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದೇ ನುಡಿದಿದ್ದು. ಸಿಎಂ ಪದವಿ ನನಗೆ ಹೋಗಲಿದೆ ಎಂದು ಎರಡು ವರ್ಷದ ಹಿಂದೆ ಭವಿಷ್ಯ ನುಡಿದರು.
ಜ್ಯೋತಿಷಿಗಳ ಭವಿಷ್ಯದಂತೆ ನಾನು ಮುಖ್ಯಮಂತ್ರಿ ಪದವಿ ಕಳೆದುಕೊಂಡೆನೇ? ಬಜೆಟ್ ಮಂಡಿಸಲಿಲ್ಲವೇ, ಸುತ್ತೂರು ಮಠದ ಜಾತ್ರೆಗೆ ಮುಖ್ಯಮಂತ್ರಿಯಾಗಿ ಬಂದಿಲ್ಲವೇ ಎಂದು ಸಿದ್ದರಾಮಯ್ಯ ವಂಗ್ಯವಾಡಿದರು.
ಅದೇ ರೀತಿ ಇನ್ನೊಂದು ಕಾರ್ಯಕ್ರಮಕ್ಕೆ ಹೋದಾಗ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತು, ಅದನ್ನು ಹಿಡಿದುಕೊಂಡು ಜ್ಯೋತಿಷಿಗಳು ಭವಿಷ್ಯ ನುಡಿಯಲಾರಂಭಿಸಿದರು. ನನ್ನ ಗ್ರಹಗತಿ ಸರಿಯಿಲ್ಲ ಎಂದರು. ಜ್ಯೋತಿಷಿಗಳು ಮೊದಲು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲಿ ಎಂದು ಸಿದ್ದರಾಮಯ್ಯ ಖಾರವಾಗಿ ನುಡಿದರು. (ಮಾಹಿತಿ: ಪ್ರಜಾವಾಣಿ)