ವಿಧಾನಸೌಧದ ಮುಂದೆ ಎಚ್ ಡಿ ರೇವಣ್ಣ 'ಅಮವಾಸ್ಯೆ' ಪ್ರವಚನ
ಬೆಂಗಳೂರು, ಜುಲೈ 12: ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ತಮ್ಮ ಜೀವನದಲ್ಲಿ ಕಟ್ಟಿಸಿಕೊಂಡ ತಾಯಿತ, ಕಂಡಷ್ಟು ಲಿಂಬೆಹಣ್ಣನ್ನು ಬಹುಷ: ಯಾವ ರಾಜಕಾರಣಿಯೂ ನೋಡಿರಲಿಕ್ಕಿಲ್ಲ.
ಅರ್ಚಕರೂ ನಾಚುವಷ್ಟು ಅಮವಾಸ್ಯೆ, ಹುಣ್ಣಿಮೆ, ರಾಹುಕಾಲ ಮುಂತಾದವುಗಳಲ್ಲಿ ರೇವಣ್ಣಗೆ ಎಲ್ಲಿಲ್ಲದ ಪ್ರೀತಿ. ಎಲ್ಲಾ ಆಗುಹೋಗುಗಳನ್ನು ಕಟ್ಟಾ ಸಂಪ್ರದಾಯಸ್ಥರ ರೀತಿಯಲ್ಲಿ ಅಳೆಯುವ ರೇವಣ್ಣ ರಾಹುಕಾಲ, ಅಮವಾಸ್ಯೆ ಮಹಿಮೆಯನ್ನು ಸದನದಲ್ಲೇ ಪ್ರಸ್ತಾವಿಸಿದ ಉದಾಹರಣೆಗಳೂ ಇವೆ. (ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು)
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಹೋರಾಟ ಆರಂಭಿಸಿರುವ ಹಿನ್ನಲೆಯಲ್ಲಿ ಸದನದ ಇನ್ನುಳಿದ ದಿನಗಳು ಬಹುತೇಕ ಆಪೋಶನಗೊಳ್ಳುವ ಸಾಧ್ಯತೆ ಜಾಸ್ತಿ.
ಸದನದಲ್ಲಿ ಉಂಟಾಗಿರುವ ಕೋಲಾಹಲದ ವಾತಾವರಣದ ಬಗ್ಗೆ ವಿಧಾನಸೌಧದ ಮೊಗಶಾಲೆಯಲ್ಲಿ ಸೋಮವಾರ (ಜು 11) ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ರೇವಣ್ಣ, ಈ ಅಧಿವೇಶನ ಆರಂಭವಾದ ಜುಲೈ 4ರಂದು ಅಮಾವಾಸ್ಯೆ ಇತ್ತು, ಅದಕ್ಕೇ ಈ ಸಮಸ್ಯೆ ಎಂದಿದ್ದಾರೆ.
ಅಮವಾಸ್ಯೆ ಎಂದ ಮೇಲೆ ತೊಂದರೆ ಆಗದೆ ಇನ್ನೇನು ಆಗುತ್ತೆ? ರಾಹು ಕಾಲವೂ ಶುರುವಾಗುತ್ತೆ, ಯಮಗಂಡ ಕಾಲವೂ ಕಾಡುತ್ತೆ ಎಂದು ನಗುನಗುತ್ತಲೇ ಮಾಧ್ಯಮವರ ಮುಂದೆ ತಮ್ಮ ನಂಬಿಕೆಯನ್ನು ರೇವಣ್ಣ ಹಂಚಿಕೊಂಡಿದ್ದಾರೆ. ((ಸ್ವಾತಿ ನಕ್ಷತ್ರದ ರೇವಣ್ಣಗೆ ಮಾಟ ಮಂತ್ರ ತಟ್ಟಲ್ಲ)
ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ಮತ್ತು ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಲು ಮುಂದಾಗಿರುವ ಬಗ್ಗೆ ಅಲ್ಲೇ ನಿಂತಿದ್ದ ಬಿಜೆಪಿ ಮುಖಂಡ ಬೋಪಯ್ಯ ಅವರ ಕಾಲೆಳೆಯುತ್ತಾ ರೇವಣ್ಣ, ಧರಣಿಯಂತೆ, ನಿಮಗೆ ಎಂತಹ ಬೆಡ್ಶೀಟ್ ಬೇಕು? ನನಗೆ ಪಂಚೆ ಸಾಕಪ್ಪಾ ಎಂದು ವ್ಯಂಗ್ಯವಾಡಿದ್ದಾರೆ.
ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಿದ್ದು ಜುಲೈ ನಾಲ್ಕು ಸೋಮವಾರದಂದು. ಆದಿನ ಸೋಮಾವತಿ ಅಮವಾಸ್ಯೆ ಅಥವಾ ಮಣ್ಣತ್ತಿನ ಅಮವಾಸ್ಯೆ ದಿನವಾಗಿತ್ತು. (ಹೆಂಡತಿ ವಿಚಾರದಲ್ಲಿ ರೇವಣ್ಣ ಹಠ ಮಾಡಬಾರದು)
ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ಮುಂದಾಗಿರುವ ಸಿದ್ದರಾಮಯ್ಯ ಸರಕಾರದ ಬಗ್ಗೆ ಈ ಹಿಂದೆಯೊಮ್ಮೆ ಮಾತನಾಡುತ್ತಿದ್ದ ರೇವಣ್ಣ, ನನ್ನದು ಸ್ವಾತಿ ನಕ್ಷತ್ರ. ಯಾವ ಮಾಟವೂ ನನಗೆ ತಟ್ಟುವುದಿಲ್ಲ. ಬದಲಿಗೆ, ಅದು ಮಾಡಿಸಿದವರಿಗೇ ತೊಂದರೆ ಕೊಡುತ್ತದೆ ಎಂದು ಎಚ್ಚರಿಕೆ ಮಿಶ್ರಿತ ಧಾಟಿಯಲ್ಲಿ ಕಟಕಿಯಾಡಿದ್ದುಂಟು.