2 ಕೋಟಿ ರೂ.ವೆಚ್ಚದಲ್ಲಿ ಕೆಂಪೇಗೌಡರ ಸಮಾಧಿ ಅಭಿವೃದ್ಧಿ
ರಾಮನಗರ, ಜನವರಿ 25 : ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಪಾಪುರ ಗ್ರಾಮದಲ್ಲಿ ಪತ್ತೆಯಾಗಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯನ್ನು ರಾಜ್ಯ ಪುರಾತತ್ವ ಇಲಾಖೆ ಅಭಿವೃದ್ಧಿಗೊಳಿಸಲಿದೆ. ಸಮಾಧಿ ಅಭಿವೃದ್ಧಿಗೆ 2.36 ಕೋಟಿ ರೂ.ಗಳ ಯೋಜನೆಯನ್ನು ತಯಾರಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ವಿವಿಯ ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನ ಕೇಂದ್ರದ ನಿರ್ದೇಶಕ ಎನ್.ಶೇಕ್ ಮಸ್ತಾನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಸಮಾಧಿ ಕೆಂಪೇಗೌಡರಿಗೆ ಸೇರಿದ್ದು ಎಂಬುದನ್ನು ಖಚಿತಪಡಿಸಿದೆ. [ನಮ್ಮ ಮೆಟ್ರೋ ಇನ್ನು ಮುಂದೆ ಕೆಂಪೇಗೌಡ ಮೆಟ್ರೋ?]
ಸಮಾಧಿ ಕೆಂಪೇಗೌಡರಿಗೆ ಸೇರಿದ್ದು ಎಂಬುದು ಖಚಿತವಾದ ನಂತರ ಪುರಾತತ್ವ ಇಲಾಖೆ ಅಭಿವೃದ್ಧಿಗೆ ಮುಂದಾಗಿದೆ. ಅಭಿವೃದ್ಧಿಗೆ 2 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದ್ದು, 2 ಎಕರೆ ಜಾಗ ನೀಡುವಂತೆ ಸರ್ಕಾರಕ್ಕೆ ಕೋರಿತ್ತು. ಜಿಲ್ಲಾಧಿಕಾರಿಗಳು ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶ ಹೊರಡಿಸಿದ್ದಾರೆ.
'ಕೆಂಪೇಗೌಡರ ಸಮಾಧಿ ಅಭಿವೃದ್ಧಿಗಾಗಿ 2 ಎಕರೆ ಜಾಗವನ್ನು ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪುರಾತತ್ವ ಇಲಾಖೆ ಸ್ಥಳವನ್ನು ಅಭಿವೃದ್ಧಿಪಡಿಸಿದ ಬಳಿಕ, ಮುಂದಿನ ಅಭಿವೃದ್ಧಿಗೆ ಸಮಾಧಿ ಸ್ಥಳವನ್ನು ಬಿಬಿಎಂಪಿ ವಶಕ್ಕೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಹೇಳಿದ್ದಾರೆ.
ಅಕ್ಟೋಬರ್ನಲ್ಲಿ ಸಮಾಧಿ ಪತ್ತೆಯಾಗಿತ್ತು
2015ರ ಅಕ್ಟೋಬರ್ನಲ್ಲಿ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಪಾಪುರ ಗ್ರಾಮದಲ್ಲಿ ಕೆಂಪೇಗೌಡರ ಸಮಾಧಿ ಪತ್ತೆಯಾಗಿತ್ತು. ಗ್ರಾಮದ ಪ್ರಶಾಂತ್ ಎಂಬ ಯುವಕ ಕೆಂಪೇಗೌಡರ ಶಿಲಾಶಾಸನಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡುವ ಸಂದರ್ಭದಲ್ಲಿ ಈ ಶಿಲಾಶಾಸನ ಪತ್ತೆಯಾಗಿತ್ತು. ಈಗ ಪುರಾತತ್ವ ಇಲಾಖೆ ಸಮಾಧಿ ಪತ್ತೆಯಾದ ಸ್ಥಳವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ.
ಮೇಯರ್, ಉಪ ಮೇಯರ್ ಭೇಟಿ ನೀಡಿದ್ದರು
ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಮತ್ತು ಉಪ ಮೇಯರ್ ಹೇಮಾವತಿ ಮತ್ತು ಪಾಲಿಕೆಯ ಹಲವು ಅಧಿಕಾರಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಮಾಧಿ ಬಗ್ಗೆ ವರದಿ ನೀಡುವಂತೆ ಬೆಂಗಳೂರು ವಿವಿಯ ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನ ಕೇಂದ್ರದ ನಿರ್ದೇಶಕ ಎನ್.ಶೇಕ್ ಮಸ್ತಾನ್ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿದ್ದರು.
ಪುರಾತತ್ವ ಇಲಾಖೆಯಿಂದ ಅಭಿವೃದ್ಧಿ
ಸಮಿತಿಯು ಬಿಬಿಎಂಪಿ ಮೇಯರ್ಗೆ ವರದಿ ನೀಡಿದ್ದು, ಸಮಾಧಿ ಕೆಂಪೇಗೌಡರದ್ದು ಎಂಬುದು ಖಚಿತವಾಗಿದೆ. ರಾಜ್ಯ ಪುರಾತತ್ವ ಇಲಾಖೆ ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಲು 2.36 ಕೋಟಿ ರೂ.ಗಳ ಯೋಜನೆಯನ್ನು ತಯಾರಿಸಿದೆ. ಸಮಾಧಿ ಸ್ಥಳದ ಸುತ್ತಮುತ್ತಲು 2 ಎಕರೆ ಜಾಗವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಅಭಿವೃದ್ಧಿ ಬಳಿಕ ಬಿಬಿಎಂಪಿ ವಶಕ್ಕೆ
ರಾಮನಗರ ಜಿಲ್ಲಾಧಿಕಾರಿಗಳು ಕೆಂಪೇಗೌಡ ಸಮಾಧಿ ಸುತ್ತ-ಮುತ್ತ 2 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶ ಹೊರಡಿಸಿದ್ದಾರೆ. 'ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಿದ ಬಳಿಕ ಅದನ್ನು ಬಿಬಿಎಂಪಿ ವಶಕ್ಕೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ' ಎಂದು ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಹೇಳಿದ್ದಾರೆ.
ಪ್ರಾಧಿಕಾರ ರಚನೆ ಮಾಡಲು ಆಗ್ರಹ
ಕೆಲವು ದಿನಗಳ ಹಿಂದೆ ಕೆಂಪಾಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, 'ಸರ್ಕಾರ ಕೆಂಪೇಗೌಡರ ಹೆಸರಿನಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚಿಸಿ, ಸಂಶೋಧನೆ ಮಾಡುವ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಬೇಕು' ಎಂದು ಒತ್ತಾಯಿಸಿದ್ದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು.