ಒಂದೇ ವೇದಿಕೆಯಲ್ಲಿ ಗೌಡ್ರು, ಎಸ್ ಎಂ ಕೃಷ್ಣ: ಶತ್ರುವಿನ ಶತ್ರು.. ಮಿತ್ರ?
ವಲಸಿಗರು ಮತ್ತು ಮೂಲ ಕಾಂಗ್ರೆಸ್ಸಿಗರ ನಡುವಿನ ಶೀತಲ ಸಮರ ಒಂದೆಡೆ, ದಲಿತ ಮುಖ್ಯಮಂತ್ರಿ ಬೇಕು ಎನ್ನುವ ಕೂಗು ಇನ್ನೊಂದೆಡೆ, ಇವೆರಡರ ನಡುವೆ ಒಕ್ಕಲಿಗ ಸಮುದಾಯದ ಪ್ರಮುಖ ಮುಖಂಡರಿಬ್ಬರು ಒಂದೇ ವೇದಿಕೆಯಲ್ಲಿ ಸೇರಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಮಂಗಳವಾರ (ಏ 26) ಕೆ ಆರ್ ನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೆಸರಿನಲ್ಲಿ ನಿರ್ಮಾಣವಾದ ಸಮುದಾಯ ಭವನ ಉದ್ಘಾಟನೆಗೆ ಪ್ರಮುಖವಾಗಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಆಗಮಿಸಿ ಎಲ್ಲರೂ಼ ಹುಬ್ಬೇರಿಸುವಂತೆ ಮಾಡಿದ್ದಾರೆ. (ಆದಿಚುಂಚನಗಿರಿ ಶ್ರೀಗಳಿಗೆ ಕೊಡಬಾರದ ಕಷ್ಟ ಕೊಟ್ಟಿದ್ದ ಎಚ್ಡಿಕೆ)
ರಾಜ್ಯ ರಾಜಕಾರಣದಲ್ಲಿ ಉತ್ತರ, ದಕ್ಷಿಣ ಮುಖವಾಗಿರುವ ದೇವೇಗೌಡ ಮತ್ತು ಎಸ್ ಎಂ ಕೃಷ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಉದಾಹರಣೆಗಳು ಅತಿ ವಿರಳ. ಅದರಲ್ಲೂ ದೊಡ್ಡ ಗೌಡ್ರ ಹೆಸರಿನ ಕಾರ್ಯಕ್ರಮವೊಂದರಲ್ಲಿ ಕೃಷ್ಣ ಆಗಮಿಸಿ ನೆರೆದಿದ್ದ ಒಕ್ಕಲಿಗ ಸಮುದಾಯದವರು ಕಣ್ ಕಣ್ ಬಿಡುವಂತೆ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಯಾವುದೇ ಕಾರ್ಯಕ್ರಮದಿಂದ ಇತ್ತೀಚಿಗೆ ದೂರ ಉಳಿದಿರುವ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೆ ಕೊಂಡಿದ್ದು ಇನ್ನೊಂದು ವಿಶೇಷ. (ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ಗೌಡ್ರು)
ಗೌಡ್ರ ಕುಟುಂಬದಿಂದ ಮುನಿಸಿಕೊಂಡು ದೂರ ಉಳಿದಿದ್ದ ಜಿ ಟಿ ದೇವೇಗೌಡ, ಬಿಜೆಪಿ ಮುಖಂಡ ಮತ್ತು ಮಾಜಿ ಉಪ ಮುಖ್ಯಮಂತ್ರಿ ಆರ್ ಆಶೋಕ್ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾವೆಲ್ಲರೂ ಒಂದೇ ಎಂದು ಸಾರಿದ್ದಾರೆ. ಆದಿಚುಂಚನಗಿರಿ ಮಠಾಧೀಶರ ಮಾರ್ಗದರ್ಶನದಲ್ಲಿ ಈ ಸಮಾರಂಭ ನಡೆದಿದ್ದು ಇನ್ನೊಂದು ವಿಶೇಷ.
ದೇವೇಗೌಡ್ರರ ಬಗ್ಗೆ ಅಭಿಮಾನದ ಮಾತನ್ನಾಡಿದ ಕೃಷ್ಣ, ಸಿಎಂ ಸಿದ್ದು ವಿರುದ್ದ ಜಿಟಿಡಿ ನೇರ ವಾಗ್ದಾಳಿ.. ಸ್ಲೈಡಿನಲ್ಲಿ
ಎಸ್ ಎಂ ಕೃಷ್ಣ ಹೇಳಿದ್ದು
ದೇವೇಗೌಡರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣವಾಗಿದ್ದು ನನಗೆ ತುಂಬಾ ಸಂತೋಷವಾಗಿದೆ. ನಾನು ಚಿಲ್ಲರೆ ರಾಜಕಾರಣಿಯಲ್ಲ, ಒಂದು ವೇಳೆ ಹಾಗಿದ್ದರೆ ಈ ಕಾರ್ಯಕ್ರಮಕ್ಕೆ ನಾನು ಬರುತ್ತಿರಲಿಲ್ಲ. ದೇವೇಗೌಡ್ರು ಉನ್ನತ ಹುದ್ದೆಯನ್ನು ಅಲಂಕರಿಸಿದವರು, ಅವರ ಬಗ್ಗೆ ನನಗೆ ಗೌರವವಿದೆ - ಎಸ್ ಎಂ ಕೃಷ್ಣ.
ಗೌಡ್ರು ಪಿಎಂ ಆದಾಗ ಖುಷಿ ಪಟ್ಟಿದ್ದೆ
ನಾವಿಬ್ಬರೂ ಒಂದೇ ಸಮುದಾಯದವರು, ಆದರೆ ನಾವು ಪ್ರತಿನಿಧಿಸುತ್ತಿರುವ ಪಕ್ಷದ ಸಿದ್ದಾಂತಗಳು ಬೇರೆ ಬೇರೆ.. ದೇವೇಗೌಡ್ರು ಪ್ರಧಾನಿಯಾದಾಗ ನಾನು ಬಹಳ ಸಂತೋಷ ಪಟ್ಟಿದ್ದೆ. ಸಮುದಾಯದ ವ್ಯಕ್ತಿಯೊಬ್ಬರು ದೇಶದ ಉನ್ನತ ಹುದ್ದೆ ಏರಿದ್ದಕ್ಕೆ ನನಗೆ ಹೆಮ್ಮೆಯಿದೆ. ನನ್ನ ಮಾತನ್ನು ನಂಬುವುದು, ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದೇನೆ ಎಂದು ಕೃಷ್ಣ ತುಂಬಿ ಕುಳಿತಿದ್ದ ಸಮಾರಂಭದಲ್ಲಿ ಹೇಳಿದ್ದಾರೆ.
ದೇವೇಗೌಡ ಸಮುದಾಯ ಭವನ
ಮೈಸೂರು ಜಿಲ್ಲೆಯ ಕೆ ಆರ್ ನಗರದಲ್ಲಿ ನಡೆದ 'ಎಚ್ ಡಿ ದೇವೇಗೌಡ ಸಮುದಾಯ ಭವನ' ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಮತ್ತು ದೇವೇಗೌಡರು ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದರು. ಕಳೆದ ವರ್ಷ ಜೂನ್ 30 ರಂದು ಒಕ್ಕಲಿಗರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ವೇದಿಕೆ ಹಂಚಿಕೊಂಡಿದ್ದರು.
ಜಿ ಟಿ ದೇವೇಗೌಡ ವಾಗ್ದಾಳಿ
ಸಿದ್ದರಾಮಯ್ಯನವರು ರಾಜಕೀಯದಲ್ಲಿ ಮೇಲೆ ಬರಲು ದೇವೇಗೌಡ ಮತ್ತು ಸಿಎಂ ಆಗಲು ಕೃಷ್ಣ ಕಾರಣ. ಈಗ ಇಬ್ಬರೂ ನೋವು ಅನುಭವಿಸುತ್ತಿದ್ದಾರೆ, ನಾನು ಅನುಭವಿಸುತ್ತಿದ್ದೇವೆ, ರಾಜ್ಯದ ಜನರೂ ಅನುಭವಿಸುತ್ತಿದ್ದಾರೆ. ದೇವೇಗೌಡ್ರು ಕಣ್ಣೀರಿಡುತ್ತಿದ್ದಾರೆ. ಕುಮಾರಸ್ವಾಮಿ ಮುಂದಿನ ಸಿಎಂ ಆಗಬೇಕು ಎನ್ನುವುದು ಎಲ್ಲರ ಆಶಯ ಎಂದು ಜಿ ಟಿ ದೇವೇಗೌಡ, ಗೌಡ್ರ ಕುಟುಂಬದ ಮೇಲೆ ಅಭಿಮಾನ ಮೆರೆದಿದ್ದಾರೆ.
ಎಚ್ ಡಿ ದೇವೇಗೌಡ
ನೀವು ಕಾರ್ಯಕ್ರಮಕ್ಕೆ ಬರುತ್ತೀರಾ ಎಂದು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ. ನೀವು ಸಿಎಂ ಆದ್ರಿ, ರಾಜ್ಯಪಾಲ ಹುದ್ದೆ ಅಲಂಕರಿಸಿದಿರಿ, ವಿದೇಶಾಂಗ ಸಚಿವರೂ ಆದ್ರಿ, ರಾಜ್ಯ ರಾಜಕೀಯಕ್ಕೆ ನಿಮ್ಮದೇ ಆದ ಕೊಡುಗೆ ಬಹಳ ಇದೆ. ಕೃಷ್ಣ ಮತ್ತು ನಾನು ಇಬ್ಬರೂ ಎಡವಿದ್ದೇವೆ, ಅದಕ್ಕಾಗಿ ಇಬ್ಬರೂ ನೊಂದುಕೊಳ್ಳುತ್ತಿದ್ದೇವೆ. ಆದರೆ ಈಗ ಕಾಲ ನಮ್ಮನ್ನು ಒಗ್ಗೂಡಿಸಿದೆ. ಕೃಷ್ಣ ಹಾಗೂ ನಾನು ಇಬ್ಬರೂ ಒಂದೇ ವೇದಿಕೆಯಲ್ಲಿ ಕೂರಲು ದೇವರ ಆಟವಿದೆ, ದೈವ ಶಕ್ತಿ ಇದೆ ಎಂದು ದೇವೇಗೌಡರು ಹೇಳಿದ್ದಾರೆ.
ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮಾತನಾಡುತ್ತಾ, ರಾಜ್ಯದಲ್ಲಿ ಬರ ಅಧ್ಯಯನ ವೀಕ್ಷಣೆ ಕೇವಲ ರಾಜಕೀಯ ನಾಟಕವಾಗಿದೆ, ಜನರ ಕಣ್ಣೊರೆಸುವ ತಂತ್ರ. ಇಂತಹ ರಾಜಕೀಯ ನಾಟಕ್ಕೆ ಹಿರಿಯರಾದ ದೇವೇಗೌಡರು ಮತ್ತು ಎಸ್.ಎಂ.ಕೃಷ್ಣ ಪರಿಹಾರ ಕಂಡುಹಿಡಿಯಬೇಕು ಎಂದು ಎಚ್ಡಿಕೆ ಅಭಿಪ್ರಾಯ ಪಟ್ಟಿದ್ದಾರೆ.
ಶತ್ರುವಿನ ಶತ್ರು ಮಿತ್ರ
ವೇದಿಕೆಯಲ್ಲಿ ಕೃಷ್ಣ ಮತ್ತು ಕುಮಾರಸ್ವಾಮಿ ಅತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ತೆರೆಮೆರೆಯಲ್ಲಿ ಪ್ರಯತ್ನ ನಡೆಯುತ್ತಲೇ ಇರುವ ಈ ಹೊತ್ತಿನಲ್ಲಿ, ದೇವೇಗೌಡ, ಕುಮಾರಸ್ವಾಮಿ ಸಹ ಆಖಾಡಕ್ಕೆ ಇಳಿದಿದ್ದಾರೆ ಎನ್ನುವ ಸುದ್ದಿಯಿದೆ. 'ಶತ್ರುವಿನ ಶತ್ರು ಮಿತ್ರ' ಯಾಕಾಗಬಾರದು? ಅದೂ ರಾಜಕೀಯದಲ್ಲಿ..