ಕರ್ನಾಟಕ ಚುನಾವಣೆ ರಣಾಂಗಣದ ದಿಕ್ಕು ನಿರ್ಧರಿಸಲಿರುವ ಅಮಿತ್ ಶಾ, ಮೋದಿ!
ಈ ಹಿಂದೆಂದಿಗಿಂತಲೂ ಆರೆಸ್ಸೆಸ್ ಹಾಗೂ ಬಿಜೆಪಿ ಮಧ್ಯದ ಸಮನ್ವಯ ತುಂಬ ಚೆನ್ನಾಗಿದೆಯಾ? ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಉತ್ತರಪ್ರದೇಶ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಚಾರದ ಮುಂಚೂಣಿಯಲ್ಲಿ ನಿಲ್ಲುತ್ತಾರಾ? ಈ ಬಗ್ಗೆ ಬಿಜೆಪಿಯಲ್ಲಿ ಈಗಾಗಲೇ ಸಂಚಲನ ಶುರುವಾಗಿದೆ.
ಪಕ್ಷ ಸಂಘಟನೆ ಆಗಲೇಬೇಕು ಎಂದು ಈಚೆಗೆ ಮಾಡಿದ ವಿಸ್ತಾರಕ್ ಕಾರ್ಯಕ್ರಮದಿಂದ ಒಂದಿಷ್ಟು ಸಮಾಧಾನದ ಸ್ಥಿತಿ ಕಾಣಿಸಿಕೊಂಡಿದ್ದು, ಈ ಬಾರಿ ಶೇ ಅರವತ್ತರಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಆದರೆ ಈ ತಂತ್ರದ ಹಿಂದಿನ ಲೆಕ್ಕಾಚಾರ ಏನು ಗೊತ್ತಾ?
ಯಡಿಯೂರಪ್ಪ ಅವರದು ಕೇರಂ ಆಟದ ತಂತ್ರ: ಸುರೇಶ್ ಕುಮಾರ್ ಸಂದರ್ಶನ
ಎದುರಾಳಿಗೆ ಹೊಸಬರ ವಿರುದ್ಧ ಮಾಡುವುದಕ್ಕೆ ಆರೋಪಗಳೇನೂ ಸಿಗುವುದಿಲ್ಲ. ವರ್ಚಸ್ಸು ಇರುವುದಿಲ್ಲ ಎಂಬುದು ತಕರಾರು ಅಂದುಕೊಂಡರೆ, ಅದೇ ರೀತಿ ಆಕ್ಷೇಪಿಸುವುದಕ್ಕೆ ಅಥವಾ ಆರೋಪಿಸುವುದಕ್ಕೆ ಕೂಡ ಯಾವುದೇ ಅಂಶ ಇರುವುದಿಲ್ಲ. ಅದನ್ನೇ ಚುನಾವಣೆಯಲ್ಲಿ ಪ್ಲಸ್ ಮಾಡಿಕೊಳ್ಳಬೇಕು ಎಂಬುದು ಉತ್ತರಪ್ರದೇಶದ ಮಾದರಿ ಕಲಿಸಿರುವ ಪಾಠ.
ವಿಮಾನ ಹತ್ತುವ ಮುನ್ನ ಅಮಿತ್ ಶಾ ಹೇಳಿದ 6 ಸಂಗತಿ
ಬಿಜೆಪಿಯ ಮೂಲಗಳು ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಹೇಳುವ ಮಾಹಿತಿಗಳನ್ನೇ ನಂಬುವುದಾದರೆ, ಇಲ್ಲೂ ಕೂಡ ರಣಾಂಗಣಕ್ಕೆ ಇಳಿಯುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ. ರಾಜ್ಯ ನಾಯಕರು ಉತ್ಸವ ಮೂರ್ತಿಗಳಂತೆ ಜತೆಗಿರುತ್ತಾರೆ ಅಷ್ಟೇ. ಹಾಗಿದ್ದರೆ ಕಮಲ ಪಕ್ಷದ ರಣತಂತ್ರಗಳು ಏನಿರಬಹುದು? ತಿಳಿಯಲು ಮುಂದೆ ಓದಿ.
ಕಳೆದ ಬಾರಿ ಭಿನ್ನಮತದ ಮುಜುಗರ
ಹೊಸಬರನ್ನೇ ಕಣಕ್ಕಿಳಿಸಿ, ಎದುರಾಳಿಗಳಿಗೆ ಆರೋಪಕ್ಕೆ ಅವಕಾಶ ನೀಡಬಾರದು ಎಂಬುದು ಒಂದು ಕಡೆಯಾದರೆ, ಈ ಹಿಂದಿನ ಎಪಿಸೋಡಿನಲ್ಲಿ ಬಿಜೆಪಿ ಎದುರಿಸಿದ ಭಿನ್ನಮತದ ಮುಜುಗರ ಕಾಣಿಸಿಕೊಳ್ಳಬಾರದು ಎಂದು ಕೂಡ ಲೆಕ್ಕಾಚಾರ ಇದೆ. ಹೊಸ ಶಾಸಕರಿಗೆ ಮೈ ಚಳಿ ಬಿಡುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಜತೆಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುವ ಅಗತ್ಯ ಇರುತ್ತದೆ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತ ಕೀಳುವ ಲೆಕ್ಕಾಚಾರ
ಇನ್ನು ಆದಿಚುಂಚನಗಿರಿಯ ನಿರ್ಮಲಾನಂದನಾಥರ ಭೇಟಿಯ ಹಿಂದೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಪ್ರಭಾವಳಿ ಬಳಸಿಕೊಳ್ಳುವ ಇರಾದೆಯೂ ಇದೆ. ಮೂಲತಃ ನಾಥ ಪರಂಪರೆಯ ಆದಿಚುಂಚನಗಿರಿ ಮಠವು ಗೋರಖನಾಥ ಪುರಕ್ಕೆ ನಡೆದುಕೊಳ್ಳುತ್ತದೆ. ಅದರ ಮುಖ್ಯಸ್ಥರೇ ಯೋಗಿ. ಅಲ್ಲಿಂದ ಹೇಳಿಸಿ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳನ್ನು ಸ್ವಲ್ಪ ಮಟ್ಟಿಗಾದರೂ ಬಿಜೆಪಿ ಬುಟ್ಟಿಗೆ ಬೀಳಿಸಿಕೊಳ್ಳುವ ಲೆಕ್ಕಾಚಾರವಿದು.
ಶೇ ಇಪ್ಪತ್ತರಷ್ಟು ಟಿಕೆಟ್, ಜತೆಗೆ ಒಂದಿಷ್ಟು ಷರತ್ತು
ಸಾಲು ಸಾಲು ಚುನಾವಣೆ ಸಭೆಗಳಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸ್ವತಃ ಪಾಲ್ಗೊಳ್ಳುತ್ತಾರೆ. ಈಗಾಗಲೇ ಟಿಕೆಟ್ ಹಂಚಿಕೆ ವಿಚಾರವಾಗಿ ಯಡಿಯೂರಪ್ಪನವರಿಗೆ ಒಂದು ಮಿತಿ ಹಾಕಲಾಗಿದೆ. ಮೂಲಗಳ ಮಾತೇ ಉದಾಹರಿಸುವುದಾದರೆ, ಶೇ ಇಪ್ಪತ್ತರಷ್ಟು ಮಾತ್ರ ಬಿಎಸ್ ವೈ ಹಿಡಿತದಲ್ಲಿರುತ್ತದೆ. ಅದರಲ್ಲೂ ಕಳಂಕಿತರಿಗೆ, ಇಮೇಜ್ ಹಾಳು ಮಾಡಿಕೊಂಡವರಿಗೆ ಟಿಕೆಟ್ ನೀಡುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ವೇದಿಕೆ ಸಿದ್ಧ ಮಾಡುವುದಷ್ಟೇ ಕೆಲಸ
ಚುನಾವಣೆ ಹೊತ್ತಿಗೆ ಚರ್ಚೆಗೆ ಬರಲಿರುವ ವಿಚಾರಗಳೇ ಬೇರೆ. ಅದಕ್ಕಾಗಿ ಎಲ್ಲ ತಯಾರಿ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತವರ ತಂಡಕ್ಕೆ ಅಂದಾಜು ಮಾಡಲು ಆಗದಂತಹ ಹೊಡೆತ ನೀಡಲು ಸಿದ್ಧತೆ ನಡೆದಿದೆ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಅಷ್ಟು ಹೊತ್ತಿಗೆ ವೇದಿಕೆ ಸಿದ್ಧ ಮಾಡುವುದಷ್ಟೇ ಕೆಲಸ.