ಡೊನೇಷನ್ ಗೇಟ್ ಪಿತೂರಿ : ಯಾವುದು ಸತ್ಯ, ಯಾವುದು ಮಿಥ್ಯ?
ಡೈರಿ ಹಗರಣದ ರೂವಾರಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು. ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡಿಗೆ ಸಾವಿರ ಕೋಟಿ ರುಪಾಯಿ ಕಪ್ಪಕಾಣಿಕೆ ನೀಡಿದ್ದಾರೆ ಎಂದು ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಿದ್ದರು.
ಬೆಂಗಳೂರು, ಫೆಬ್ರವರಿ 26 : ಕರ್ನಾಟಕದ ರಾಜಕೀಯ, ಜಯಲಲಿತಾ ತೀರಿಕೊಂಡಾಗ ತಮಿಳುನಾಡಿನಲ್ಲಿ ಉದ್ಭವವಾದಂಥ ಪರಿಸ್ಥಿತಿಗಿಂತ ಹದಗೆಟ್ಟುಹೋಗಿದೆ. ಅಲ್ಲಿ ಇದ್ದಿದ್ದು ಅಧಿಕಾರಕ್ಕಾಗಿ ಹೊಡೆದಾಟ, ಇಲ್ಲಿ ಅವರ ಡೈರಿ ಇವರು ಇವರ ಡೈರಿ ಅವರು ಬಯಲಿಗೆಳೆಯುತ್ತ ಅಸಹ್ಯಕರವಾಗಿ ಬಡಿದಾಡಿಕೊಳ್ಳುತ್ತಿದ್ದಾರೆ.
ಈ ರಾಜಕೀಯ ಬಣಗಳ ನಡುವಿನ ಹೊಡೆದಾಟದಲ್ಲಿ ಮೂರ್ಖರಾಗುತ್ತಿರುವುದು ಇಂಥವರಿಗೆ ಮತ ಹಾಕಿದ ಕರ್ನಾಟಕದ ಜನರು!
ಈ ಡೈರಿ ಹಗರಣದ ರೂವಾರಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು. ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡಿಗೆ ಸಾವಿರ ಕೋಟಿ ರುಪಾಯಿ ಕಪ್ಪಕಾಣಿಕೆ ನೀಡಿದ್ದಾರೆ ಎಂದು ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಿದ್ದರು.
ಸಿದ್ದರಾಮಯ್ಯ ಅವರ ಆಪ್ತ ಎಂಎಲ್ಸಿಯಾಗಿರುವ ಗೋವಿಂದರಾಜ್ ಎಂಬಾತನಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಹೈಕಮಾಂಡಿಗೆ, ಹಲವಾರು ರಾಷ್ಟ್ರೀಯ ನಾಯಕರಿಗೆ ಲಂಚ ನೀಡಲಾಗಿದೆ ಎಂಬ ಬಗ್ಗೆ ವಿವರಗಳಿವೆ. ಅಲ್ಲದೆ ಸ್ಟೀಲ್ ಫ್ಲೈಓವರ್ ಯೋಜನೆಯಲ್ಲೂ ಲಂಚ ತಿನ್ನಲಾಗಿದೆ ಎಂದು ಆರೋಪಿಸಿದರು. [ಕಾಂಗ್ರೆಸ್ ಪಕ್ಷದ 'ಡೊನೇಷನ್ ಗೇಟ್' ಬಗ್ಗೆ ಜನ ಏನು ಹೇಳ್ತಾರೆ?]
ಗಾಜಿನಮನೆಯಲ್ಲಿ ವಾಸಿಸುವವರು ಅನ್ಯರ ಮನೆಯ ಮೇಲೆ ಕಲ್ಲು ಎಸೆಯಬಾರದು ಎಂಬ ಜಾಣ್ನುಡಿ ಯಡಿಯೂರಪ್ಪನವರಿಗೆ ತಿಳಿದಿರಲಿಲ್ಲವೆ? ಈಗ ಅವರು ಮಾಡಿರುವ ಆರೋಪದಿಂದಾಗಿ, ಅವರೇ ಆರೋಪ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇಟ್ಟಿಗೆಯ ಹೊಡೆತದ ಉತ್ತರ ಕಲ್ಲಿನಿಂದ ನೀಡುತ್ತೇವೆ ಎಂಬಂತೆ ಕಾಂಗ್ರೆಸ್ ಈಗ ಬಿಜೆಪಿಯ ಬಂಡವಾಳವನ್ನು ಬಯಲು ಮಾಡಲು ನಿಂತಿದೆ. [ಡೊನೇಷನ್ ಗೇಟ್ : ಬಿಜೆಪಿ ಬಣ್ಣ ಬಯಲು ಮಾಡಿದ ಕಾಂಗ್ರೆಸ್]
|
ಬಂತು ನೋಡಿ ಮತ್ತೊಂದು ಪಕ್ಷದ ಡೈರಿ
ಇದು ಸಾಲದೆಂಬಂತೆ, ಭರತ್ ಸೂರ್ಯಪ್ರಕಾಶ್ ಎಂಬ ನರೇಂದ್ರ ಮೋದಿ ಭಕ್ತರೊಬ್ಬರು, ಬರೀ ಕಾಂಗ್ರೆಸ್ ಮತ್ತು ಬಿಜೆಪಿಯ ಡೈರಿಯನ್ನ ಏಕೆ ಬಹಿರಂಗ ಮಾಡುತ್ತೀರಿ, ಇಲ್ಲಿದೆ ನೋಡಿ ಜೆಡಿಎಸ್ ನಲ್ಲಿಯೂ ಕಪ್ಪಕಾಣಿಕೆ ನೀಡಿದ, ಸ್ವೀಕರಿಸಿದ ಡೈರಿ ಎಂದು ಟ್ವಿಟ್ಟರಿನಲ್ಲಿ ಪ್ರಕಟಿಸಿದ್ದಾರೆ. ಯಾರನ್ನು ನಂಬೋಣ, ಯಾರನ್ನು ಬಿಡೋಣ, ಹೇಳಿ? ಕೆಲ ದಿನಗಳ ಹಿಂದೆ ನಮ್ಮಲ್ಲಿ ಹೈಕಮಾಂಡಿ ಸಂಸ್ಕೃತಿಯೇ ಇಲ್ಲದ್ದರಿಂದ ಲಂಚ ಕೊಡುವ ಪ್ರಮೇಯವೂ ಇಲ್ಲ ಎಂದಿದ್ದರು ದೇವೇಗೌಡರು.
ಸಿದ್ದರಾಮಯ್ಯನವರದು ದಿವ್ಯ ಮೌನ
ಬಿಜೆಪಿ ಮಾಡಿರುವ ಗಂಭೀರ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವ್ಯ ಮೌನ ತಾಳಿರುವುದು, ಯಾರೊಂದಿಗೂ ಮುಕ್ತವಾಗಿ ಮಾತುಕತೆ ನಡೆಸದಿರುವುದು, ಇದ್ದಕ್ಕಿದ್ದಂತೆ ಹೆಚ್ಚೂಕಡಿಮೆ ಇಡೀ ಸಂಪುಟವನ್ನೇ ಬದಲಾಯಿಸಲು ಹೊರಟಿರುವುದು ಡೈರಿ ಸೃಷ್ಟಿಸಿದ ಸಂಕೋಲೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. [ಕಾಂಗ್ರೆಸ್ ಡೈರಿ ಬೆಂಕಿಗೆ ದಿನೇಶ್ ಅಮಿನ್ ಮಟ್ಟು ತುಪ್ಪ]
ಡೈರಿಯಲ್ಲಿ ಪ್ರಮುಖವಾಗಿ ಕಂಡವರ ಹೆಸರು ಏಕಿಲ್ಲ?
ಈ ಸಂಪುಟ ಪುನಾರಚನೆಯಲ್ಲಿ ನಾಲ್ಕು ವರ್ಷ ಪೂರೈಸಿರುವ ಹಲವಾರು ನಾಯಕರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಡೈರಿಯಲ್ಲಿ ನಮೂದಾಗಿರುವ (ಸಂಕೇತಾಕ್ಷರಗಳಲ್ಲಿ) ಕೆಲವರ ಹೆಸರು ಸಂಪುಟದಿಂದ ಕಿತ್ತುಹಾಕಲಿರುವವರ ಪಟ್ಟಿಯಲ್ಲಿ ಇರದಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡುವಂತಿದೆ. ಇದಕ್ಕೆಲ್ಲ ಉತ್ತರ ಸಿದ್ದರಾಮಯ್ಯನವರು ಯಾವಾಗ ನೀಡುತ್ತಾರೋ? ಸಿದ್ದರಾಮಯ್ಯನವರು ಆದಷ್ಟು ಬೇಗ ಬಾಯಿ ಬಿಡುವುದು ಒಳಿತು.
ಲೆಹರ್ ಸಿಂಗ್ ಸಿಸೋರಿಯಾ ತಿರುಗೇಟು
ಕಾಂಗ್ರೆಸ್ ಬಿಡುಗಡೆ ಮಾಡಿರುವ ಬಿಜೆಪಿಯ ಕಪ್ಪಕಾಣಿಕೆಯ ಡೈರಿಯಲ್ಲಿ ಇರುವುದು ನನ್ನ ಸಹಿಯೇ ಅಲ್ಲ ಎಂದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಖಜಾಂಚಿಯಾಗಿದ್ದ ಲೆಹರ್ ಸಿಂಗ್ ಸಿಸೋರಿಯಾ ತಿರುಗೇಟು ನೀಡಿದ್ದಾರೆ. ನಾನು ಮಾಡುವ ಸಹಿಯೇ ಬೇರೆ, ಆ ಡೈರಿಯಲ್ಲಿ ನಮೂದಾಗಿರುವ ಕೆಲವರು ಆ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ನಲ್ಲಿ ಇರಲೇ ಇಲ್ಲ ಎಂದೂ ಸ್ಪಷ್ಟೀಕರಣ ನೀಡಿದ್ದಾರೆ. [ಡೈರಿ ನನ್ನದ್ದಲ್ಲ, ಇದೆಲ್ಲ ದಿನೇಶ್ ಗುಂಡೂರಾವ್ ಪಿತೂರಿ: ಲೆಹರ್]
ಅಮಿತ್, ಗಾಂಧಿ ಸ್ಪಷ್ಟೀಕರಣ ನೀಡುತ್ತಾರಾ?
ಕರ್ನಾಟಕದಲ್ಲಿ ದೇಶವೇ ಇತ್ತ ನೋಡುವಂಥ ಕೆಸರೆರಚಾಟಗಳು ನಡೆಯುತ್ತಿರುವಾಗ ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಯಾಕೆ ಕುಳಿತಿದ್ದಾರೆ? ಬಿಜೆಪಿ ಪರವಾಗಿ ಅಮಿತ್ ಶಾ ಮತ್ತು ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಬಹುದಲ್ಲವೆ? ಇಲ್ಲದಿದ್ದರೆ ಮೌನಂ ಸಮ್ಮತಿ ಲಕ್ಷಣಂ ಎಂದು ಕರ್ನಾಟಕದ ಜನತೆ ತೀರ್ಮಾನಿಸಬೇಕಾಗುತ್ತದೆ.
ಪಾರದರ್ಶಕ ತನಿಖೆ ನಡೆಯಲೇಬೇಕ್
ಯಾರು ಎಷ್ಟು ಕೊಟ್ಟಿದ್ದಾರೋ, ಎಷ್ಟು ಸ್ವೀಕರಿಸಿದ್ದಾರೋ? ಡೈರಿಯಲ್ಲಿರುವುದು ಎಷ್ಟು ನಿಜವೋ ಎಷ್ಟು ಸುಳ್ಳೋ? ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ, ಮತದಾರರ ದೃಷ್ಟಿಯಲ್ಲಿ ಕೆಟ್ಟವರನ್ನಾಗಿ ಮಾಡುತ್ತ ತಮ್ಮ ಬಣ್ಣವನ್ನೇ ಬಯಲು ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಸಿಬಿಐನಿಂದ ತನಿಖೆ ನಡೆಯಬೇಕೆಂದು ಒಬ್ಬರೂ ಆಗ್ರಹಿಸುತ್ತಿಲ್ಲ.
ಸಾರ್ವಜನಿಕರ ಹಣ ಗುಳುಂ, ನಾಚಿಕೆಗೇಡು
ಡೈರಿಯ ಸತ್ಯಾಸತ್ಯತೆ ಬಯಲಾಗುವವರೆಗೆ ರಾಜಕಾರಣಿಗಳ ಆಟ ಹೀಗೆಯೇ ನಡೆಯುತ್ತಲೇ ಇರುತ್ತದೆ. ಪಾರ್ಟಿ ಫಂಡಿಗೆಂದು, ಚುನಾವಣೆಗೆಂದು ಹಣ ನೀಡುವುದು, ಇಸಿದುಕೊಳ್ಳುವುದು ಸರ್ವೇಸಾಮಾನ್ಯ. ಆದರೆ, ಸ್ಟೀಲ್ ಫ್ಲೈಓವರಂಥ ಯೋಜನೆಯಲ್ಲಿ ಸಾರ್ವಜನಿಕರ ಹಣವನ್ನು ಗುಳುಂ ಮಾಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಲ್ಲಿ ಯಾರೂ ಅಮಾಯಕರಲ್ಲ ಎಂಬುದನ್ನು ತೀರ್ಮಾನಿಸಲು ಮತದಾರನಿಗೆ ಹೆಚ್ಚು ಹೊತ್ತು ಬೇಕಾಗಿಲ್ಲ.
ಹೃದಯ ಬಿರಿಯುವಂಥ ನೆಲ ಬಿರಿದ ಚಿತ್ರ
ಪಿಟಿಐನಲ್ಲಿ ಪ್ರಕಟವಾದ ಹುಬ್ಬಳ್ಳಿಯ ಬಳಿಯ ಗ್ರಾಮದಲ್ಲಿ ಬಿರಿದಿರುವ ನೆಲದ ಮೇಲೆ ತಲೆ ಮೇಲೆ ಕೈಹೊತ್ತು ಕುಳಿತಿರುವ ಅಜ್ಜಿಯೊಬ್ಬಳ ಚಿತ್ರ ನೋಡಿದರೆ ಎಂಥವರ ಹೃದಯವೂ ಬಿರಿಯುತ್ತದೆ. ಇದು ಒಂದು ಚಿತ್ರ ಮಾತ್ರ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಇಂಥ ಚಿತ್ರಗಳು ಸಿಗುತ್ತವೆ. ಇದು ಅಸಹ್ಯಕರವಾಗಿ ಕಿತ್ತಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳ ಅರಿವಿಗೆ ಬರುತ್ತದಾ? ಜನಪ್ರತಿನಿಧಿಗಳೇ, ಈ ಕೆಸರೆರಚಾಟ ಬಿಡಿ ನಿಮ್ಮ ನಿಮ್ಮ ಜಿಲ್ಲೆಗಳಿಗೆ ಹೋಗಿ, ಜನರಿಗೆ ನೀರು, ಜಾನುವಾರುಗಳಿಗೆ ಮೇವು ಕೊಡುವ ವ್ಯವಸ್ಥೆ ಮಾಡಿತ. ಡೈರಿ ಹಗರಣಕ್ಕೆ ಉತ್ತರ ಚುನಾವಣೆ ಬಂದಾಗ ಜನರೇ ನೀಡುತ್ತಾರೆ.