ಕಾಶ್ಮೀರದಲ್ಲೇ ಬರಗಾಲವಿದೆ ಮಂಡ್ಯದಲ್ಲಿರಲ್ವಾ? : ಅಂಬಿ
ಮಂಡ್ಯ, ಏಪ್ರಿಲ್ 22 : "ಜಮ್ಮು-ಕಾಶ್ಮೀರದಲ್ಲೇ ಬರಗಾಲ ತಲೆದೋರಿದೆ, ಇನ್ನು ನಮ್ಮ ಮಂಡ್ಯ ಜಿಲ್ಲೆಯಲ್ಲಿ ಬರಗಾಲ ಬರುವುದರಲ್ಲಿ ಆಶ್ಚರ್ಯವೇನಿಲ್ಲ!" ಹೀಗೆಂದವರು ಮಳವಳ್ಳಿ ಹುಚ್ಚೇಗೌಡರ ಮಗ ಅಮರನಾಥ್. ಇವರೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ, ನಟ ಅಂಬರೀಶ್.
ಗುರುವಾರ ಸಚಿವರು ಮತ್ತು ಅಧಿಕಾರಗಳ ದಂಡಿನೊಂದಿಗೆ ಮದ್ದೂರು, ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿನ ಗ್ರಾಮೀಣ ಪ್ರದೇಶಗಳಿಗೆ (ಕಾಟಾಚಾರದ) ಭೇಟಿ ನೀಡಿದ ಸಂದರ್ಭ ರೈತರು ತಮ್ಮ ಅಳಲು ತೋಡಿಕೊಂಡಾಗ ಸಚಿವ ಅಂಬರೀಶ್ ಈ ಉತ್ತರ ನೀಡಿದ್ದಾರೆ. ಸಚಿವರೇ ಹೀಗೆ ಹೇಳಿದ ಮೇಲೆ ರೈತರಿಗೆ ಮಾತನಾಡೋದಕ್ಕೆ ಇನ್ನೇನಿದೆ?
ಇಷ್ಟಕ್ಕೂ ಈ ಬರ ಅಧ್ಯಯನ ರೈತರ ಹಿತದೃಷ್ಟಿಯಿಂದ ನಡೆದಿದೆಯಾ ಎಂಬುದನ್ನು ನೋಡಿದರೆ ಖಂಡಿತಾ ಇಲ್ಲ ಎಂಬುದು ಅವರ ವರ್ತನೆಯಿಂದಲೇ ಗೊತ್ತಾಗಿ ಬಿಡುತ್ತದೆ. ಬೆಳಗ್ಗೆ 11 ಗಂಟೆಗೆ ಸಚಿವರು ಭೇಟಿ ನೀಡುತ್ತಾರೆ ಎಂಬ ಸುದ್ದಿ ಬಂದಿತ್ತು. ಅದರಂತೆ ರೈತರು ಆಗಮಿಸಿದ್ದರು. ಆದರೆ ಸಚಿವರ ಬರ ಅಧ್ಯಯನ ಪ್ರವಾಸ ಮಧ್ಯಾಹ್ನ 12.45 ಗಂಟೆಗೆ ಆರಂಭವಾಯಿತು. ಮದ್ದೂರು ತಾಲೂಕಿನ ಚಿನ್ನನದೊಡ್ಡಿ ಗ್ರಾಮಕ್ಕೆ ಮೊದಲು ಭೇಟಿ ನೀಡುವ ಮೂಲಕ ಸಚಿವರು ಜನರ ಸಮಸ್ಯೆಗಳನ್ನು ಆಲಿಸಿದರು. [ಕತ್ತಲಲ್ಲಿ ಕೆಆರ್ ಎಸ್ ವೀಕ್ಷಿಸಿದ ಬರ ಅಧ್ಯಯನ ತಂಡ!]
ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್. ಎಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ಶಾಸಕ ಡಿ.ಸಿ. ತಮ್ಮಣ್ಣ ಅವರು ತಾಲೂಕಿನ ಚಿನ್ನನದೊಡ್ಡಿ, ತೊರೆಶೆಟ್ಟಹಳ್ಳಿ, ಕೆಸ್ತೂರು ಗ್ರಾಮಗಳಿಗೆ ಭೇಟಿ ನೀಡಿ, ಬತ್ತಿಹೋದ ಕೆರೆಗಳನ್ನು ವೀಕ್ಷಿಸಿದರು.
ಈ ಸಂದರ್ಭ ಅವರನ್ನು ಸುತ್ತುವರಿದ ಜನರು ಪಕ್ಕದ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೀಶ್ವರ್ ಶಿಂಷಾ ನದಿಯಿಂದ ನೀರನ್ನು ತೆಗೆದುಕೊಂಡು ಹೋಗಿ ಅವರ ತಾಲೂಕಿನ ಕೆರೆಗಳನ್ನು ತುಂಬಿಸುತ್ತಾರೆ. ಆ ಕೆಲಸವನ್ನು ಈ ಕ್ಷೇತ್ರದ ಶಾಸಕರು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಥಳದಲ್ಲಿದ್ದ ಶಾಸಕ ಡಿ.ಸಿ.ತಮ್ಮಣ್ಣನವರು, ಶಿಂಷಾ ನದಿಯಿಂದ 53 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡಲ್ಲಿ ಈ ಭಾಗದ ಅನೇಕ ಗ್ರಾಮಗಳಲ್ಲಿರುವ ನೀರಿನ ಸಮಸ್ಯೆ ದೂರವಾಗಲಿದೆ ಎಂದು ಹೇಳಿ ತಿಪ್ಪೆ ಸಾರಿಸಿದರು. [ವಸತಿ ಇಲಾಖೆ ಸಾಧನೆ ಶೂನ್ಯ ಅಂದ್ರು ಸಿಎಂ, ಸಿಟ್ಟಾದ್ರು ಅಂಬರೀಶ್]
ರೈತರು ಈ ಸಂದರ್ಭದಲ್ಲಿ, 15 ವರ್ಷಗಳಿಂದ ಭೀಕರ ಬರಗಾಲವನ್ನು ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು. ಆಗ ಸಚಿವ ಡಾ .ಎಚ್.ಸಿ.ಮಹದೇವಪ್ಪ ಮಾತನಾಡಿ, ಈ ಭಾಗದ ಗ್ರಾಮದ ಜನರ ಸಮಸ್ಯೆ ಏನೆಂಬುದರ ಅರಿವಾಗಿದೆ. ಸರ್ಕಾರದ ವತಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಹಾಗೂ ನರೇಗಾ ಯೋಜನೆಗೆ ಹೆಚ್ಚಿನ ಹಣ ನೀಡುವ ಭರವಸೆ ನೀಡಿ ಅಲ್ಲಿಂದ ಜಾಗ ಖಾಲಿ ಮಾಡಿದರು.
ನಂತರ ತಾಲೂಕಿನ ಆತಗೂರು ಕೆರೆ, ಕೆಸ್ತೂರು ಕೆರೆಗೂ ಭೇಟಿದಾಗ ಅಲ್ಲಿದ್ದ ರೈತರು ಕಳೆದ 16 ವರ್ಷಗಳಿಂದ ಕೆರೆಗಳಿಗೆ ನೀರು ತುಂಬಿಸಿಲ್ಲ. ಸರ್ಕಾರದ ಹಣ ಬಿಡುಗಡೆಯಾಗಿದ್ದರೂ ಏನೂ ಪ್ರಯೋಜನವಾಗಿಲ್ಲ, ನಿವೇನು ಮಾಡುತ್ತಿದ್ದೀರಿ ಎಂದು ಸಚಿವ ಅಂಬರೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು. [ಕುಡಿಯುವ ನೀರಿಗೆ 100 ಕೋಟಿ ತುರ್ತು ಹಣ]
ಅಂಬರೀಶ್ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳು ಮಳೆ ಆಶ್ರಿತ ಪ್ರದೇಶಗಳಾಗಿದ್ದು, ಭೀಕರ ಬರಗಾಲ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದಲ್ಲಿ ನಾನೊಬ್ಬನೇ ದೂರು ನೀಡಿದರೆ ಪ್ರಯೋಜನವಿಲ್ಲ ಎಂದು ಬರಗಾಲ ಪ್ರದೇಶಗಳಿಗೆ ಸಚಿವರನ್ನು ಕರೆತಂದಿದ್ದೇನೆ. ಇವರ ಈ ಅಧ್ಯಯನದ ಮೂಲಕ ತಾಲೂಕಿಗೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿಸುತ್ತಿದ್ದೇನೆ ಎಂದರು.
ಜಮ್ಮು-ಕಾಶ್ಮೀರದಲ್ಲೇ ಬರಗಾಲ ತಲೆದೂರಿದ್ದು, ಇನ್ನು ನಮ್ಮ ಜಿಲ್ಲೆಯಲ್ಲಿ ಬರಗಾಲ ಬರುವುದರಲ್ಲಿ ಆಶ್ಚರ್ಯವೇನಿಲ್ಲ. ಹೀಗಾಗಿ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡೈಲಾಗ್ ಹೊಡೆದರು. ಅಲ್ಲಿಗೆ ಜನರೂ ತಣ್ಣಗಾದರು.
ಇನ್ನು ನಾಗಮಂಗಲ ವ್ಯಾಪ್ತಿಯಲ್ಲಿ ಆಗಮಿಸಿದ ತಂಡ ತಮ್ಮ ಎಸಿ ಕಾರಿನಿಂದ ಕೆಳಗಿಳಿಯದೆ ಅಲ್ಲಿಂದಲೇ ರೈತರ ಸಮಸ್ಯೆ ಕೇಳಿ ಹಿಂತಿರುಗಿದೆ. ಅಂತೂ ವಿರೋಧ ಪಕ್ಷದ ಬಾಯಿ ಮುಚ್ಚಿಸಲು, ಹೈಕಮಾಂಡ್ನ ಮೆಚ್ಚಿಸಲು ನಡೆದ ಬರ ಅಧ್ಯಯನ ಪ್ರವಾಸ ಮುಗಿದಿದೆ. ರೈತರ ಗೋಳು ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ.