ವಸತಿ ಇಲಾಖೆ ಸಾಧನೆ ಶೂನ್ಯ ಅಂದ್ರು ಸಿಎಂ, ಸಿಟ್ಟಾದ್ರು ಅಂಬರೀಶ್
ಬೆಂಗಳೂರು, ಜುಲೈ 15 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಅಂಬರೀಶ್ ನಡುವೆ ಮತ್ತೊಮ್ಮೆ ಮುನಿಸು ಆರಂಭವಾಗಿದೆ. ವಸತಿ ಇಲಾಖೆಗೆ ಕೊಟ್ಟ ಅನುದಾನದಲ್ಲಿ ಅಂಬರೀಶ್ ನಯಾಪೈಸೆ ಖರ್ಚು ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಲಿಖಿತ ಉತ್ತರ ಕೊಟ್ಟಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.
ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿದ ಸಿದ್ದರಾಮಯ್ಯ ಅವರು 2015-16ನೇ ಸಾಲಿನ ಬಜೆಟ್ನಲ್ಲಿ ವಸತಿ ಇಲಾಖೆಗೆ ಕೊಟ್ಟಿದ್ದ 3,818 ಕೋಟಿ ರೂ. ಅನುದಾನವನ್ನು ವಸತಿ ಸಚಿವ ಅಂಬರೀಶ್ ಖರ್ಚು ಮಾಡಿಲ್ಲ ಎಂದು ಹೇಳಿದರು. [ಅಂಬರೀಶ್ ಮುನಿಸು ತಣಿಸಲು ಕೊಡುಗೆ ಕೊಟ್ಟ ಸಿಎಂ]
ಮುಖ್ಯಮಂತ್ರಿಗಳ ಲಿಖಿತ ಉತ್ತರಕ್ಕೆ ವಸತಿ ಸಚಿವ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ವಸತಿ ಇಲಾಖೆ ಸಾಧನೆ ಶೂನ್ಯ ಎಂದು ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿದ ಹಣಕಾಸು ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. [ರಾಜೀನಾಮೆ ಬಗ್ಗೆ ಸಚಿವ ಅಂಬರೀಶ್ ಹೇಳಿದ್ದಿಷ್ಟು]
ಇಲಾಖೆಗೆ ಕೊಟ್ಟ ಒಟ್ಟಾರೆ ಅನುದಾನದಲ್ಲಿ ಶೇ.8 ರಷ್ಟು ಅಂದರೆ 601 ಕೋಟಿ ರೂ.ಗಳನ್ನು ಮೇ ತಿಂಗಳವರೆಗೆ ಖರ್ಚು ಮಾಡಲಾಗಿದೆ. ಆದರೆ, ನಯಾಪೈಸೆ ಖರ್ಚು ಮಾಡಿಲ್ಲವೆಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಗೆ ವರದಿ ನೀಡಿದ್ದಾರೆ ಎಂಬುದು ಅಂಬರೀಶ್ ಪ್ರಶ್ನೆಯಾಗಿದೆ. ಸಿಎಂ ಮತ್ತು ಅಂಬರೀಶ್ ಹೇಳಿದ್ದೇನು......
ಅಂಬರೀಶ್ ಸದನಕ್ಕೆ ಬಂದಿರಲಿಲ್ಲ
ಮಂಗಳವಾರದ ಕಲಾಪದಲ್ಲಿ ವಸತಿ ಇಲಾಖೆ ಸಾಧನೆ ಮಂಡನೆ ಮಾಡಬೇಕಾಗಿತ್ತು. ಆದರೆ, ಸಚಿವ ಅಂಬರೀಶ್ ಸದನಕ್ಕೆ ಗೈರು ಹಾಜರಾಗಿದ್ದರು. ಆಗ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಾಧನೆ ಮಂಡಿಸಲು ಮುಂದಾದರು. ಆಗ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಸ್ವತಃ ಮುಖ್ಯಮಂತ್ರಿಗಳು ಸಾಧನೆ ಮಂಡನೆ ಮಾಡಿದರು.
ಲಿಖಿತ ಉತ್ತರ ಕೊಟ್ಟ ಸಿದ್ದರಾಮಯ್ಯ
ಸಾಧನೆ ಮಂಡಿಸುವ ವೇಳೆ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, 2015-16ನೇ ಸಾಲಿನ ಬಜೆಟ್ನಲ್ಲಿ ವಸತಿ ಇಲಾಖೆಗೆ ಕೊಟ್ಟಿದ್ದ 3,818 ಕೋಟಿ ರೂ. ಅನುದಾನವನ್ನು ವಸತಿ ಸಚಿವ ಅಂಬರೀಶ್ ಖರ್ಚು ಮಾಡಿಲ್ಲ ಎಂದು ಹೇಳಿದರು.
ಅಂಬರೀಶ್ ಅಸಮಾಧಾನಕ್ಕೆ ಕಾರಣವಾದ ಉತ್ತರ
ವಿಧಾನಸೌಧದಕ್ಕೆ ಮಂಗಳವಾರ ಆಗಮಿಸಿದ್ದ ಅಂಬರೀಶ್ ಕಲಾಪದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ತಮ್ಮ ಇಲಾಖೆ ಸಾಧನೆ ಬಗ್ಗೆ ಮುಖ್ಯಮಂತ್ರಿಗಳು ನೀಡಿದ ಉತ್ತರ ಕೇಳಿದ ಅವರು ಅಸಮಾಧಾನಗೊಂಡಿದ್ದಾರೆ. ಹಣಕಾಸು ಇಲಾಖೆ ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರಿಗೆ ನೋಟಿಸ್ ನೀಡಿ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
601 ಕೋಟಿ ಖರ್ಚು ಮಾಡಿದ್ದೇವೆ
ವಸತಿ ಇಲಾಖೆಗೆ ಕೊಟ್ಟಿದ್ದ 3,818 ಕೋಟಿ ರೂ. ಅನುದಾನದಲ್ಲಿ ಶೇ.8ರಷ್ಟು ಅಂದರೆ 601 ಕೋಟಿ ರೂ.ಗಳನ್ನು ಮೇ ತಿಂಗಳವರೆಗೆ ಖರ್ಚು ಮಾಡಲಾಗಿದೆ. ಆದರೆ, ನಯಾಪೈಸೆ ಖರ್ಚು ಮಾಡಿಲ್ಲವೆಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಗೆ ವರದಿ ನೀಡಿದ್ದಾರೆ? ಎಂಬುದು ಅಂಬರೀಶ್ ಅಸಮಾಧಾನಕ್ಕೆ ಕಾರಣವಾಗಿದೆ.
ಅಂಬರೀಶ್ ಕಾಲ್ಶೀಟ್ ಏನಾಯ್ತು? : ಬಿಜೆಪಿ ಪ್ರಶ್ನೆ
ವಸತಿ ಸಚಿವ ಅಂಬರೀಶ್ ಸದನಕ್ಕೆ ಗೈರು ಹಾಜರಾಗಿದ್ದಕ್ಕೆ ಕಿಚಾಯಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರು 'ಅಂಬರೀಶ್ ಕಾಲ್ ಶೀಟ್ ಕ್ಯಾನ್ಸಲ್ ಆಗಿದೆಯೇ?' ಎಂದು ಪ್ರಶ್ನಿಸಿದರು. ಸಿ.ಟಿ.ರವಿ ಅವರು 'ಮುಖ್ಯಮಂತ್ರಿಗಳಿಗೆ ಅಂಬರೀಶ್ ನೀಡಿದ್ದ ಕಾಲ್ಶೀಟ್ ಕ್ಯಾನ್ಸಲ್ ಆಗಿದೆಯಾ?' ಎಂದರು. ಕುಳಿತಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಶ್ ಅವರ ಆರೋಗ್ಯ ಸರಿಯಿಲ್ಲ ಅದಕ್ಕೆ ಬಂದಿಲ್ಲ ಎಂದು ಉತ್ತರ ನೀಡಿ ಸುಮ್ಮನಾದರು.