ಮಧಾಹ್ನ 2ಕ್ಕೆ ಸುಪ್ರೀಂ ವಿಚಾರಣೆ: ಕಚೇರಿಗಳಿಗೆ ನಿರಾಳವಾಗಿ ಹೋಗಿ
ಬೆಂಗಳೂರು, ಸೆಪ್ಟೆಂಬರ್ 20ಸೆ.20 ರಂದು ಮಧ್ಯಾಹ್ನ ಎರಡು ಗಂಟೆಗೆ ಕಾವೇರಿ ನೀರು ಹಂಚಿಕೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಕರ್ನಾಟಕದ ಕಾನೂನು ಸಲಹೆಗಾರರ ತಂಡಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿಯ ಆದೇಶದ ಪ್ರತಿ ಇನ್ನೂ ಸಿಕ್ಕಿಲ್ಲ. ಆದೇಶದ ಪ್ರತಿ ಸಿಕ್ಕ ನಂತರ ಮುಂದಿನ ಕಾರ್ಯ ಯೋಜನೆ ರೂಪಿಸುತ್ತಾರೆ.
ಯಾವ ವದಂತಿಗೂ ಕಿವಿಗೊಡಬೇಡಿ, ಮಾಮೂಲಿನಂತೆ ಕಚೇರಿಗಳಿಗೆ ತೆರಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ ಸೂಕ್ಷ್ಮ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರನ್ನು ನೇಮಿಸಲಾಗಿದೆ.
ಕಾವೇರಿ ಮೇಲುಸ್ತುವಾರಿ ಸಮಿತಿಯು ಮೂರು ಸಾವಿರ ಕ್ಯೂಸೆಕ್ ನಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನೀಡಿದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇಂದಿನ (ಸೆ.20) ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ರಾಜ್ಯದ ಪರವಾಗಿ ಇದೇ ವಿಚಾರದಲ್ಲಿ ವಾದ ಮಂಡಿಸಲಾಗುವುದು. ಮೇಲುಸ್ತುವಾರಿ ಸಮಿತಿಯ ಆದೇಶ ಬಂದ ನಂತರ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಆದೇಶ ಕರ್ನಾಟಕದ ಪಾಲಿಗೆ ನಿರಾಶಾದಾಯಕ ಹಾಗೂ ಭಾರೀ ಹಿನ್ನಡೆ ಎಂದು ಗೃಹಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ಇದೇ ರೀತಿ ಮತ್ತೆ ಮತ್ತೆ ಅನ್ಯಾಯವಾದರೆ ಮುಂದಿನ ಕ್ರಮದ ಬಗ್ಗೆ ಸಂಪುಟವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.[#NoBandhInBengaluru, ನೋ ಎಣ್ಣೆ ಪಾರ್ಟಿ: ಪೊಲೀಸ್]
ಪ್ರತಿಭಟನೆಯ ಕೇಂದ್ರ ಬಿಂದುವಾಗಿರುವ ಮಂಡ್ಯದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆಮೇಲುಸ್ತುವಾರಿ ಸಮಿತಿಯ ಆದೇಶ ಪ್ರಶ್ನಿಸುವ ಜತೆಗೆ ಕಾವೇರಿ ಜಲ ನ್ಯಾಯ ಮಂಡಳಿ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಎಸ್ ಪಿಎಲ್ ಬಗ್ಗೆಯೂ ರಾಜ್ಯ ಭರವಸೆ ಇರಿಸಿಕೊಂಡಿದೆ. ಅದರ ವಿಚಾರಣೆ ಅಕ್ಟೋಬರ್ ಎರಡನೇ ವಾರದಲ್ಲಿ ಬರಲಿದೆ.
ಈಗಾಗಲೇ ತಮಿಳುನಾಡಿಗೆ 1.60 ಲಕ್ಷ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲು ರಾಜ್ಯವು ತೀರ್ಮಾನಿಸಿದೆ.[ವದಂತಿಗೆ ಕಿವಿಗೊಡಬೇಡಿ, ಸೆ.20ರಂದು ಬೆಂಗಳೂರು ಬಂದ್ ಇಲ್ಲ]
ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ನೀರು ಹರಿಸುವ ಪ್ರಮಾಣದ ವಿಚಾರವಾಗಿ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕೆ ಸಮಿತಿ ನೇತೃತ್ವ ವಹಿಸಿದವರು ಸೆ.21ರಿಂದ 30ರವರೆಗೆ ಪ್ರತಿ ದಿನ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದರು.
ಈ ಮಧ್ಯೆ ಕರ್ನಾಟಕವು ರಾಜ್ಯದಾದ್ಯಂತ ಭದ್ರತೆ ಹೆಚ್ಚಿಸಿದೆ. ಮುಂಜಾಗ್ರತಾ ಕ್ರಮವಾಗಿ ಸೆ.20, 21ರಂದು ಮದ್ಯದಂಗಡಿಗಳನ್ನು ತೆರೆಯದಂತೆ ಆದೇಶಿಸಿದೆ. ರಾಜ್ಯ ಮೀಸಲು ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ನಗರ ಶಸ್ತ್ರಾಸ್ತ್ರ ಮೀಸಲು ಪಡೆ ಸೇರಿದಂತೆ ಹದಿನೈದು ಸಾವಿರ ಪೊಲೀಸರನ್ನು ಬೆಂಗಳೂರು ನಗರದಲ್ಲಿ ನೇಮಿಸಲಾಗಿದೆ. ಸೆ.25ರ ವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ.