ಅಹಿಂದ ಹಿಂದೆ, ಲಿಂಗಾಯತ ಮತಕ್ಕೆ ಕಾಂಗ್ರೆಸ್ ಮುಂದೆ!
ಬೆಂಗಳೂರು, ಏಪ್ರಿಲ್ 19 : ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗಳನ್ನು ಗೆದ್ದು ಹೊಸ ಹುಮ್ಮಸ್ಸಿನಿಂದ ಬೀಗುತ್ತಿರುವ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿದೆ. ಈ ಚುನಾವಣೆ ಕೂಡ ಸಿದ್ದರಾಮಯ್ಯನವರವ ನಾಯಕತ್ವದಲ್ಲಿಯೇ ನಡೆಯಲಿದೆ ಎಂದೂ ಎಐಸಿಸಿ ನಿರ್ಧರಿಸಿದೆ.
ನಿರೀಕ್ಷೆಗೂ ಮೀರಿ ಸುಲಭವಾಗಿ ಈ ಎರಡು ಉಪಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಿರಬಹುದು. ಅದೂ ಕೂಡ ಜೆಡಿಎಸ್ ಪಕ್ಷದ ಪರೋಕ್ಷ ಬೆಂಬಲದಿಂದ ಎಂಬ ಸಂಗತಿ ರಹಸ್ಯವಾಗೇನೂ ಉಳಿದಿಲ್ಲ. ಆದರೆ, ನೆಲೆಯೂ ಇಲ್ಲದಿದ್ದ ನೆಲದಲ್ಲಿ ಸಾಕಷ್ಟು ಮತಗಳನ್ನು ಕೀಳಲು ಭಾರತೀಯ ಜನತಾ ಪಕ್ಷ ಯಶಸ್ವಿಯಾಗಿರುವುದು ಕಾಂಗ್ರೆಸ್ಸಿಗೆ ತಲೆನೋವಿನ ವಿಷಯವಾಗಿದೆ.[ಅಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ನಡೆಸಿಲ್ಲ: ಡಿಕೆ ಶಿವಕುಮಾರ್]
ಈ ಕಾರಣದಿಂದಾಗಿಯೇ ಅಹಿಂದ ತತ್ವವನ್ನು ಸ್ವಲ್ಪ ಪಕ್ಕಕ್ಕಿಟ್ಟು, ಹೆಚ್ಚಾಗಿ ಬಿಜೆಪಿ ಪರ ನಿಲುವಿರುವ ಲಿಂಗಾಯತ ಮತ್ತು ಜೆಡಿಎಸ್ ಪರವಾಗಿರುವ ಒಕ್ಕಲಿಗರ ಮತಗಳನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ. ಅಹಿಂದ ಮತಗಳು ಕಾಂಗ್ರೆಸ್ಸಿಗೆ ಹೇಗಿದ್ದರೂ ಬಿದ್ದೇಬೀಳುತ್ತವೆ ಎಂಬ ವಿಶ್ವಾಸದಿಂದ ಹೊಸ ಮತಬೇಟೆಗೆ ಕಾಂಗ್ರೆಸ್ ಇಳಿಯಲಿದೆ.
ಜಾತಿಯ ಆಧಾರದ ಮೇಲೆ ಮತ ಕೇಳಬಾರದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದ್ದರೂ, ಚುನಾವಣೆಗಳಲ್ಲಿ ಜಾತಿಯೇ ಪ್ರಧಾನ ಎಂಬುದನ್ನು ಯಾವ ಪಕ್ಷವೂ ಅಲ್ಲಗಳೆಯುವುದಿಲ್ಲ ಮತ್ತು ಆ ಮಂತ್ರವನ್ನು ಬಿಟ್ಟುಕೊಡುವುದಿಲ್ಲ. ತಾವು ಸಮಾಜವಾದಿ, ವಿಚಾರವಾದಿ ಎಂದು ಎದೆತಟ್ಟಿ ಹೇಳಿಕೊಳ್ಳುವ ಸಿದ್ದರಾಮಯ್ಯ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಬೇಕಿದ್ದರೆ ಜಾತಿ ಮಂತ್ರ ಜಪಿಸಲೇಬೇಕು.
ದಲಿತ ನಾಯಕ, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷಗಿರಿಯಿಂದ ಇಳಿಸುವ ಅಗತ್ಯವಿಲ್ಲ ಎಂದು ಹೇಳಿರುವ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು, ಲಿಂಗಾಯತ ಮತ್ತು ಒಕ್ಕಲಿಗ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.[ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೆಸರು ಸೇರ್ಪಡೆ?]
ಲಿಂಗಾಯತರ ಪಾಲಿಗೆ ಅವರೇ ಬಾಸ್
ಲಿಂಗಾಯತ ಸಮುದಾಯದ ನಿರ್ವಿವಾದಿತ ನಾಯಕನೆಂದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ. ಕರ್ನಾಟಕದಲ್ಲಿ ಲಿಂಗಾಯತರ ಪಾಲಿಗೆ ಅವರೇ ಬಾಸ್. ಹೀಗಾಗಿ ಕರ್ನಾಟಕದಾದ್ಯಂತ ಲಿಂಗಾಯತ ಮತಗಳನ್ನು ಸೆಳೆಯಲು ಏನು ಮಾಡಬೇಕೆಂಬ ಲೆಕ್ಕಾಚಾರದಲ್ಲಿ ದಿಗ್ವಿಜಯ್ ಸಿಂಗ್ ತೊಡಗಿದ್ದಾರೆ.
ಪಾಟೀಲ, ಡಿಕೆಶಿ, ಮುನಿಯಪ್ಪ ಹೆಸರು ಚಾಲ್ತಿ
ಕೆಪಿಸಿಸಿ ಅಧ್ಯಕ್ಷಗಿರಿ ಬದಲಾವಣೆಯಿಲ್ಲ ಎಂದು ಹೇಳಲಾಗಿದೆಯಾದರೂ, ಲಿಂಗಾಯತ ಮತ್ತು ಒಕ್ಕಲಿಗರನ್ನು ಪ್ರತಿನಿಧಿಸುವ ನಾಲ್ಕಾರು ನಾಯಕರ ಹೆಸರುಗಳು ಚಾಲ್ತಿಯಲ್ಲಿವೆ. ಜಿ ಪರಮೇಶ್ವರ ಅವರ ಹೊರತಾಗಿ ಎಸ್ಆರ್ ಪಾಟೀಲ, ಡಿಕೆ ಶಿವಕುಮಾರ್, ಎಂಬಿ ಪಾಟೀಲ ಮತ್ತು ಕೆಎಚ್ ಮುನಿಯಪ್ಪ ಅವರ ಹೆಸರು ಕೇಳಿಬರುತ್ತಿವೆ.
ಸಾಮರ್ಥ್ಯ ಸಾಬೀತುಪಡಿಸಿದ ಎಂಬಿ ಪಾಟೀಲ
ಇವರಲ್ಲಿ ಲಿಂಗಾಯತ ಸಮುದಾಯದ ನಾಯಕ ಎಂಬಿ ಪಾಟೀಲ ಅವರು ತಾವೆಂಥ ಸಮರ್ಥ ಸಂಘಟಕ ಎಂಬುದನ್ನು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಸ್ವತಃ ಭಾರೀ ಪ್ರಚಾರ ಮಾಡಿದರೂ ಅಲ್ಲಿನ ಲಿಂಗಾಯತ ಮತಗಳನ್ನು ಕಾಂಗ್ರೆಸ್ಸಿಗೆ ಬೀಳುವಂತೆ ಮಾಡುವಲ್ಲಿ ಎಂಬಿ ಪಾಟೀಲ ಅವರ ಯೋಗದಾನ ದೊಡ್ಡದು.
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ, ಸಿದ್ದು ವಾಗ್ದಾನ
ಉಪಚುನಾವಣೆಯ ಸಮಯದಲ್ಲಿ ಲಿಂಗಾಯತ ಮಠಮಾನ್ಯಗಳಿಗೆ ಎಡತಾಕಿದ ಸಿದ್ದರಾಮಯ್ಯ, ವೀರಶೈವ ಸಮುದಾಯದ ಪಾಲಿನ ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿ ಅತ್ಯಂತ ಸಮರ್ಥವಾಗಿ ರಾಜಕೀಯ ದಾಳ ಉರುಳಿಸಿದ್ದರು. ಆದರೆ, ಇಂಥ ಮಾತು ನೀಡಿದ್ದು ಇದು ಮೊದಲೇನಲ್ಲ.
ಒಕ್ಕಲಿಗರ ಮೊದಲ ಪ್ರಾಶಸ್ತ್ಯ ದೇವೇಗೌಡರಿಗೆ
ಒಕ್ಕಲಿಗ ಮತದಾರರ ವಿಷಯಕ್ಕೆ ಬಂದರೆ, ಅವರ ಮೊದಲ ಪ್ರಾಶಸ್ತ್ಯ ಮಾಜಿ ಪ್ರಧಾನಿ ದೇವೇಗೌಡರ ಜೆಡಿಎಸ್ಸಿಗೆ. ಉಳಿದದ್ದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಹಂಚಿಕೊಳ್ಳುತ್ತವೆ. ಆದರೆ, ಜೆಡಿಎಸ್ ನಲ್ಲಿ ಒಳಜಗಳಗಳು ತಾರಕಕ್ಕೇರಿ ಏಳೆಂಟು ಶಾಸಕರು ಬೇರೆ ಪಕ್ಷದ ಕದ ತಟ್ಟುತ್ತಿರುವುದರಿಂದ ಸಹಜವಾಗಿ ಆ ಮತಗಳನ್ನು ಗೆದ್ದುಕೊಳ್ಳಲು ಕಾಂಗ್ರೆಸ್ಸಿಗೆ ಒಳ್ಳೆ ಅವಕಾಶ ಕೂಡಿಬಂದಿದೆ.
ಒಕ್ಕಲಿಗರ ಪ್ರತಿನಿಧಿಯಾಗಿ ಡಿಕೆ ಶಿವಕುಮಾರ್
ಒಕ್ಕಲಿಗರ ಪ್ರಬಲ ನಾಯಕ ಎಸ್ಎಂ ಕೃಷ್ಣ ಬಿಜೆಪಿಗೆ ಬಂದಿರುವುದರಿಂದ ಮಧ್ಯ ಕರ್ನಾಟಕದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯಲು ಯತ್ನಿಸಲಿದೆ. ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಅವರನ್ನು ಒಕ್ಕಲಿಗರ ನಾಯಕ ಎಂದು ಕಾಂಗ್ರೆಸ್ ಬಿಂಬಿಸಿದರೂ ಅಚ್ಚರಿಯಿಲ್ಲ. ಅಂತಿಮವಾಗಿ ಕೆಪಿಸಿಸಿ ಪದವಿ ಡಿಕೆ ಶಿವಕುಮಾರ್ ಅವರಿಗೆ ಒಲಿದರೂ ಅಚ್ಚರಿಯಿಲ್ಲ.