ಕೆಆರ್ ಎಸ್ ಹಿನ್ನೀರಿನಲ್ಲಿ ಕೃಷಿ ಚಟುವಟಿಕೆ, ನಿರಾಳರಾದ ರೈತರು
ಮಂಡ್ಯ, ಮಾರ್ಚ್,23: ಒಂದೆಡೆ ದಿನದಿಂದ ದಿನಕ್ಕೆ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದ್ದರೆ, ಮತ್ತೊಂದೆಡೆ ಹಿನ್ನೀರು ಪ್ರದೇಶದಲ್ಲಿ ಕೃಷಿ, ಮೀನುಗಾರಿಕೆ ಚಟುವಟಿಕೆ ಭರದಿಂದ ಸಾಗಿದೆ. ಬಹಳ ವರ್ಷದ ಬಳಿಕ ಬೇಸಿಗೆ ಕಾಲದ ಮೊದಲ ದಿನಗಳಲ್ಲೇ ಅಲ್ಪಾವಧಿಯ ಬೆಳೆಗಳನ್ನು ಬೆಳೆಯುವಲ್ಲಿ ಮುಂದಾಗಿದ್ದಾರೆ.
ಹಿನ್ನೀರು ಪ್ರದೇಶದಲ್ಲಿ ಕೃಷಿ ಮಾಡುವುದು ಕಷ್ಟದ ಕೆಲಸ. ಕಾರಣ ಮಳೆ ಬಂದು ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕೃಷಿ ಮಾಡಿದ ಜಮೀನನ್ನು ನೀರು ಅಕ್ರಮಿಸಿಕೊಳ್ಳುವುದರಿಂದ ಮಾಡಿದ ಕೃಷಿಯು ನೀರು ಪಾಲಾಗುವ ಸಾಧ್ಯತೆಯೇ ಹೆಚ್ಚಾಗಿತ್ತು. ಇದೀಗ ರೈತರಿಗೆ ಈ ಭಯವಿಲ್ಲ.[ತಾರಸಿ ತೋಟ ನಿರ್ಮಿಸಿ, ನಿಮ್ಮ ಮನೆಯನ್ನು ಹಚ್ಚ ಹಸುರಾಗಿಸಿ]
ಹಲವು ವರ್ಷಗಳಿಂದ ಬಹುತೇಕ ಭಾಗ ನೀರಿನಿಂದಾವೃತವಾಗಿರುತ್ತಿತ್ತು. ಆದರೆ ಪ್ರಸಕ್ತ ವರ್ಷ ನೀರಿನ ಪ್ರಮಾಣ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ರೈತರು ಮಳೆಗಾಲ ಆರಂಭವಾಗಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗುವ ಮುನ್ನ ಅಲ್ಪಾವಧಿಯ ಬೆಳೆಯನ್ನು ಬೆಳೆದು ಫಸಲು ಪಡೆಯುವ ಉತ್ಸಾಹದಲ್ಲಿದ್ದಾರೆ.
ಟೊಮ್ಯಾಟೋ ಬೆಳೆದ ರೈತರು
ಈಗಾಗಲೇ ಕೆಲವು ಕಡೆ ಟೊಮ್ಯಾಟೋ, ಮೆಣಸು, ತರಕಾರಿಯನ್ನು ಬೆಳೆಯಲಾಗಿದ್ದರೆ, ಇನ್ನು ಕೆಲವು ಕಡೆ ಉಳುಮೆಯಲ್ಲಿ ತೊಡಗಿರುವ ದೃಶ್ಯ ಕಂಡು ಬರುತ್ತಿದೆ. ಕೆಆರ್ ಎಸ್ ಜಲಾಶಯದ ಹಿನ್ನೀರಿನಲ್ಲಿ ಹಲವು ಹಳ್ಳಿಗಳು ಮತ್ತು ಕೃಷಿ ಭೂಮಿ ಮುಳುಗಡೆಯಾಗಿದ್ದು, ಭೂಮಿ ಕಳೆದು ಕೊಂಡವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ತಮ್ಮ ಜಮೀನು ಕಾಣುತ್ತಿರುವುದರಿಂದ ಕೆಲವರು ಅದರತ್ತ ಶೂನ್ಯ ದೃಷ್ಠಿ ನೆಡುತ್ತಿದ್ದಾರೆ.[ಬಿರು ಬೇಸಿಗೆ, ಆಟದ ಮೈದಾನವಾದ ಕೆಆರ್ ಎಸ್ ಜಲಾಶಯ!]
ಮೀನುಗಾರಿಕೆಯಲ್ಲಿ ನಿರತರಾದ ರೈತರು
ಹಿನ್ನೀರಿನ ಕೆಲವು ಪ್ರದೇಶಗಳಲ್ಲಷ್ಟೆ ರೈತರು ಧೈರ್ಯ ಮಾಡಿ ಅಲ್ಪಾವಧಿಯ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ. ಇನ್ನು ಹಿನ್ನೀರು ಪ್ರದೇಶದಲ್ಲಿ ತೆಪ್ಪ, ಬಲೆಯೊಂದಿಗೆ ಟೆಂಟ್ ಹಾಕಿರುವ ಬೆಸ್ತರು ಮೀನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದಾರೆ.
ವೀಕೆಂಡ್ ಸೇರಿದಂತೆ ರಜಾ ದಿನಗಳಲ್ಲಿ ಹಿನ್ನೀರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಲಾಶಯದ ನೀರು ಉಪಯೋಗಿಸಿ ರೈತರು ಬೇಸಿಗೆ ಬೆಳೆಯನ್ನು ಬೆಳೆಯುತ್ತಿದ್ದರಾದರೂ ಈ ಬಾರಿ ಕೇವಲ ಕುಡಿಯಲು ಮಾತ್ರ ನೀರು ಸರಬರಾಜು ಮಾಡುತ್ತಿರುವುದರಿಂದ ಬಹಳಷ್ಟು ರೈತರು ಆತಂಕದಲ್ಲಿದ್ದಾರೆ.[ಮೀನು ಕೃಷಿಗೆ ಗಾಳ ಹಾಕಿದ ಕಲಬುರಗಿ ರೈತ ಮಹಿಳೆ]
ಮುಂದಿನ ದಿನಗಳಲ್ಲಿ ಕಾವೇರಿ ಕಣಿವೆಯಲ್ಲಿ ಮಳೆ ಬಾರದೆ ಹೋದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಹೆಚ್ಚಾಗಿದೆ. ಹನಿ ನೀರಿಗೂ ಪರದಾಡುವ ಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ.