ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಮೇಲೆ 'ಅಗ್ನಿ' ಜ್ವಾಲೆ
ತಮ್ಮ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಬಗ್ಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ತಮ್ಮ ಮನೆಯಲ್ಲಿ ಶ್ರೀಧರ್ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯುದ್ದಕ್ಕೂ ಶ್ರೀಧರ್ ಮಾಧ್ಯಮಗಳ ಮೇಲೆ ಹರಿಹಾಯ್ದರು.
ಬೆಂಗಳೂರು, ಫೆಬ್ರವರಿ 12: 'ನನಗೆ ಕಪಾಳಕ್ಕೆ ಹೊಡೆದ ಪೊಲೀಸ್ ಅಧಿಕಾರಿ ಕೂಡ ಬೇಸರಗೊಂಡು ಗದ್ಗದಿತರಾಗಿದ್ದರು. ಹೊಡೆದಾಗ ನನ್ನ ಕಣ್ಣುಗಳಲ್ಲಿ ನೀರು ಬಂದಿತ್ತು. ಇವತ್ತು ಅಳುವುದೇ ದೊಡ್ಡ ಕ್ರೈಂ ಆಗಿದೆಯಾ?' ಹೀಗಂಥ ಮಾಧ್ಯಮದವರ ಮೇಲೆ ಕೆಂಡಕಾರಿದವರು ಅಗ್ನಿ ಶ್ರೀಧರ್. [ಅಗ್ನಿ ಶ್ರೀಧರ್ ಆಪ್ತ ಸುನಿಲ್, ಒಂಟೆ ರೋಹಿತ್ ಬಂಧನ]
ತಮ್ಮ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಬಗ್ಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ತಮ್ಮ ಮನೆಯಲ್ಲಿ ಶ್ರೀಧರ್ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯುದ್ದಕ್ಕೂ ಶ್ರೀಧರ್ ಮಾಧ್ಯಮಗಳ ಮೇಲೆ ಹರಿಹಾಯ್ದರು. ಪೊಲೀಸ್ ಕಪಾಳಕ್ಕೆ ಹೊಡೆದದ್ದು, ಆ ಸಂದರ್ಭ ಅತ್ತಿದ್ದು, ಆರೋಗ್ಯ ಏರುಪೇರಾಗಿ ಆಸ್ಪತ್ರೆ ಸೇರಿದ್ದನ್ನೇ ಚಾನೆಲ್ಗಳು ವೈಭವೀಕರಿಸಿ ತೋರಿಸುತ್ತಿವೆ ಎಂದು ಆಪಾದಿಸಿದರು.[ಶೂಟೌಟ್ ಪ್ರಕರಣ: ಅಗ್ನಿ ಶ್ರೀಧರ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು]
ಪತ್ರಿಕಾಗೋಷ್ಠಿಯ ಹೈಲೈಟ್ಸ್:
ಪೊಲೀಸರು ಹೊಡೆದಿಲ್ಲ
ನಮ್ಮ ಮನೆಗೆ ಬಂದ ಪೊಲೀಸರು ಸೌಜನ್ಯದಿಂದಲೇ ವರ್ತಿಸಿದರು. ಸತ್ಯಕ್ಕೆ ದೂರವಾದ ವರದಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಪೊಲೀಸರ ಸೆಲೆಕ್ಟೀವ್ ಹೇಳಿಕೆಗಳನ್ನಷ್ಟೆ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಗುರಾಯಿಸಿದೆ, ಅದಕ್ಕೆ ನನ್ನನ್ನು ಹೊಡೆದಿದ್ದಾರೆಂದು ಬಿಂಬಿಸಿದ್ದಾರೆ. ಇದು ಸುಳ್ಳು. 25-30 ಜನ ಪೊಲೀಸ್ ಅಧಿಕಾರಿಗಳು ನಿಂತಿದ್ದರು. ನನಗೆ ಅಳು ಬಂದಿತ್ತು. ಪೊಲೀಸ್ ಅಧಿಕಾರಿಗಳು ಸಮಾಧಾನ ಪಡಿಸಿದರು.
ವೈಭವೀಕರಿಸಿದ್ದಕ್ಕೆ ಬೇಸರ
ಮಾಧ್ಯಮದಲ್ಲಿ ಪತ್ರಕರ್ತ, ನಿರ್ದೇಶಕ, ಚಿಂತಕ, ಮಾಜಿ ಭೂಗತ ದೊರೆ, ರೌಡಿ ಶೀಟರ್ ಮನೆಗೆ ಪೊಲೀಸರು ಭೇಟಿ, ಪರಿಶೀಲನೆ ಅಂತಾ ತೋರಿಸಲಾಗಿದೆ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಪ್ರಗತಿಪರ ವೇಷಧಾರಿ, ನಾಟಕವಾಡುತ್ತಿದ್ದಾನೆ ಎಂದಿದ್ದಕ್ಕೆ, ವೈಭವೀಕರಣ ಮಾಡಿದ್ದಕ್ಕೆ ಬೇಸರವಾಗಿದೆ
ಒಂಟೆ, ಸೈಲೆಂಟ್ ಪಾತ್ರವಿಲ್ಲ
ಶೂಟೌಟ್ ಆದ ದಿನ ಸೈಲೆಂಟ್ ಸುನೀಲ್, ರೋಹಿತ್ ನಮ್ಮ ಮನೆಯಲ್ಲಿ ಇದ್ದರು. ಅವರಲ್ಲೊಬ್ಬ ಕರುನಾಡ ಸೇನೆಯ ಕಾರ್ಯಾಧ್ಯಕ್ಷ ಮತ್ತೊಬ್ಬ ಪದಾಧಿಕಾರಿ. ಶೂಟೌಟ್ ಆಗಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು ರೋಹಿತ್ ಹೇಳಿದ ಮೇಲೆ. ಶೂಟೌಟ್ ಗೂ ಸುನೀಲ್, ರೋಹಿತ್ ಗೂ ಸಂಬಂಧವಿಲ್ಲ. ಅನಗತ್ಯವಾಗಿ ಆರೋಪ ಮಾಡಿದರೆ ನನಗೆ ನೋವಾಗುತ್ತದೆ.
ಬೆಂಕಿ ಉಂಡೆಗಳು
ಈ ನನ್ನ ಹುಡುಗರು ಬೆಂಕಿ ಉಂಡೆಗಳು. ರೇಗೀ ರೇಗೀ ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದೇನೆ. ಅವರನ್ನು ಮನೆ ಮಕ್ಕಳಂತೆ ಇಷ್ಟ ಪಡುತ್ತೇನೆ. ಸರ್ಚ್ ವಾರೆಂಟ್ ಸಂದರ್ಭದಲ್ಲಿ ರೋಹಿತ್, ಸುನಿಲ್ ನನ್ನ ಮನೆಯಲ್ಲಿರಲಿಲ್ಲ. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರೆ ತನಿಖೆ ಎದುರಿಸುವಂತೆ ಸೂಚಿಸಿದ್ದೇನೆ. ತನಿಖೆ ಮುಗಿದ ನಂತರ ಸತ್ಯಾಂಶ ಹೊರಬರುತ್ತದೆ.
ಒಂದು ಪಕ್ಷ ರೋಹಿತ್ ಹಾಗೂ ಸುನಿಲ್ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರನ್ನು ಸಮಾಜದಲ್ಲಿ ಮುಖ್ಯ ವಾಹಿನಿಗೆ ತರಲು ನಾನು ಮಾಡಿದ ಪ್ರಯತ್ನ ವಿಫಲವಾಗುತ್ತದೆ. ತಂದೆ ಸ್ಥಾನದಲ್ಲಿ ನಿಂತು ಅವರನ್ನು ನೋಡಿಕೊಂಡ ನನಗೆ ದ್ರೋಹ ಮಾಡಿದಂತಾಗುತ್ತದೆ.
ಗಾಂಜಾ ಸಿಕ್ಕಿದ್ದು ಹೌದು
ನನ್ನ ಬಳಿ ಇರುವ ಎಲ್ಲಾ ಗನ್ ಗಳಿಗೂ ಪರವಾನಗಿ ಇದೆ. ಗಾಂಜಾ ಸಿಕ್ಕಿದ್ದು ಹೌದು. ನಾನು ಸಣ್ಣ ಪ್ರಮಾಣದಲ್ಲಿ ಗಾಂಜಾ ಸೇವಿಸುತ್ತೇನೆ. ಮನೆಯಲ್ಲಿ ಸಿಕ್ಕಿರುವ ಕೆಲ ವಿದೇಶಿ ಮದ್ಯ ಬಾಟಲಿಗಳು ಸಿಕ್ಕಿವೆ. ನನ್ನಿಂದ ಅನುಕೂಲ ಪಡೆದು ವಿದೇಶಕ್ಕೆ ಹೋಗಿ ಬಂದ ಮಾಧ್ಯಮ ಮಿತ್ರರು ಅದನ್ನೆಲ್ಲಾ ತಂದುಕೊಟ್ಟಿದ್ದು. ನಾನು ದುಶ್ಚಟಗಳಿಂದ ದೂರವಿದ್ದೇನೆ. ನಿರಂತರ ಯೋಗ ಮಾಡುತ್ತಿದ್ದೇನೆ.
ಎರಡು ದಶಕಗಳಿಂದ ಸಂಘಟನೆ ಮೂಲಕ ಅನ್ಯಾಯದ ವಿರುದ್ಧ ದನಿ ಎತ್ತುತ್ತಾ ಸಾಮಾಜಿಕ, ಸಾಂಸ್ಕೃತಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ನನಗೆ ಮಾಧ್ಯಮಗಳು ಬೆಂಬಲಿಸುತ್ತಿವೆ ಎಂದುಕೊಂಡಿದ್ದೆ. ಆದರೆ ಕೆಲವು ಮಾಧ್ಯಮಗಳು ನನ್ನನ್ನು ತುಳಿಯತ್ತಿವೆ.
ಕುಸಿದು ಬಿದ್ದಿಲ್ಲ
ಅಕಸ್ಮಾತ್ 10 ಗಂಟೆಗೆ ನನಗೆ ಹೊಡೆದು ಕುಸಿದು ಬಿದ್ದಿದ್ರೆ ಐದು ಗಂಟೆಗೆ ಆಸ್ಪತ್ರೆಗೆ ಸೇರಿಸೋಕೆ ಸಾಧ್ಯವೇ? ಹಲ್ಲೆ ಮಾಡಿ ಎದೆ ನೋವಿನಿಂದ ಕುಸಿದು ಬಿದ್ರೆ ಐದು ಗಂಟೆಯ ತನಕ ಆಸ್ಪತ್ರೆಗೆ ಸೇರಿಸದಿದ್ರೆ ಏನಾಗುತ್ತದೆ? ಪೊಲೀಸರು ಸರ್ಚ್ ಮಾಡುವ ಸಂದರ್ಭದಲ್ಲಿ ನನ್ನ ಆರೋಗ್ಯದ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಅವರು ನನ್ನನ್ನು ಚೆಕ್ ಮಾಡಿಸಿ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಹೃದಯದ ಸಮಸ್ಯೆ ಇದ್ದಿದ್ದರಿಂದ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು.
ಸೌಜನ್ಯದಿಂದ ವರ್ತಿಸಿದರು
ದಾಳಿ ದಿನ 9.30ಕ್ಕೆ ಪೊಲೀಸರು ಬಂದರು. ನಾನು ಮನೆ ಮೇಲೆ ಯೋಗ ಮಾಡುತ್ತಿದ್ದೆ. ಕೆಳಗೆ ಆಗುತ್ತಿದ್ದ ಗಲಾಟೆ ಕೇಳಿಸಿಕೊಂಡು ಬಂದೆ. ಕೆಳಗೆ ಡಿಸಿಪಿ ಹರ್ಷ, ನಾರಾಯಣ್, ಹೇಮಂತ್ ನಿಂಬಾಳ್ಕರ್, ಎಸಿಪಿ ರವಿ, ಡಿಸಿಪಿ ಶರಣಪ್ಪ ಅಧಿಕಾರಿಗಳೆಲ್ಲಾ ಇದ್ದರು. ಶೂಟೌಟ್ ಪ್ರಕರಣದಲ್ಲಿ ಆರೋಪಿಗಳಿಬ್ಬರು ನಿಮ್ಮ ಮನೆಯಲ್ಲಿರುವ ಸಂಶಯದ ಮೇಲೆ ಹುಡುಕಾಡಲು ಬಂದಿದ್ದೇವೆ ಎಂದಾಗ, ಪ್ರಕರಣದ ಗಂಭೀರತೆ ಅರ್ಥವಾಯಿತು.
ಪೊಲೀಸರು ಸರ್ಚ್ ವಾರೆಂಟ್ ತೋರಿಸಿದರು. ನಾನು ನೋಡಿ ಸರ್ಚ್ ಮಾಡುವಂತೆ ಹೇಳಿದೆ. ಎಲ್ಲಾ ಕೋಣೆ ಸರ್ಚ್ ಮಾಡಿ ನನ್ನ ಮಗನ ಕೊಠಡಿಯ ಬಾಗಿಲು ತೆರೆಯಲು ಹೇಳಿದರು. ಆತ ಮಧ್ಯಾಹ್ನ 1.30ರವರೆಗೆ ಏಳುವುದಿಲ್ಲ ಎಂದಾಗ ಪೊಲೀಸರು ಸಮ್ಮತಿಸಿದರು. ಮಧ್ಯಾಹ್ನ ನಂತರವೇ ಸರ್ಚ್ ಮಾಡಿದರು. ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ತನಿಖೆ ಮಾಡುವುದು ಪೊಲೀಸರ ಧರ್ಮ.