ನಾನಾ ವರ್ಣದಲ್ಲಿ ಕಂಗೊಳಿಸೋ ಕೃಷ್ಣನ ನೋಡಲು ಉಡುಪಿಗೆ ಬನ್ನಿ
ಉಡುಪಿ, ಡಿಸೆಂಬರ್, 21: ಪರಮಾತ್ಮ ಕೃಷ್ಣನ ಭಕ್ತರೇ, ಅಪರೂಪದ, ವಿಶಿಷ್ಟ ಬಣ್ಣಗಳೊಂದಿಗೆ ಕಂಗೊಳಿಸುವ, ನಾನಾ ರೇಖಾವಿನ್ಯಾಸಗಳಲ್ಲಿ ಅವತಾರ ಎತ್ತಿರುವ, ವಿವಿಧ ಕಲಾಕೃತಿಗಳಲ್ಲಿ ಕಂಗೊಳಿಸುವ ಕೃಷ್ಣನನ್ನು ನೀವು ನೋಡ್ಬೇಕಾ? ಹಾಗಾದರೆ ನೀವು ಡಿಸೆಂಬರ್ 23ರವರೆಗೆ ಕಾಯ್ಬೇಕು.
ಕೃಷ್ಣನನ್ನು ಕೇವಲ ರೇಖಾ ವಿನ್ಯಾಸಗಳಲ್ಲಿ ಮಾತ್ರವಲ್ಲ 'ವಿಶಿಷ್ಟವರ್ಣ'ಗಳಿಂದಲೂ ಸಮರ್ಥವಾಗಿ ಕಲಾಕೃತಿ ರಚಿಸಲು ಸಾಧ್ಯವಿದೆ ಎಂದು ನಿರೂಪಿಸಲು ಕಲಾವಿದೆ ಪ್ರವೀಣಾ ಮೋಹನ್ ಪ್ರಯತ್ನಿಸಿದ್ದಾರೆ. ಇದರ ಪ್ರದರ್ಶನ ಡಿ. 23 ರಿಂದ ಡಿ. 27ರವರೆಗೆ ಕುಂಜಿಬೆಟ್ಟುವಿನ ಗ್ಯಾಲರಿ ಅದಿತಿಯಲ್ಲಿ ಪ್ರದರ್ಶನಗೊಳ್ಳಲಿದೆ.[ಚಿತ್ತಾರ ಕಲಾವಿದರ ಚಾವಡಿಯಲ್ಲಿ...!]
ಅದಿತಿ ಟ್ರಸ್ಟ್ ವ್ಯವಸ್ಥಾಪಕ ಡಾ. ಕಿರಣ್ ಆಚಾರ್ಯ ಅವರು, ವಿವಿಧ ವರ್ಣದ ಕೃಷ್ಣ ಕಲಾಕೃತಿಗಳ ಅಂದರೆ 22 ಆಕ್ರಿಲಿಕ್, 4 ರೇಖಾಚಿತ್ರ ಮತ್ತು 1 ಉಬ್ಬು ಶಿಲ್ಪ ಹೀಗೆ ಒಟ್ಟು 27 ಕೃಷ್ಣ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿ ಕಲಾಭಿಮಾನಿಗಳ ಹೃದಯ ಗೆಲ್ಲಲು ಮುಂದಾಗಿದ್ದಾರೆ.
ಕಲಾಕೃತಿಗಳನ್ನು ಆಸ್ವಾದಿಸಲು ಪರಿಪೂರ್ಣ ಗಾಳಿ, ಬೆಳಕಿನ ವ್ಯವಸ್ಥೆ ಅತಿ ಅಗತ್ಯವಾಗಿ ಬೇಕು. ಕಲಾಸಕ್ತರು ಕಲಾಕೃತಿಗಳನ್ನು ವೀಕ್ಷಿಸಲು ವೈಜ್ಞಾನಿಕ ಅಂತರವೂ ಅವಶ್ಯವಾಗಿ ಬೇಕು. ಇದರೊಂದಿಗೆ ಸುಶ್ರಾವ್ಯ ನಿನಾದ ಕಲಾಕೃತಿ ವೀಕ್ಷಣೆಗೆ ಹೆಚ್ಚು ಆಸಕ್ತಿ ಒದಗಿಸುತ್ತದೆ.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]
ಈ ಎಲ್ಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಗ್ಯಾಲರಿ ಅದಿತಿ ಸಿದ್ದಗೊಂಡಿದೆ. ಇದರಿಂದ ಅನೇಕ ಕಲಾವಿದರಿಗೆ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ ಎಂದು ಅವರು ಮಾಹಿತಿ ನೀಡಿದರು.[ಅಗಲಿದ ನೆನಪು ಮರೆಸಿ ಶಾಶ್ವತ ಸಂತಸ ನೀಡುವ 3ಡಿ ಕಾಸ್ಟಿಂಗ್]
ಕಲೆ ಪ್ರದರ್ಶನವು ಡಿಸೆಂಬರ್ 23 ರಂದು ಸಂಜೆ 6 ಗಂಟೆಗೆ ಮಣಿಪಾಲ ಗ್ರೂಪ್ ನ ಆಡಳಿತ ನಿರ್ದೇಶಕ ಟಿ. ಗೌತಮ್ ಪೈ ಉದ್ಘಾಟನೆಗೊಳ್ಳಲಿದೆ. ಡಿಸೆಂಬರ್ 24 ರಿಂದ 27ರವರೆಗೆ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಬಿ.ಎಡ್ ಕಾಲೇಜು ರಸ್ತೆ, ಕುಂಜಿಬೆಟ್ಟು, ಉಡುಪಿ ಇಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಿರಣ್ ಆಚಾರ್ಯ ವಿವರಿಸಿದರು.