ಕೊಡಗು-ಚಾ.ನಗರ ಚೆಕ್ಪೋಸ್ಟ್ ಮೇಲೆ ಎಸಿಬಿ ದಾಳಿ, 10ಮಂದಿ ಬಂಧನ
ಮೈಸೂರು, ಮಾರ್ಚ್ 10: ಪ್ರತ್ಯೇಕ ಪ್ರಕರಣಗಳಲ್ಲಿ ಕೊಡಗು ಮತ್ತು ಚಾಮರಾಜನಗರದ ಗಡಿಭಾಗದಲ್ಲಿರುವ ಚೆಕ್ ಪೋಸ್ಟ್ ಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು 10 ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆ ತಪಾಸಣಾ ಕೇಂದ್ರದ 'ವಾಣಿಜ್ಯ ತೆರಿಗೆ ಕಚೇರಿ' ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು 41 ಸಾವಿರ ರೂಪಾಯಿಗಳನ್ನು ಪತ್ತೆ ಹಚ್ಚಿ ಐವರನ್ನು ಬಂಧಿಸಿದ್ದಾರೆ. ಕೊಡಗಿನ ವಿರಾಜಪೇಟೆ ಪೆರುಂಬಾಡಿ ಚೆಕ್ಪೋಸ್ಟ್ ನಲ್ಲಿ 30,900ರೂಪಾಯಿಗಳನ್ನು ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದಾರೆ.[ಶಿವರಾಮ ಆಚಾರ್ಯ ಮನೆ ಮೇಲೆ ಎಸಿಬಿ ದಾಳಿ, ಕೋಟಿ-ಕೋಟಿ ಆಸ್ತಿ ಪತ್ತೆ]
ಅಕ್ರಮ ಹಣ ಪತ್ತೆ
ಚಾಮರಾಜನಗರದ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿ ಪ್ರಭಾಕರ್ ರಾವ್ ಸಿಂಧೆ ನೇತೃತ್ವದಲ್ಲಿ ಗುಂಡ್ಲುಪೇಟೆ ವಾಣಿಜ್ಯ ತೆರಿಗೆ ಕಚೇರಿಯ ಮೇಲೆ ದಾಳಿ ನಡೆಸಿ ದಾಖಲಾತಿಗಳು ಹಾಗೂ ಸಂಗ್ರಹವಾಗಿದ್ದ ಹಣವನ್ನು ಪರಿಶೀಲಿಸಿದ್ದಾರೆ. ಕಚೇರಿಯ ಡ್ರಾನಲ್ಲಿ ಹೆಚ್ಚುವರಿಯಾಗಿದ್ದ 47 ಸಾವಿರದ 415 ನೂರು ರೂಪಾಯಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಗದಿಗಿಂತ ಹೆಚ್ಚಿನ ಹಣ ವಸೂಲಿ
ಹೊರರಾಜ್ಯಗಳಿಗೆ ಸಂಚಾರ ಮಾಡುವ ವಾಹನಗಳ ಚಾಲಕರಿಂದ ನಿಗದಿಗಿಂತ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಪೊಲೀಸರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ಸಿ.ಪಿ.ಯೋಗೇಶ್, ವಾಣಿಜ್ಯ ತೆರಿಗೆ ಇನ್ಸ್ ಸ್ಪೆಕ್ಟರ್ ರತ್ನರಾಜಪ್ಪ, ಗುಮಾಸ್ತ ಶಿವಕುಮಾರ್, ನಾಲ್ಕನೇ ದರ್ಜೆ ನೌಕರ ಮಹದೇವ ಹಾಗೂ ಭದ್ರತಾ ಸಿಬ್ಬಂದಿ ಅಶೋಕ ಎಂಬುವರನ್ನು ಬಂಧಿಸಿ ಚಾಮರಾಜನಗರದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.[ಭ್ರಷ್ಟಾಚಾರದಲ್ಲಿ ತೊಡಗಿದ್ದ ಅಧಿಕಾರಿಗಳ ಮೇಲೆ ಎಸಿಬಿ ದಾಳಿ]
ಕೊಡಗು ಪ್ರಕರಣ
ಕೊಡಗಿನ ವೀರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುವ ಅಂತರ್ ರಾಜ್ಯ ಹೆದ್ದಾರಿಯಲ್ಲಿನ ಪೆರುಂಬಾಡಿ ಚೆಕ್ ಪೋಸ್ಟ್ ನಲ್ಲಿರುವ ವಾಣಿಜ್ಯ ಇಲಾಖೆಯ ಮಾರಾಟ ತೆರಿಗೆ ಕೇಂದ್ರದ ಮೇಲೆ, ಮೈಸೂರು ಎಸಿಬಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆದಿದೆ. ತೆರಿಗೆ ಕೇಂದ್ರದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಡಿಕೇರಿಯ ನಿವಾಸಿ ದೇವಾರಾಜು ಬಳಿ ಪತ್ತೆಯಾದ ರೂ. 30,900 ನಗದನ್ನು ವಶಕ್ಕೆ ಪಡೆದು ಈತ ಸೇರಿದಂತೆ ವಾಣಿಜ್ಯ ತೆರಿಗೆ ಅಧಿಕಾರಿ ನಿರಂಜನ್, ತೆರಿಗೆ ನಿರೀಕ್ಷಕ ನಾಗರಾಜು ಹಾಗೂ ಸಿಬ್ಬಂದಿಗಳಾದ ಗಿರೀಶ್ ಹಾಗೂ ಪುಟ್ಟೆಗೌಡ ಸೇರಿ ಐವರವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವ್ಯಾಪಕ ಲೂಟಿ
ಈ ತಪಾಸಣಾ ಕೇಂದ್ರದಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸರಕು ಸಾಗಣೆ ವಾಹನಗಳು ಸಂಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವ್ಯಾಪಕವಾಗಿ ಹಣದ ಲೂಟಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಬಳಿಕ ದೂರು ಖಚಿತ ಪಡಿಸಿಕೊಂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.[ಚಿನ್ನ, ಬೆಳ್ಳಿ, ಲಾಕರ್, ನಗದು, ಆಸ್ತಿ.. ಎಸಿಬಿ ಬಲೆಗೆ ಬಿದ್ದ 'ಕುಬೇರ' ರಂಗನಾಥ್]
ದೇವರಾಜು ಎಂಬಾತ ಮಧ್ಯವರ್ತಿಯಾಗಿದ್ದು ಈತ ವಾಹನಗಳ ಚಾಲಕರಿಂದ ಹಣ ವಸೂಲಿ ಮಾಡಿ ಅಧಿಕಾರಿಗಳಿಗೆ ನೀಡುತ್ತಿದ್ದ ಎನ್ನಲಾಗಿದೆ. ಈತ ಪೆರುಂಬಾಡಿಯಲ್ಲಿ ಆಗ ತಾನೆ ಬಸ್ ಏರಲು ಹೊರಟಿದ್ದ ಸಂದರ್ಭ ಸಿಕ್ಕಿ ಬಿದ್ದಿದ್ದು, ಆತನ ಬಳಿಯಿದ್ದ 30.900 ರೂ. ನಗದನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ದಿನಕ್ಕೆ 40 ಸಾವಿರ ಸಂಗ್ರಹ
ಈ ಚೆಕ್ಪೋಸ್ಟ್ ನಲ್ಲಿ ದಿನಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗುತ್ತಿದ್ದು, ಪೊಲೀಸ್ ಅಧಿಕಾರಿಗಳಿಗೂ ಇದರಲ್ಲಿ ಪಾಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿತ್ಯ 2000ಕ್ಕೂ ಅಧಿಕ ಸರಕು ವಾಹನಗಳು ಪೆರುಂಬಾಡಿ ಚೆಕ್ ಪೋಸ್ಟ್ ಮಾರ್ಗವಾಗಿ ಕೊಡಗಿನಿಂದ ಕೇರಳಕ್ಕೆ ತೆರಳುತ್ತಿದ್ದು ಈ ವಾಹನಗಳಿಂದ ಇಂತಿಷ್ಟು ಹಣ ಎಂಬಂತೆ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.