ಏಕಕಾಲಕ್ಕೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಎಸಿಬಿ ದಾಳಿ
ಬೆಂಗಳೂರು, ಜೂನ್ 16 : ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು (ಎಸಿಬಿ) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.
ರಾಯಚೂರು, ಬೀದರ್, ಕಲಬುರಗಿ, ಹಾವೇರಿ, ದಾವಣಗೇರೆ, ಬೆಂಗಳೂರು, ಯಾದಗಿರಿ ಮತ್ತು ಕೋಲಾರ ಸೇರಿದಂತೆ ಇನ್ನಿತರ ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ರಾಜ್ಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕುಮಾರ್ ಗೌಡ ಮತ್ತವರ ಸ್ನೇಹಿತ ಪ್ರಕಾಶ್ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಕುಮಾರ್ ಗೌಡ ಒಡೆತನದ ಸಾಯಿ ವಿಹಾರಿಕಾ ನರ್ಸಿಂಗ್ ಹೋಂ, ಮನೆ, ಕಚೇರಿ ಮತ್ತು ಬೆಂಗಳೂರಿನ ವಾಣಿಜ್ಯ ಮಳಿಗೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕಲಬುರಗಿಯಲ್ಲೂ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಜೆಸ್ಕಾಂ ಎಇಇ ಸಹದೇವ ಮಾನಕೆರೆ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಜೇವರ್ಗಿ ಕಾಲೋನಿ ಮತ್ತು ಬೀದರ್ ನಗರದಲ್ಲಿ ಸಹದೇವಾ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಹಾವೇರಿ ನಗರದ ಬಸವೇಶ್ವರ ನಗರದಲ್ಲಿರೋ ಕಂದಾಯ ನಿರೀಕ್ಷಕ ವಿಜಯಕುಮಾರ ಗುಡಿಗೇರಿ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರು ಕೇಂದ್ರ ವಲಯದ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿಯ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮನೆ ಹಾಗೂ ಚನ್ನಗಿರಿ ತಾಲೂಕಿನ ಎನ್ ಗಾಣದಗಟ್ಟೆ ಗ್ರಾಮದಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಗ್ರಾಮದಲ್ಲಿ 20 ಎಕರೆ ಅಡಿಕೆ ತೋಟ, ಮನೆ, ಟ್ರಾಕ್ಟರ್ ಸೇರಿದಂತೆ ಹಲವು ಆಸ್ತಿ ಪತ್ತೆಯಾಗಿದೆ.
ದಾವಣಗೆರೆಯ ಎಸಿಬಿ ಅಧಿಕಾರಿ ಪ್ರಕಾಶ್ ಗೌಡ ಪಾಟೀಲ್ ಹಾಗೂ ಬೆಂಗಳೂರಿನ ಎಸಿಬಿ ಇನ್ಸ್ ಪೆಕ್ಟರ್ ರಿಂದ ತನಿಖೆ ಮುಂದುವರೆದಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಕೆಬಿಜೆಎನ್ ಎಲ್ ಸಾಹಯಕ ಇಂಜಿನಿಯರ ಚನ್ನಪ್ಪ ಕಂದಾಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯಾದಗಿರಿ ಎಸಿಬಿ ಡಿವೈಎಸ್ ಪಿ ವಿರೇಶ ಕರಡಿಗುಡ್ಡ, ಸಿಪಿಐ ಯಶವಂತ ಬಿಸನಳ್ಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ರಾಯಚೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಭಿಯಂತರ ಬಿ.ಆರ್ ಗೌಡೂರು ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದ್ದು. ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.