ಕನಕನಡೆ ಸಂಘಟಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಎಪಿ ಪತ್ರ
ಉಡುಪಿ, ಅಕ್ಟೋಬರ್, 30: ಅಕ್ಟೋಬರ್ 24ರಂದು ಉಡುಪಿಯಲ್ಲಿ ಯುವ ಬ್ರಿಗೇಡ್ ಹಮ್ಮಿಕೊಂಡಿದ್ದ 'ಕನಕ ನಡೆ' ಸ್ವಚ್ಛತಾ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
"ಅವರ ಹಕ್ಕುಗಳಿಗಾಗಿ ದಲಿತರು 'ಚಲೋ ಉಡುಪಿ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದನ್ನು ವಿರೋಧಿಸಲು ಮತ್ತು ದಲಿತರರನ್ನು ಅವಮಾನಿಸಲು ಅವರ ಭಾವನೆಗಳಿಗೆ ಧಕ್ಕೆ ಉಂಟಗುವಂತೆ ಕನಕ ನಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು ಎಎಪಿ ಪತ್ರದಲ್ಲಿ ಉಲ್ಲೇಖಿಸಿದೆ.
"ಯುವ ಬ್ರಿಗೇಡ್ ನ ಈ ಕ್ರಮ ಸಂವಿಧಾನದ ಪರಿಚ್ಚೇದ 17ನ್ನು ಪ್ರಶ್ನಿಸುವಂತಿದ್ದು, ಅಸ್ಪೃಶ್ಯತೆಯನ್ನು ಪ್ರೋತ್ತಾಹಿಸುವಂತಿದೆ" ಎಂದು ಎಎಪಿ ಪತ್ರದಲ್ಲಿ ತಿಳಿಸಿದ್ದು, ಕೂಡಲೇ ಮುಖ್ಯಮಂತ್ರಿಗಳು ಕ್ರಮಕೈಗೊಂಡು ಸಂವಿಧಾನ ಆಶಯಗಳನ್ನು ಎತ್ತಿ ಹಿಡಿಯಬೇಕು" ಎಂದು ಹೇಳಿದೆ. [ಉಡುಪಿ : ವಿವಾದದ ನಡುವೆ ಕನಕ ನಡೆಗೆ ಪೇಜಾವರ ಶ್ರೀಗಳಿಂದ ಚಾಲನೆ]
ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರ ವಿರುದ್ಧ ಸೂಕ್ತ ಶಿಕ್ಷೆ ವಿಧಿಸಲು ಕೂಡಲೇ ಕ್ರಮಕೈಗೊಳ್ಳಬೇಕೆಂದು ಎಎಪಿ ಪತ್ರದಲ್ಲಿ ಮುಖ್ಯಂಂತ್ರಿಗೆ ಮನವಿ ಮಾಡಿದೆ.
ದಲಿತ ಸಂಘಟನೆಗಳು ಅಕ್ಟೋಬರ್ 9ರಂದು ಹಮ್ಮಿಕೊಂಡಿದ್ದ 'ಚಲೋ ಉಡುಪಿ' ಕಾರ್ಯಕ್ರಮ ವಿರೋಧ ವ್ಯಕ್ತಡಿಸಿ ಹಿರಿಯ ಆರ್ ಎಸ್ ಎಸ್ ನಾಯಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ 'ಕನಕ ನಡೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿವಾದಿತ ಕನಕ ನಡೆ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ ಈ ಕಾರಣದಿಂದ ಯುವ ಬ್ರಿಗೇಡ್ ಸದಸ್ಯರು ಉಡಿಪಿಯ 'ಶ್ರೀ ಕೃಷ್ಣ ಮಠ'ದ ಆವರಣವನ್ನು ಸ್ವಚ್ಛಗೊಳಿಸಿದ್ದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು 'ಕನಕ ನಡೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಯುವಬ್ರಿಗೇಡ್ ಸದಸ್ಯರು ಶ್ರೀಕೃಷ್ಣಮಠದ ಆವರಣ, ಗೋಶಾಲೆ, ರಾಜಗಾನ ಮತ್ತು ಪಾರ್ಕಿಂಗ್ ಸ್ಥಳವನ್ನು ಸ್ವಚ್ಛಗೊಳಿಸಿದ್ದರು.
ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವೇಶತೀರ್ಥ ಸ್ವಾಮೀಜಿಯವರು "ಉಡುಪಿಯಲ್ಲಿ ಕನಕ ನಡೆ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲು ಕೆಲ ತಿಂಗಳ ಹಿಂದೆಯೇ ನಿರ್ಧರಿಸಲಾಗಿತ್ತು. 'ಕನಕ ನಡೆ' ಸದಸ್ಯರು ಇದನ್ನು ಆಯೋಜಿಸಿದ್ದರು. ಕಾರ್ಯಕ್ರಮ ಆಯೋಜಿಸುವಂತೆ ನಾನು ಯಾವುದೇ ಸಲಹೆ ನೀಡಿರಲಿಲ್ಲ ಎಂದು ಅವರು ಹೇಳಿದರು.