ಮಂಗಳಮುಖಿ ಸಾವು, ಲೈಂಗಿಕ ಅಲ್ಪಸಂಖ್ಯಾತರ ಮೌನ ಪ್ರತಿಭಟನೆ
ಚಿಕ್ಕಬಳ್ಳಾಪುರ,ಜನವರಿ,09: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಲೈಂಗಿಕ ಅಲ್ಪಸಂಖ್ಯಾತರು ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊನ್ನೆನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-7ರ ಬಳಿ ಗುರುವಾರ ನಸುಕಿನಲ್ಲಿ ನಡೆದಿದೆ.
ಗೌರಿಬಿದನೂರಿನ ನಿವಾಸಿ ನವ್ಯಾ (23) ಮೃತಪಟ್ಟವರು. ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ನವ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನ ಯಾವುದು ಮತ್ತು ಅಪಘಾತ ಹೇಗೆ ಸಂಭವಿಸಿತು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.[ಮೈಸೂರಲ್ಲಿ ಮಂಗಳಮುಖಿಯರ ಶೌಚಾಲಯ, ದೇಶದಲ್ಲೇ ಪ್ರಥಮ?]
ನವ್ಯಾ ಶವ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇಟ್ಟಿರುವ ವಿಷಯ ಗೊತ್ತಾದ ಕೂಡಲೇ ಲೈಂಗಿಕ ಅಲ್ಪಸಂಖ್ಯಾತರು ಗುಂಪುಗೂಡಿ ಸ್ಥಳಕ್ಕೆ ಬಂದು ಮೌನ ಪ್ರತಿಭಟನೆ ನಡೆಸಿ ಅಪರಾಧಿಯನ್ನು ಪತ್ತೆ ಮಾಡಿ ಶಿಕ್ಷೆಗೆ ಗುರುಪಡಿಸಬೇಕು. ಇದರ ಬಗ್ಗೆ ನಿರ್ಲಕ್ಷ್ಯ ತೋರಿದ್ದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.[ಸಲಿಂಗಿಗಳ ಮದುವೆಗೆ ಅಸ್ತು ಎಂದ ಸುಪ್ರೀಂಕೋರ್ಟ್]
ಶವಾಗಾರಕ್ಕೆ ಬಂದ ಸಂಚಾರ ಠಾಣೆ ಎಸ್ಐ ಮುನಿರೆಡ್ಡಿ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಿದರು. ಒಂದು ತಿಂಗಳೊಳಗೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ನಂತರ ಲೈಂಗಿಕ ಅಲ್ಪ ಸಂಖ್ಯಾತರು ನವ್ಯಾ ಅಂತ್ಯ ಕ್ರಿಯೆಯನ್ನು ಗೌರಿಬಿದನೂರಿನ ಬೂದಿಗೆರೆಯಲ್ಲಿ ಸಂಜೆ ನಡೆಸಿದರು.
ತಂದೆ-ತಾಯಿಯಿಲ್ಲದೇ ಮನೆಯಿಂದ ದೂರವಾಗಿದ್ದ ನವ್ಯಾ ಸರ್ಕಾರದಿಂಧ 20 ಸಾವಿರ ಸಾಲ ಪಡೆದು ಕುರಿ ಸಾಕಣೆ ಮಾಡುತ್ತಿದ್ದರು. ಆದರೆ ಕುರಿ ಮೇಯಿಸಲು ಹೋದ ಕಡೆ ಆಕೆ ಜನರಿಂದ ಕಿರಿಕಿರಿಗೆ ಒಳಗಾಗುತ್ತಿದ್ದರು. ಈ ವಿಚಾರದಲ್ಲಿ ಗುರುವಾರ ಆಕೆ ಬಹಳ ನೊಂದು ಕೊಂಡಿದ್ದರು.[ಲೈಂಗಿಕ ಅಲ್ಪಸಂಖ್ಯಾತರ ಅವತಾರದಲ್ಲಿ ದುರ್ಗಾದೇವಿ]
ಗುರುವಾರ ನಸುಕಿನಲ್ಲಿ ಆಕೆ ಹೊನ್ನೇನಹಳ್ಳಿ ಬಳಿ ಯಾಕೆ ಹೋದರು? ಘಟನೆ ಹೇಗೆ ಸಂಭವಿಸಿತು ಎಂಬುದು ನಿಗೂಢವಾಗಿದೆ ಎಂದು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ ಉಷಾಕಿರಣ್ ತಿಳಿಸಿದರು. ವರ್ಷ, ವೆಂಕಟರೆಡ್ಡಿ, ಇಬ್ರಾಹಿಂ, ತುಳಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.