ಭೂಗರ್ಭದಲ್ಲಿ ಜ್ಯೋತಿರ್ಲಿಂಗ: ಕನಸಿನಲ್ಲಿ ಎಚ್ಚರಿಸಿದನೇ ಶ್ರೀಶೈಲ ಮಲ್ಲಿಕಾರ್ಜುನ!
ಇಪ್ಪತ್ತು ಅಡಿ ಭೂಮಿಯನ್ನು ಉತ್ಖನನ ಮಾಡಿದಾಗ ಮೂರು ಶಿವಲಿಂಗ ಮೂರ್ತಿಗಳ ಜೊತೆಗೆ ಇತರ ಎರಡು ಕಲ್ಲಿನ ವಿಗ್ರಹಗಳು ಕಲಬುರಗಿ ಜಿಲ್ಲೆಯ, ಅಫ್ಜಲಪುರ ತಾಲೂಕಿನ ಗೌರ್ (ಕೆ) ಗ್ರಾಮವೊಂದರಲ್ಲಿ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಸ್ವಾಮೀಜಿಯೊಬ್ಬರು ಕಂಡ ಕನಸಿನ ಪ್ರಕಾರ ಭೂಮಿಯನ್ನು ಅಗೆಯಲು ಆರಂಭಿಸಿದಾಗ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯನ್ನು ಹೋಲುವ ಶಿವಲಿಂಗದ ಜೊತೆ, ಇತರ ಎರಡು ಲಿಂಗಗಳು, ಭ್ರಮರಾಂಭ ದೇವಿ ಮತ್ತು ನಾಗದೇವರ ಮೂರ್ತಿ ಪತ್ತೆಯಾಗಿದೆ. (ಅಷ್ಟಮಂಗಲ ಪ್ರಶ್ನೆ,ಅಲ್ಲೊಂದು ದೇವಸ್ಥಾನವಿತ್ತು)
ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದು, ಅಫ್ಜಲಪುರದ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕನಸಿನಲ್ಲಿ ಮನುಷ್ಯನ ರೂಪದಲ್ಲಿ ಕಾಣುತ್ತಿದ್ದ ವ್ಯಕ್ತಿ ಶಿವಲಿಂಗ ಇರುವ ವಿಷಯವನ್ನು ತಿಳಿಸಿದ್ದ ಎಂದು ಕೈಲಾಸಲಿಂಗ ಮಠದ ಪೀಠಾಧಿಪತಿಗಳು ಹೇಳಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ 700-800 ವರ್ಷಗಳ ಹಿಂದಿನ, ರಾಷ್ಟಕೂಟರ ಕಾಲದಲ್ಲಿ ಭೂಗರ್ಭದಲ್ಲಿ ಹೂತು ಹೋಗಿರಬಹುದಾದ ದೇವಾಲಯ ಇದಾಗಿದೆ ಎನ್ನಲಾಗುತ್ತಿದೆ.
ಕೆ ಗೌರ್ ಗ್ರಾಮದ ಶಿವಪ್ಪ ದಫೇದಾರ್ ಎನ್ನುವವರ ಜಮೀನಿನಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ. ಸ್ವಾಮೀಜಿ ಹೇಳುವ ಪ್ರಕಾರ ಇನ್ನೂ ಇಪ್ಪತ್ತು ಶಿವಲಿಂಗ ಸಿಗಲಿದೆ. ಸಿಕ್ಕ ಮೂರು ಲಿಂಗಗಳಲ್ಲಿ ಒಂದು ಜ್ಯೋತಿರ್ಲಿಂಗವನ್ನು ಹೋಲುತ್ತಿರುವುದು ವಿಶೇಷ. (ಬಾಬಾನ ಸನ್ನಿಧಾನದಲ್ಲಿ ಪವಾಡ)
ಹಲವು ಅಚ್ಚರಿ, ಕುತೂಹಲಕ್ಕೆ ಕಾರಣವಾಗಿರುವ ಮತ್ತು ಕನಸಿನಲ್ಲಿ ಸ್ವಾಮೀಜಿಗೆ ಕಂಡ ಶಿವಲಿಂಗದ ಸುತ್ತಮುತ್ತ ಕುತೂಹಲಕಾರಿ ಸಂಗತಿಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ಕೆ ಗೌರ್ ಗ್ರಾಮ
ಕೆ ಗೌರ್ ಗ್ರಾಮದ ನೆರೆಯ ಹಳ್ಳಿಯ ಕೈಲಾಶ ಲಿಂಗೇಶ್ವರ ಮಠದ ಪೀಠಾಧಿಪತಿ ಷಟಸ್ಥಲ ಬ್ರಹ್ಮಿ ಕೈಲಾಶಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಕನಸಿನಲ್ಲಿ ಭೂಗರ್ಭದಲ್ಲಿ ಶಿವಲಿಂಗ ಮತ್ತು ಇತರ ಮೂರ್ತಿಗಳು ಇರುವುದರ ಬಗ್ಗೆ ಮನುಷ್ಯನ ರೂಪದಲ್ಲಿನ ವ್ಯಕ್ತಿ ತಿಳಿಸಿದ್ದ.
ಎಲ್ಲಿ ನಿನ್ನ ಕಾಲು ಎಡವುತ್ತೋ ಅಲ್ಲಿ ಶಿವಲಿಂಗ
ನಾನು ಹೇಳಿದ ಜಾಗದಲ್ಲಿ ಎಲ್ಲಿ ನಿನ್ನ ಕಾಲು ಎಡವುತ್ತೋ ಅಲ್ಲಿ ಶಿವಲಿಂಗ ಇರುತ್ತದೆ ಎಂದು ಕನಸಿನಲ್ಲಿ ಬಂದತಂಹ ಆ ವ್ಯಕ್ತಿ ಕನಸಿನಲ್ಲಿ ಹೇಳಿದ್ದ. ಆ ವ್ಯಕ್ತಿ, ನಾನು ಇಂತಹವರ ತೋಟದಲ್ಲಿ ಇದ್ದೇನೆ. ನನ್ನನ್ನು ಹೊರತೆಗಿ, ನಾಡು ಸುಭಿಕ್ಷವಾಗಲಿದೆ ಎಂದು ಹೇಳಿದ್ದ ಎಂದು ಕನಸಿನಲ್ಲಿ ಬಂದ ಘಟನೆಯನ್ನು ಶಿವಾಚಾರ್ಯ ಸ್ವಾಮೀಜಿ ವಿವರಿಸಿದ್ದಾರೆ.
ಗ್ರಾಮಸ್ಥರು ಮೊದಲು ಸಹಕರಿಸಲಿಲ್ಲ
ಕನಸಿನಲ್ಲಿ ಬಂದಂತಹ ಘಟನೆಯನ್ನು ನಾನು ಗ್ರಾಮದ ಜನರಿಗೆ ತಿಳಿಸಿದ್ದೆ. ಮೊದಲು ಯಾರೂ ನನ್ನ ಮಾತಿಗೆ ಬೆಲೆ ಕೊಡದಿದ್ದಾಗ ಗುದ್ದಲಿಯಿಂದ ನಾನೇ ಭೂಮಿ ಅಗೆಯಲು ಆರಂಭಿಸಿದೆ. ಆಗ ಎಲ್ಲಾ ಗ್ರಾಮಸ್ಥರು, ಮುಖಂಡರು ನನ್ನ ಬೆಂಬಲಕ್ಕೆ ನಿಂತು, ಭೂಮಿ ಅಗೆಯುವ ಕೆಲಸಕ್ಕೆ ಸಹಾಯ ಮಾಡಿದರು ಎಂದು ಸ್ವಾಮೀಜಿ ಹೇಳಿದ್ದಾರೆ.
ಶಿವಪ್ಪ ದಫೇದಾರ್ ಎನ್ನುವವರ ಜಮೀನು
ಶಿವಪ್ಪ ದಫೇದಾರ್ ಎನ್ನುವವರ ಜಮೀನಿನಲ್ಲಿ ಭೂಮಿ ಅಗೆದಂತೆ ಶಿವಲಿಂಗಗಳು ಸಿಗುತ್ತಾ ಹೋದವು. ವಿಶೇಷವೆಂದರೆ ಸ್ವಾಮೀಜಿ ಎಡವಿದ್ದ ಜಾಗದಲ್ಲಿಯೇ ಶಿವಲಿಂಗಗಳು ಕಾಣಿಸಿಕೊಂಡಿವೆ. ಈಗಾಗಲೇ ಮೂರು ಶಿವಲಿಂಗಳ ಪೈಕಿ ಒಂದು ಜ್ಯೋತಿರ್ಲಿಂಗ, ಭ್ರಮರಾಂಭ ಮತ್ತು ನಾಗದೇವರ ವಿಗ್ರಹ ಪತ್ತೆಯಾಗಿದೆ.
ಇನ್ನೂ 12 ಶಿವಲಿಂಗ
ಇಲ್ಲಿ ಇನ್ನೂ 12 ಶಿವಲಿಂಗಗಳು ಸಿಗಲಿವೆ, ಕಳೆದ ಫೆಬ್ರವರಿ 24 ರಂದು ಕಂಡ ಕನಸಿನಂತೆ ಉತ್ಖನನ ಕಾರ್ಯಕ್ಕೆ ಮುಂದಾಗಿದ್ದೇವೆ. 15 ಅಡಿ ಅಗಲ, 3 ಅಡಿ ಆಳ ಭೂಮಿ ಅಗೆದು ಲಿಂಗವನ್ನು ಪತ್ತೆಹಚ್ಚಲು ಎಲ್ಲರೂ ಸಹಕರಿಸಿದ್ದಾರೆ. ಎಲ್ಲರಿಗೂ ಶಿವನು ಮಂಗಳವನ್ನು ಉಂಟುಮಾಡಲಿ ಎಂದು ಸ್ವಾಮೀಜಿ ಮಾಧ್ಯಮದವರ ಮುಂದೆ ಹೇಳಿದ್ದಾರೆ.
800 ವರ್ಷಗಳ ಹಿ೦ದಿನ ಶಿವಲಿ೦ಗ
ಇದು 800 ವರ್ಷಗಳ ಹಿ೦ದಿನ ಶಿವಲಿ೦ಗ. ಇನ್ನು ಭೂಮಿ ಅಗೆದ೦ತೆ ಮ೦ದಿರವೂ ದೊರೆಯಲಿದೆ. ಗ್ರಾಮಸ್ಥರ ಪರಿಶ್ರಮದಿ೦ದ ಇಲ್ಲಿವರೆಗೆ ಉತ್ಖನನ ಮಾಡಿದ್ದೇವೆ. ತಾಲೂಕು ಆಡಳಿತವೂ ಉತ್ಖನನಕ್ಕೆ ಸಹಕರಿಸಬೇಕು ಎ೦ದು ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.
ಜನಪ್ರವಾಹ
ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಸ್ಥಳಕ್ಕೆ ತೆರಳಿ ಶಿವಲಿಂಗಕ್ಕೆ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಸ್ಥಳದಲ್ಲಿ ಭಕ್ತಿಯ ವಾತಾವರಣ ಮೂಡಿದ್ದು, ಜನಪ್ರವಾಹವೇ ಹರಿದುಬರುತ್ತಿದೆ. ಇದು ಮಲ್ಲಿಕಾರ್ಜುನ ದೇವಸ್ಥಾನದ ಅವಶೇಷಗಳು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.