ಪರೀಕ್ಷೆ ಬರೆಯಲು ಅವಕಾಶ ಸಿಗದೆ ವಿದ್ಯಾರ್ಥಿ ಆತ್ಮಹತ್ಯೆ
ಕೋಲಾರ, ಜ. 28: ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲ್ಪಟ್ಟ ವಿದ್ಯಾರ್ಥಿಯೋರ್ವ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂತೇನಹಳ್ಳಿ ಗ್ರಾಮದ ಎಸ್.ಎನ್. ಹರ್ಷ (17) ಮೃತ ವಿದ್ಯಾರ್ಥಿ.
ಮೃತ ಹರ್ಷ ಮಾಲೂರಿನ ಖಾಸಗಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ದ್ವಿತೀಯ ವರ್ಷ ಓದುತ್ತಿದ್ದ. ಈತನ ತಂದೆ ಜಿ.ಎಸ್. ನಾಗರಾಜ್ ಓರ್ವ ರೈತನಾಗಿದ್ದು, ಮಗನ 3,000 ರು. ಶುಲ್ಕ ಭರಿಸಲು ಸಾಧ್ಯವಾಗದ ಕಾರಣ ಪರೀಕ್ಷೆ ಬರೆಯಲು ನಿರಾಕರಿಸಿದ್ದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. [ಆತ್ಮಹತ್ಯೆ ಯತ್ನ ಇನ್ನು ಅಪರಾಧವಲ್ಲ]
ಮಂಗಳವಾರ ಪೂರ್ವತಯಾರಿ ಪರೀಕ್ಷೆ ಬರೆಯಲು ಬಂದಿದ್ದ ಹರ್ಷನಿಗೆ ಶಾಲೆಯ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿತ್ತು. ಆದ್ದರಿಂದ ನೊಂದ ಆತ ಮನೆಗೆ ಬಂದು ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಈ ಕುರಿತು ಹರ್ಷನ ತಂದೆ ನಾಗರಾಜ್ ಅವರು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೊಂದು ಅಸಹಜ ಸಾವೆಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.