ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ
ಚಾಮರಾಜನಗರ, ಜನವರಿ,14: ಕೌಟಂಬಿಕ ಕಲಹದಿಂದ ಬೇಸತ್ತ ಗೃಹಿಣಿ ತಾಯಿ ತನ್ನ ಕರುಳಿನ ಕುಡಿಗಳನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದಲ್ಲಿರುವ ಹೆಚ್.ಎಸ್.ಮಹದೇವಪ್ರಸಾದ್ ಬಡಾವಣೆಯಲ್ಲಿ ವಾಸವಾಗಿದ್ದ ಸಲೀಂಪಾಷರವರ ಪತ್ನಿ ಮುಖಾಸಿರ್(26) ಎಂಬ ಗೃಹಿಣಿ ತನ್ನ ಮಕ್ಕಳಾದ ಮಹಮ್ಮದ್ ತಿಹಾನ್ (3) ಹಾಗೂ ಮೂರು ತಿಂಗಳ ಫಾತಿಮಾ ಎಂಬ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.[ಸಣ್ಣಕಥೆ : ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!]
ಸಲೀಂಪಾಷ ಮತ್ತು ಮುಖಾಸಿರ್ ದಂಪತಿಗೆ ಮೂವರು ಮಕ್ಕಳಿದ್ದು ಹಿರಿಯ ಮಗ ಸಮೀರ್ (5) ತಾತನ ಮನೆಯಲ್ಲಿ ಇತ್ತು. ಈ ಎರಡು ಮಕ್ಕಳು ಮಾತ್ರ ತಂದೆ ತಾಯಿ ಜೊತೆ ಇದ್ದರು. ಗೋಣಿಚೀಲ ವ್ಯಾಪಾರ ಮಾಡುತ್ತಿದ್ದ ಸಲೀಂಪಾಷ ಕೇರಳದ ಸುಲ್ತಾನ್ ಬತ್ತೇರಿಯ ಮುಖಾಸಿರ್ ನ್ನು ಮದುವೆಯಾಗಿದ್ದನು. ದಂಪತಿಗಳ ನಡುವೆ ಆಗಾಗ್ಗೆ ಕಲಹಗಳು ನಡೆಯುತ್ತಿತ್ತು.[ಗರ್ಭಿಣಿ, ಮಕ್ಕಳ ರಕ್ಷಣೆಗಾಗಿ 'ವಾತ್ಸಲ್ಯವಾಣಿ-104']
ಬುಧವಾರ ಮಧ್ಯಾಹ್ನ ಮಾಂಸವನ್ನು ಮನೆಗೆ ತಂದ ಪಾಷಾ ಸಾರು ಮಾಡುವಂತೆ ಹೇಳಿ ಹೊರಗೆ ಹೋಗಿದ್ದಾನೆ. ಆತ ಬರುವಷ್ಟರಲ್ಲೇ ಮುಖಾಸಿರ್ ಮೂರು ವರ್ಷದ ಶಿಹಾನ್ ನನ್ನು ನೇಣು ಬಿಗಿದು ಸಾಯಿಸಿ, ಬಳಿಕ ಮೂರು ತಿಂಗಳ ಮಗುವನ್ನು ಉಸಿರು ಕಟ್ಟಿಸಿ ಸಾಯಿಸಿದ್ದಾಳೆ. ಆ ನಂತರ ಸೀರೆಯನ್ನು ಆರ್ಸಿಸಿ ಮೇಲ್ಛಾವಣಿಗೆ ಕಟ್ಟಿ ಬಳಿಕ ಆಕೆಯೂ ನೇಣು ಹಾಕಿಕೊಂಡಿದ್ದಾಳೆ.
ಸಂಜೆ ಮನೆಗೆ ಬಂದ ಸಲೀಂಪಾಷಾ ಪತ್ನಿ ನೇಣಿಗೆ ಶರಣಾಗಿದ್ದನ್ನು ಕಂಡು ನಂತರ ಮಕ್ಕಳಿಬ್ಬರೂ ಶವವಾಗಿದ್ದನ್ನು ಕಂಡು ಗಾಬರಿಯಾಗಿದ್ದಾನೆ. ಜನರು ನೀಡಿದ ಮಾಹಿತಿ ಮೇರೆಗೆ ಆಗಮಿಸಿದ ಗುಂಡ್ಲುಪೇಟೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಎಸ್ಐ ಸಂದೀಪ್ ಕುಮಾರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಶವದ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.