ಉಡುಪಿ: ಲಾರಿಗೆ ಬಸ್ ಡಿಕ್ಕಿ, ಪ್ರಯಾಣಿಕನ ದಾರುಣ ಸಾವು
ಉಡುಪಿ,ಫೆಬ್ರವರಿ,03: ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸೊಂದು ಮೀನಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಉಡುಪಿಯ ಕಾಪು ಪೊಲಿಪು ಮಸೀದಿ ಬಳಿಯಲ್ಲಿ ನಡೆದಿದೆ.
ಕಾಪು ಕೋತಲ್ ಕಟ್ಟೆ ಪೂವಾನಿ ಗುತ್ತು ನಿವಾಸಿ ಪ್ರೀತಂ (23) ಮೃತಪಟ್ಟ ಯುವಕ. ಮೃತ ಪ್ರೀತಂ ಮಂಗಳೂರಿನ ರಾಧಾ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು ಎಂದು ತಿಳಿದು ಬಂದಿದೆ. ಇನ್ನಿಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.[ಮನೆಗೆ ಬಾರದ ಮಗನಿಗಾಗಿ ಪರಿತಪಿಸುತ್ತಿರುವ ಉಡುಪಿ ಕುಟುಂಬ]
ಘಟನೆಯ ವಿವರ:
ಉಡುಪಿಯ ಕಾಪು ಬಳಿಯ ಪೊಲಿಪು ಮಸೀದಿ ಹತ್ತಿರ ಹಾಳಾಗಿರುವ ಮೀನನ್ನು ಸಾಗಿಸುವ ಲಾರಿ ನಿಂತಿತ್ತು. ಆಗ ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಬಸ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಬಸ್ಸಿನ ಮುಂದಿನ ಸೀಟಿನಲ್ಲಿ ಪ್ರೀತಂ ಕುಳಿತಿದ್ದನು. ಲಾರಿಯ ರಾಡ್ ಆತನಿಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಬಳಿಕ ಬಸ್ ಚಾಲಕ ಪರಾರಿಯಾದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಚಾಲಕ ಹಾಗೂ ಮಾಲಿಕ ಸ್ಥಳಕ್ಕೆ ಬಾರದೇ ವಾಹನವನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.[ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]
ಸಾರ್ವಜನಿಕರ ಪ್ರತಿಭಟನೆಯಿಂದ ಸ್ಥಳದಲ್ಲಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೊಲೀಸರ ಜೊತೆ ನಾಗರಿಕರು ಮಾತಿನ ಚಕಮಕಿ ನಡೆಸಿದರು.