ಇಬ್ಬರು ಮಕ್ಕಳ ಬಾಳಿಗೆ ಬೆಳಕಾದ ವಿಜಯಪುರದ 'ಜ್ಯೋತಿ'
ವಿಜಯಪುರ,ಫೆಬ್ರವರಿ,12: ಆಕೆಗೆ ಇನ್ನೂ ಎಂಟು ವರ್ಷ. ಆದರೆ ಆ ಬಾಲಕಿಯ ಸಾಹಸ ವಯಸ್ಸನ್ನು ಮೀರಿದ್ದು. ಹೌದು ಸಾವಿನ ನೆಲೆಯಿಂದ ಇಬ್ಬರ ಮಕ್ಕಳನ್ನು ಪಾರು ಮಾಡಿದ ಈ ಬಾಲಕಿ ಇಬ್ಬರ ಮಕ್ಕಳ ಪಾಲಿಗೆ ಪುನರ್ಜನ್ಮ ನೀಡಿದ ತಾಯಿ.
ಹೌದು. ಗುಡಿಸಲಿಗೆ ಬೆಂಕಿ ಹತ್ತಿದ ಸಮಯದಲ್ಲಿ ಇಬ್ಬರು ಮಕ್ಕಳನ್ನು ಬೆಂಕಿಯ ಕೆನ್ನಾಲಿಗೆಯಿಂದ ಪಾರು ಮಾಡಿ, ತನ್ನ ಜೀವವನ್ನು ಉಳಿಸಿಕೊಂಡ ಬಾಲಕಿಯೇ 'ಜ್ಯೋತಿ'. ಈ ಸಾಹಸಮಯ ಘಟನೆಗೆ ಸಾಕ್ಷಿಯಾಗಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮೈಬೂಬ ಹಳ್ಳೂರ ನಾಲತವಾಡ.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]
ಶೇಖಣ್ಣ, ಶ್ರೀ ಶೈಲ ಹಾಗೂ ಹಣಮಂತ ಚಲವಾದಿ ಎಂಬುವವರು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಮೈಬೂಬ ಹಳ್ಳೂರ ನಾಲತವಾಡದಲ್ಲಿ ಗಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಇವರು ಕುಟುಂಬ ಸಮೇತ ಗುರುವಾರ ತಮ್ಮ ಮಕ್ಕಳಾದ ಜ್ಯೋತಿ, ಮಿಲನ್ ಹಾಗೂ ಸ್ವಪ್ನಾಳನ್ನು ಗುಡಿಸಲಿನಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು.
ಆ ಸಂದರ್ಭದಲ್ಲಿ ಏಕಾಏಕಿ ಗುಡಿಸಲಿಗೆ ಬೆಂಕಿ ಹತ್ತಿಕೊಂಡಿದೆ. ಇದನ್ನು ಗಮನಿಸಿದ ಜ್ಯೋತಿ ಕೊಂಚವೂ ತಡ ಮಾಡದೆ ಸ್ವಪ್ನಾಳನ್ನು ತಕ್ಷಣ ಗುಡಿಸಲಿನಿಂದ ಹೊರಗೆ ತಂದು ಬಿಟ್ಟಿದ್ದಾಳೆ. ಅಷ್ಟರಲ್ಲೇ ಬೆಂಕಿ ಗುಡಿಸಲ ತುಂಬಾ ವ್ಯಾಪಿಸಿತ್ತು. ಒಳಗೆ ಹೋಗುವುದು ದುಸ್ತರವಾಗಿತ್ತು. ಆದರೂ ಧೈರ್ಯಗೆಡದ ಜ್ಯೋತಿ ತಕ್ಷಣ ಒಳನುಗ್ಗಿ ಸಹೋದರ ಮಿಲನ್(1)ನನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾಳೆ.[ಮೋದಿ ಕನಸಿನ 'ಬೇಟಿ ಬಚಾವೋ' ಯೋಜನೆಗೆ ವಿಜಯಪುರ]
ಹಾಗೇಯೇ ತಮ್ಮ ಜೀವನಕ್ಕೆ ಆಧಾರವಾಗಿದ್ದ ಎರಡು ಮೇಕೆಗಳನ್ನು ಸಹ ಪಾರುಮಾಡಿ, ಇಡೀ ಊರಿನ ಜನರ ಶ್ಲಾಘನೆಗೆ ಪಾತ್ರವಾಗಿದ್ದಾಳೆ. ಮಿಲನ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನಕ್ಕೆಂದು ಸಂಗ್ರಹಿಸಿಟ್ಟಿದ್ದ ಧಾನ್ಯ ಹಾಗೂ ಗೃಹ ಬಳಕೆಯ ವಸ್ತುಗಳು ಮಾತ್ರ ಸುಟ್ಟು ಹೋಗಿವೆ.