ಮದುವೆಗೆ ಕನ್ಯೆ ಹುಡುಕಿ ಕೊಡಿ, ಕೃಷಿಕನೊಬ್ಬನ ಕರುಣಾಜನಕ ಪತ್ರ!
ಗದಗ, ಆಗಸ್ಟ್ 2: "ನಾನು ಕೃಷಿಕ, ಕೃಷಿಯಲ್ಲಿಯೇ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನೂ ಮದುವೆಯಾಗಬೇಕು. ಅದಕ್ಕೆ ನನಗೂ ವಧು ಬೇಕು. ದಯಮಾಡಿ ನನಗೊಂದು ಹುಡುಗಿಯನ್ನು ಹುಡುಕಿಕೊಡಿ..."
-ರೈತನಾಗಿರುವ ಕಾರಣಕ್ಕೆ ಮದುವೆಗೆ ವಧು ಸಿಗದೆ ಪರಿತಪಿಸುತ್ತಿರುವ ಇಪ್ಪತ್ತೊಂಬತ್ತು ವರ್ಷದ ಯುವಕನ ಕಥೆ ಇದು. ವಧು ಅನ್ವೇಷಣೆ ನಡೆಸಿ ಬೇಸತ್ತಿರುವ ಈ ಯುವಕ ಕೊನೆಗೆ ದಿಕ್ಕು ತೋಚದೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ಪತ್ರ ಬರೆದಿದ್ದಾರೆ. ಅದರಿಂದ ಏನು ಪ್ರಯೋಜನ ಎಂಬುದು ಬೇರೆ ಮಾತು.
ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ರಾಮಗಿರಿ ಗ್ರಾಮದ ಮಂಜುನಾಥ ರಾಮಪ್ಪ ಪೂಜಾರ ಈ ಪತ್ರ ಬರೆದ ಯುವಕ. ಕರುಣಾಜನಕವಾದ ಅವರ ಸ್ಥಿತಿ ಬಗ್ಗೆ ಓದಿದರೆ ಕರುಳು ಹಿಂಡಿದಂತಾಗುತ್ತದೆ.
ಮೂಲತಃ ನಾನು ಕೃಷಿ ಕುಟುಂಬದಿಂದ ಬಂದವನಾಗಿದ್ದು, ನನಗೆ ಇಪ್ಪತ್ತೊಂಬತ್ತು ವರ್ಷ ವಯಸ್ಸು, ನನಗೊಂದು ಕನ್ಯೆ ಬೇಕಿದೆ. ಅನೇಕ ಕಡೆ ಹುಡುಗಿಯರನ್ನು ನೋಡಿದ್ದರೂ ರೈತನಾಗಿರುವ ನನಗೆ ಯಾರೂ ಹೆಣ್ಣು ಕೊಡಲು ಮುಂದಾಗುತ್ತಿಲ್ಲ. ದಯಮಾಡಿ ನನಗೊಂದು ಹುಡುಗಿಯನ್ನು ಹುಡುಕಿ ಕೊಡಿ... ಎಂದು ಬೇಡಿಕೊಂಡಿದ್ದಾರೆ.
ಕೃಷಿಕರ ಬಾಳು ಹೇಗೆ?
ಅಲ್ಲದೆ "ರೈತನೆಂಬ ಕಾರಣಕ್ಕೆ ನನ್ನ ಜೊತೆ ವೈವಾಹಿಕ ಸಂಬಂಧ ಬೆಳೆಸಲು ನಿರಾಕರಿಸುತ್ತಿದ್ದು, ಹೀಗಾದರೆ ಕೃಷಿಕರ ಬಾಳು ಹೇಗೆ?" ಎಂದೂ ಮಂಜುನಾಥ ಆತಂಕ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷದಿಂದ ಹುಡುಕಾಟ
ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದೇನೆ. ಮಳೆಯಾಶ್ರಿತ ಬೇಸಾಯ ನೆಚ್ಚಿಕೊಂಡಿರುವ ನನಗೆ ಐದು ಎಕರೆ ಭೂಮಿ ಇದೆ. ಈ ವರ್ಷ ಬೆಳ್ಳುಳ್ಳಿ ಹಾಕಿದ್ದೇನೆ. ಗದಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳ ಮೂವತ್ತು ಊರುಗಳಲ್ಲಿ ಮೂರು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹುಡುಗಿಯನ್ನು ಹುಡುಕುತ್ತಿದ್ದೇನೆ. ಆದರೆ ಇದುವರೆಗೂ ಮದುವೆ ಭಾಗ್ಯ ಕೂಡಿಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನನ್ನಂಥ ರೈತರ ಸ್ಥಿತಿ ಹೇಗೆ?
ವ್ಯವಸಾಯ ಮಾಡುವ ರೈತನಿಗೆ ಕನ್ಯೆ ಕೊಡುವುದಿಲ್ಲ ಎಂದರೆ ನನ್ನಂಥ ಕೋಟ್ಯಂತರ ರೈತ ಯುವಕರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿರುವ ಮಂಜುನಾಥ, ಇದಕ್ಕೊಂದು ಶಾಶ್ವತ ಪರಿಹಾರ ಹುಡುಕಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾನೆ.
ಇದು ಖಂಡಿತಾ ತಮಾಷೆಯಲ್ಲ..
ವಿಚಿತ್ರ ಆದರೂ ಸತ್ಯ. ಈ ಪತ್ರವನ್ನು ನೋಡಿ ಯಾರಾದರೂ ತಮಾಷೆ ಎಂದುಕೊಳ್ಳಬಹುದು ಅಥವಾ ಅದನ್ನು ಹಾಸ್ಯವಾಗಿಯೂ ಸ್ವೀಕರಿಸಬಹುದು. ಆದರೆ ರೈತನಾಗಿರುವ ಒಂದೇ ಕಾರಣಕ್ಕೆ ಆತನನನ್ನು ಮದುವೆಯಾಗಲು ಯಾವ ಹುಡುಗಿಯೂ ಮುಂದೆ ಬರುತ್ತಿಲ್ಲ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಹುಡುಗಿಯ ಮನೆಯವರು ಧಾರೆ ಎರೆಯಲು ಒಪ್ಪುತ್ತಿಲ್ಲ ಎಂಬ ಕಟು ಸತ್ಯ ಇದರ ಹಿಂದೆ ಇದೆ.