ಆನೆಯನ್ನು ತುಂಡರಿಸಿ ಬಾವಿಗೆ ಹಾಕಿದ ರೈತ
ಚಾಮರಾಜನಗರ, ಡಿ, 23: ನೋಡುವುದಕ್ಕೆ ಮಾತ್ರ ಬಡಕಲು ದೇಹ, ಆದರೆ ಮಾಡಿದ್ದು ಎಲ್ಲರೂ ಅಚ್ಚರಿ ಪಡುವ ಕೆಲಸ. ಈ ಸುದ್ದಿ ಕೇಳಿದರೆ ಅಯ್ಯೋ ಆತ ಈ ಕೆಲಸ ಹೇಗೆ ಮಾಡಿದ್ನಪ್ಪಾ ಎಂದು ಒಮ್ಮೆಯಾದರೂ ಯೋಚಿಸ್ತೀರಾ.
ಹೌದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಳಿ ಇರುವ ಶಿಲುಬೇಪುರದ ಚಿನ್ನಪ್ಪಯ್ಯ ಎಂಬ ರೈತ ದೈತ್ಯಾಕಾರದ ಆನೆಯನ್ನು ತುಂಡು ತುಂಡು ಮಾಡಿ ಬಾವಿಗೆ ಬಿಸಾಡಿದ್ದಾನೆ. ಇದೀಗ ಈತನನ್ನು ವಶಕ್ಕೆ ತೆಗೆದುಕೊಂಡ ಅರಣ್ಯಾಧಿಕಾರಿಗಳು ಆನೆಯನ್ನು ಬಾವಿಯಿಂದ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.[ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]
ಏನಿದು ಘಟನೆ?
ಚಿನ್ನಪ್ಪಯ್ಯ ಜಮೀನಿನಲ್ಲಿ ಬೆಳೆದ ಫಸಲು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಜಮೀನಿನ ಸುತ್ತ ತಂತಿ ಬೇಲಿ ಹಾಕಿ ಅಕ್ರಮವಾಗಿ ವಿದ್ಯುತ್ ಹರಿಸಿದ್ದನು. ಅರಣ್ಯ ಪ್ರದೇಶದಿಂದ ಆನೆ ಆಹಾರಕ್ಕಾಗಿ ಚಿನ್ನಪ್ಪಯ್ಯ ಜಮೀನಿನ ಸಮೀಪ ಬಂದಿದೆ.
ಆಗ ಆನೆ ಅಕ್ರಮ ವಿದ್ಯುತ್ ತಂತಿ ಬೇಲಿ ಮುರಿಯಲು ಮುಂದಾದಾಗ ವಿದ್ಯುತ್ ಹರಿದ ಪರಿಣಾಮ ಆನೆ ಮೃತಪಟ್ಟಿದೆ. ವಿಷಯ ತಿಳಿದ ಜಮೀನು ಮಾಲೀಕ ಚಿನ್ನಪ್ಪಯ್ಯ ಕೂಲಿಗಾರರ ಸಹಕಾರದಿಂದ ಆನೆ ಮೃತದೇಹವನ್ನು ತುಂಡರಿಸಿ ಬಾವಿಗೆ ಹಾಕಿದನು.[ರಾಜ ಗಾಂಭೀರ್ಯದ ದಸರಾ ಗಜಪಡೆ ಎಲ್ಲಿಂದ ಬಂದಿತ್ತು?]
ವಿದ್ಯುತ್ ತಂತಿ ಬೇಲಿಗೆ ತಗುಲಿ ಆನೆ ಮೃತಪಟ್ಟ ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗೇರಿ ಬಳಿಯ ಶಿಲುಬೇಪುರಕ್ಕೆ ಧಾವಿಸಿ, ಆರೋಪಿ ಚಿನ್ನಪ್ಪಯ್ಯನನ್ನು ವಶಕ್ಕೆ ತೆಗೆದುಕೊಂಡಿದ್ದು, ಬಾವಿಯಿಂದ ಆನೆಯ ತುಂಡಾದ ದೇಹವನ್ನು ಹೊರ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.