ಒಂದೇ ನಿರ್ಣಯದೊಂದಿಗೆ ಶ್ರವಣಬೆಳಗೊಳ ಸಮ್ಮೇಳನಕ್ಕೆ ತೆರೆ
ಹಾಸನ, ಫೆ.3 : ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯುತ್ತಿದ್ದ ಮೂರು ದಿನಗಳ ಅಕ್ಷರ ಜಾತ್ರೆಗೆ ತೆರೆಬಿದ್ದಿದೆ. 'ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಬೇಕು' ಎಂಬ ಒಂದೇ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ. 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರು ನಗರದಲ್ಲಿ ನಡೆಯಲಿದೆ.
ಸಮ್ಮೇಳನದ ಕೊನೆಯ ದಿನವಾದ ಮಂಗಳವಾರ 'ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಬೇಕು. ಸಂಸತ್ನಲ್ಲಿ ಇದಕ್ಕೆ ಅಗತ್ಯವಾದ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮಾತೃಭಾಷೆ ಬಗೆಗಿನ ಆತಂಕ ನಿವಾರಣೆ ಮಾಡಬೇಕು' ಎಂಬ ಏಕಮಾತ್ರ ನಿರ್ಣಯವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಂಡಿಸಿದರು. [ಸಮ್ಮೇಳನದ ಚಿತ್ರಗಳನ್ನು ನೋಡಿ]
ಕರ್ನಾಟಕದ ಒಕ್ಕೊರಲ ಧ್ವನಿಯಾಗಿ ಒಂದು ನಿರ್ಣಯ ತೆಗೆದುಕೊಂಡು ಇದರ ಅನುಷ್ಠಾನಕ್ಕೆ ಹೋರಾಡುವ ನಿರ್ಧಾರವನ್ನು ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಮೂಲ ಆಶಯಕ್ಕೆ ಧಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಪುಂಡಲೀಕ ಹಾಲಂಬಿ ಹೇಳಿದರು. ಸಾಹಿತ್ಯ ಸಮ್ಮೇಳನದ ಚಿತ್ರಗಳು
ಡಾ.ಸಿದ್ದಲಿಂಗಯ್ಯ ಅವರ ಜನ್ಮದಿನ
81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಇಂದು ಸಮ್ಮೇಳನದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯನವರ ಜನ್ಮದಿನ. ಹಲವಾರು ಗಣ್ಯರು ಈ ಸಂದರ್ಭದಲ್ಲಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. 61ನೇ ವಸಂತಕ್ಕೆ ಕಾಲಿಡುತ್ತಿರುವ ಸಿದ್ದಲಿಂಗಯ್ಯ ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಸಾಹಿತ್ಯ ಪರಿಷತ್ತು ಸಹ ಹುಟ್ಟು ಹಬ್ಬದ ಶುಭಾಶಯ ಕೋರಿತು.
ದಾಖಲೆಯ ಪುಸ್ತಕ ಮಾರಾಟ
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಇಂದು ಮಧ್ಯಾಹ್ನದ ವರೆಗೆ ಸುಮಾರು 3 ಕೋಟಿ ರೂ.ಗಳಷ್ಟು ಪುಸ್ತಕ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟು ಮೊತ್ತದ ಪುಸ್ತಕ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ತಾರೆಯರ ದಂಡು
ಕರ್ನಾಟಕ ಸಿನಿಮಾ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಹಿರಿಯ ನಟರಾದ ಶಿವರಾಂ, ನಿರ್ದೇಶಕ ನಾಗಾಭರಣ ಮತ್ತು ನಾಗತಿಹಳ್ಳಿ ಚಂದ್ರಶೇಖರ್, ನಟಿ ಜಯಮಾಲಾ ಮುಂತಾದವರು ಇಂದು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳಿಗೆ ಪಂಕ್ತಿಬೇಧ ಬೇಡ
ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ನಡೆಸುತ್ತಿರುವ 'ಸಹಮತ' ಶಾಲಾ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ಬಂದು ಪ್ರಧಾನ ವೇದಿಕೆಯ ಬಳಿ 'ಎಳೆಯ ಮಕ್ಕಳ ಶಿಕ್ಷಣದಲ್ಲಾದರೂ ಪಂಕ್ತಿ ಭೇದ ಕೂಡದು' ಎಂಬ ಬರಹದ ಪ್ರತಿಯನ್ನು ಪುಂಡಲೀಕ ಹಾಲಂಬಿ ಅವರಿಗೆ ನೀಡಿದರು. ಸುಮಾರು 20ಸಾವಿರ ಸಹಿಗಳನ್ನು ಈ ಮನವಿ ಒಳಗೊಂಡಿತ್ತು.
ಸಮ್ಮೇಳನಕ್ಕೆ ಬಂದ್ರು ಮಹಾತ್ಮಾ ಗಾಂಧಿ
ಸಮ್ಮೇಳನದ ಕೊನೆಯ ದಿನವಾದ ಮಂಗಳವಾರ ಮಹಾತ್ಮಾ ಗಾಂಧಿ ವೇಷತೊಟ್ಟ ವ್ಯಕ್ತಿಯೊಬ್ಬರು ಸಮ್ಮೇಳನದಲ್ಲಿ ಎಲ್ಲರ ಗಮನಸೆಳೆದರು.
ರಾಯಚೂರಿನಲ್ಲಿ ಮುಂದಿನ ಸಮ್ಮೇಳನ
82ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಯಚೂರು ನಗರದಲ್ಲಿ ನಡೆಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ರಾಯಚೂರಿನಲ್ಲಿ ಸಮ್ಮೇಳನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಬಾರಿ ಹಾವೇರಿಯಲ್ಲಿ ಎದುರಾದಂತಹ ಸಮಸ್ಯೆ ಬರಬಾರದು ಎಂಬ ಕಾರಣಕ್ಕೆ ರಾಯಚೂರು ನಗರದಲ್ಲೇ ನಡೆಸಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿದೆ.
ಅಭೂತಪೂರ್ವ ಯಶಸ್ಸು
ಸಾಹಿತ್ಯಾಸಕ್ತರು, ಜನರ ಪ್ರೀತಿ ಮನ್ನಣೆಯಿಂದ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಗಳಿಸಿದೆ. ನಿರೀಕ್ಷೆಗೂ ಮೀರಿ ಜನ ಹರಿದು ಬರುತ್ತಿದ್ದರೂ ಯಾವುದೇ ಗೊಂದಲಗಳಿಲ್ಲದಂತೆ ಸಮ್ಮೇಳನ ಮುಕ್ತಾಯಗೊಂಡಿದೆ. ಸಾಹಿತ್ಯಾಸಕ್ತರು ನಾಡು, ನುಡಿಯ ಕಾಳಜಿ ಹೊತ್ತ ಹಲವಾರು ಮಂದಿ ಅಕ್ಷರ ಜಾತ್ರೆಯ ಯಶಸ್ಸಿಗಾಗಿ ಸಹಕರಿಸಿದ್ದಾರೆ.