ಬೀದರಿನ ಅಂಗನವಾಡಿ ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ
ಬೀದರ್. ಡಿಸೆಂಬರ್ 28: ಜಿಲ್ಲೆಯ ಔರಾದ ತಾಲೂಕಿನ ಉಜನಿ ಗ್ರಾಮದ ಅಂಗನವಾಡಿ ಶಿಕ್ಷಕಿಯೊಬ್ಬರ ಮೇಲೆ ಏಳು ಜನರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಸೋಮವಾರ ರಾತ್ರಿ ಜರುಗಿದೆ. ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಸೋಮವಾರ ರಾತ್ರಿ ಉಜನಿ ಗ್ರಾಮದ ಸೈಮನ್ ಹಾಗೂ ಕಾಂಚನ ಎಂಬುವವರು ಅಂಗನವಾಡಿ ಶಿಕ್ಷಕಿ ಮನೆಗೆ ಬಂದಿದ್ದಾರೆ.ಸೈಮನ್ ತನ್ನ ತಂಗಿಗೆ ಹೆರಿಗೆ ನೋವು ಎಂದು ತಿಳಿಸಿ ಮೂವರು ಆಟೋದಲ್ಲಿ ಆಸ್ಪತ್ರೆಯತ್ತ ತೆರಳಿದ್ದು,ಸುಂಕನಾಳ ಕ್ರಾಸ್ ಬಳಿ ಆಟೋ ನಿಲ್ಲಿಸಿದ್ದಾರೆ. ಈ ವೇಳೆ ಅಲ್ಲೆ ಇದ್ದ ಏಳು ಜನರ ತಂಡ ಕೈಕಾಲು ಕಟ್ಟಿ ಎಳದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಕಾಂಚನ ಮತ್ತು ಸೈಮನ್ ಆಟೋದಿಂದ ಪರಾರಿಯಾಗಿದ್ದರು ಎಂದು ಶಿಕ್ಷಕಿ ತಿಳಿಸಿದ್ದಾರೆ.[ಕಳ್ಳರಿಂದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ]
ಪ್ರಜ್ಞೆ ತಪ್ಪಿ ರಸ್ತೆಯಲ್ಲೇ ಮಲಗಿದ್ದ ಅಂಗನವಾಡಿ ಶಿಕ್ಷಕಿ ಮಂಗಳವಾರ ಎಚ್ಚರಗೊಂಡು ಚಿಂತಾಕಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಯನ್ನು ಔರಾದ ಸರಕಾರಿ ಆಸ್ಪತ್ರೆಯಲ್ಲಿ ಪಡೆದಿರುವುದಾಗಿ ತಿಳಿಸಿದರು.
ಆತ್ಯಾಚಾರ ವೆಸಗಿದವರು ಉಜನಿ ಗ್ರಾಮದವರೇ ಎಂದು ಅಂಗನವಾಡಿ ಶಿಕ್ಷಕಿ ಗುರುತಿಸಿದ್ದು,ರಾಮಪ್ಪ ಮಾಳಗೆ, ಶಾಂತಪ್ಪ ಕಾಂಬಳೆ, ಬಾಬುರಾವ್ ಪಾಟೀಲ, ಅಬ್ರಾಹಂ ಮಾಳಗೆ, ಸುಭಾಷ ಕಾಂಬಳೆ, ಸುಮಂತ ಹಲಗೆ, ಸಂಜು ಮಾಳಗೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.[ಚಿಕ್ಕಬಳ್ಳಾಪುರ : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ]
ಶಿಕ್ಷಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾಮೂಹಿಕ ಅತ್ಯಾಚಾರ ಸಂಬಂಧ ವೈದ್ಯಕೀಯ ಪರೀಕ್ಷಾ ವರದಿ ಇನ್ನು ಬರಬೇಕಿದೆ.