ಸರಕಾರಕ್ಕೆ 39 ಕೋಟಿ ಉಂಡೆನಾಮ ತಿಕ್ಕಿ ಸಿಕ್ಕಿಬಿದ್ದ ಸಪ್ತ ಭ್ರಷ್ಟರು
ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸರಕಾರಕ್ಕೆ ಉಂಡೆ ನಾಮ ತಿಕ್ಕಿದ 7 ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಮಾರ್ಚ್ 19: ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸರಕಾರಕ್ಕೆ ಉಂಡೆ ನಾಮ ತಿಕ್ಕಿದ 7 ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
1 ಲಕ್ಷದ 154 ಬಿಲ್ಲುಗಳನ್ನು ತಯಾರಿಸಿ 7 ಅಧಿಕಾರಿಗಳು ಸರಕಾರಕ್ಕೆ 1.54 ಕೋಟಿ ವಂಚನೆ ಮಾಡಿದ್ದಾರೆ ಎಂಬುದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ 7 ಜನರನ್ನು ಶನಿವಾರ ಸಿಐಡಿ ಪೊಲೀಸರು ಬಂಧಿಸಿದ್ದಾರೆ.[ನಮಸ್ಕಾರ, ದಿಗ್ವಿಜಯ್ ಸಿಂಗ್ ಸರ್, ಹೋಗಿ ಬನ್ನಿ!]
ಬಂಧಿತರಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರೇಮಾನಂದ ಕುಮಾರ್, ಟೆಕ್ನಿಕಲ್ ಅಸಿಸ್ಟೆಂಟ್ ಎ ಡಿ ಜಾಧವ್, ಅಕೌಂಟ್ ಸೂಪರಿಂಟೆಂಡೆಂಟ್ ದೊಡ್ಡ ಬಸಯ್ಯ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಳಾದ ಬಿ ಶಿವಕುಮಾರ್, ಎಸ್ ಮನೋಹರ್, ಎಂ ಎಸ್ ಪವಾರ್ ಹಾಗೂ ಕಲಬುರ್ಗಿ ಎಫ್.ಡಿ.ಎ ಚಂದ್ರಶೇಖರ್ ಎಚ್ ಎಂಬುವವರು ಸೇರಿದ್ದಾರೆ.
ಪ್ರಕರಣದ ಮೂಲ
ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಭಾಗದ ಸಣ್ಣ ನೀರಾವರಿ ಇಲಾಖೆಯಲ್ಲಿ 2015ರ ಅಕ್ಟೋಬರ್ ನಿಂದ 2016ರ ಜನವರಿ ವರೆಗೆ ಸುಮಾರು 39.38 ಕೋಟಿ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರು ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಬಹಳ ಹಿಂದೆಯೇ ದಾಖಲಾಗಿತ್ತು.
ಟೆಂಡರ್ ಕರೆಯದೆ, ನಿಯಮದನುಸಾರ ಕಾಮಗಾರಿಗಳನ್ನೂ ನಡೆಸದೆ, ಮೇಲಾಧಿಕಾರಿಗಳ ಮಂಜೂರಾತಿಯನ್ನೂ ಪಡೆಯದೆ ಕೇವಲ ಕಚೇರಿಯಲ್ಲೇ ಕುಳಿತು ಅಂದಾಜು ಪಟ್ಟಿಗಳನ್ನು ತಯಾರಿಸಿ ಸರಕಾರದ ಹಣವನ್ನು ಮಂಜೂರು ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕೇಸಿನಲ್ಲಿ ಉಲ್ಲೇಖಿಸಲಾಗಿತ್ತು.[ಮಾರ್ಚ್ 30ರಿಂದ ರಾಜ್ಯಾದ್ಯಂತ ಟ್ರಕ್ ಮಾಲೀಕರ ಮುಷ್ಕರ?]
ನಂತರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ಈ ಸಂಬಂಧ ಶನಿವಾರ 50 ಸಿಐಡಿ ಅಧಿಕಾರಿಗಳ 9 ತಂಡಗಳು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ 9 ತಾಲೂಕುಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿತ್ತು. ತನಿಖೆ ವೇಳೆ 172 ಸ್ಥಳಗಳಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ತೋರಿಸಿ 3,938 ಬಿಲ್ಲುಗಳನ್ನು ಸೃಷ್ಟಿ ಮಾಡಲಾಗಿತ್ತು. ಈ ಕಾಮಗಾರಿಗಳಿಗೆ 1 ಲಕ್ಷ ರೂಪಾಯಿಯ 154 ಬಿಲ್ಲುಗಳನ್ನು ಸೃಷ್ಟಿ ಮಾಡಿ 1.54 ಕೋಟಿ ರೂಪಾಯಿಗಳನ್ನು ದುರ್ಬಳಕೆ ಮಾಡಿರುವುದು ಗೊತ್ತಾಗಿದೆ.
ಇದೀಗ ಏಳೂ ಭ್ರಷ್ಟರಿಗೆ ಸೇರಿದ ಸೈಟು, ಮನೆಗಳು, ಜಮೀನಿನ ದಾಖಲೆಗಳು, ಚಿನ್ನಾಭರಣ, ಬ್ಯಾಂಕ್ ಲಾಕರುಗಳು, ಮೊಬೈಲ್, ಲ್ಯಾಪ್ ಟಾಪ್, ವಾಹನಗಳು, ನಗದು ಮೊದಲಾದುವುಗಳನ್ನು ವಶಕ್ಕೆ ಪಡೆದಿದ್ದಾರೆ.
ಇಲ್ಲೀವರೆಗಿನ ತನಿಖೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿರುವುದು ಗೊತ್ತಾಗಿದ್ದು ತನಿಖೆಯನ್ನು ಮುಂದುವರಿಸಲಾಗಿದೆ.