ಅಥಣಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ: ಚುರುಕುಗೊಂಡ ರಕ್ಷಣಾ ಕಾರ್ಯ
ಮಬ್ಬುಗತ್ತಲೆಯಲ್ಲಿ ಕಟ್ಟಿಗೆ ಆರಿಸುತ್ತಾ ಬಂದಾಗ ಆಕಸ್ಮಿಕವಾಗಿ ಸುಮಾರು 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಕಾವೇರಿ.
ಅಥಣಿ (ಬೆಳಗಾವಿ), ಏಪ್ರಿಲ್ 22: ಇಲ್ಲಿನ ಝಂಜರವಾಡ ಗ್ರಾಮದ ಜಮೀನಿನೊಂದರಲ್ಲಿ ತೋಡಿಸಲಾಗಿದ್ದ ಕೊಳವಿ ಬಾವಿಯಲ್ಲಿ ಕಾವೇರಿ ಎಂಬ 6 ವರ್ಷದ ಹೆಣ್ಣು ಬಿದ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮಗುವನ್ನು ಮೇಲೆ ತೆಗೆಯಲು ಬೆಳಗಾವಿಯಿಂದ ಎನ್ ಡಿಆರ್ ಎಫ್ ಸೇನಾ ತುಕಡಿಯೊಂದನ್ನು ಕರೆಸಲಾಗುತ್ತಿದ್ದು, ಆ ತುಕಡಿಯು ಈಗಾಗಲೇ ಕರ್ನಾಟಕದ ಗಡಿ ಪ್ರದೇಶ ತಲುಪಿದೆ ಎಂದು ಮೂಲಗಳು ಹೇಳಿವೆ.
ಈ ಬಾವಿಯು ಝಂಜರವಾಡ ಗ್ರಾಮದ ಶಂಕರ್ ಹಿಪ್ಪರಗಿ ಎಂಬುವರಿಗೆ ಸೇರಿದ್ದೆಂದು ಹೇಳಲಾಗಿದೆ. ಆತ ತನ್ನ ಜಮೀನಿನಲ್ಲಿ ಈ ಕೊಳವೆ ಬಾವಿ ತೆಗೆಸಿದ್ದ ಎಂದು ಹೇಳಲಾಗಿದೆ.[500 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ ಮಗು ಸಾವು]
ಕಟ್ಟಿಗೆ ಆರಿಸುತ್ತಾ ಬಂದ ಬಾಲಕಿಯು ಆಕಸ್ಮಿಕವಾಗಿ ಈ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದೆ. ಆದರೆ, ಕೊಳವೆ ಬಾವಿಯ ಪೈಪಿನಲ್ಲಿ ಮೆದು ಮಣ್ಣು ಸಂಗ್ರಹವಾಗಿರುವುದರಿಂದ ಬಾಲಕಿಯು ಸುಮಾರು 25 ಅಡಿ ಆಳದಲ್ಲಿದ್ದಾಳೆಂದು ತಜ್ಞರು ತಿಳಿಸಿದ್ದಾರೆ.[ಗದಗ ಕೊಳವೆ ಬಾವಿ ದುರಂತ: ಕಾರ್ಮಿಕರಿಬ್ಬರೂ ಸಾವು]
ಈ ಬಾಲಕಿಯು ಅಜಿತ್ ಮತ್ತು ಸವಿತಾ ಎಂಬ ದಂಪತಿಯ ಪುತ್ರಿ. ಈ ದಂಪತಿಗೆ ಮೂವರು ಮಕ್ಕಳು. ಮೊದಲನೆಯವಳು ಅನ್ನಪೂರ್ಣ. ಈಕೆಗೆ 7 ವರ್ಷ. ಕಾವೇರಿ ಎರಡನೇಯವಳು. ಮೂರನೇಯದ್ದು ಗಂಡು ಮಗು ಅಜಿತ್. ಈ ಮಗುವಿಗೆ ಮೂರು ವರ್ಷ ವಯಸ್ಸು.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ, ಜಿಲ್ಲಾಧಿಕಾರಿ ಜಯರಾಂ ಸೇರಿದಂತೆ ಹಿರಿಯ ಅಧಿಕಾರಿಗಳು ಬಂದಿದ್ದಾರೆ. ಕಾವೇರಿಗೆ ಉಸಿರಾಟಕ್ಕೆ ತೊಂದರೆಯಾಗದಿರಲಿ ಎಂದು ಕೊಳವೆ ಬಾವಿಯಲ್ಲಿ ಆಮ್ಲಜನಕ ಬಿಡಲಾಗಿದೆ.
ಮತ್ತೊಂದೆಡೆ, ಜೆಸಿಬಿ ಯಂತ್ರಗಳಿಂದ ಕೊಳವೆ ಬಾವಿಯಿಂದ ಮಗು ತೆಗೆಯಲು ಅಡ್ಡ ಇರುವ ಸುತ್ತಲಿನ ಮಣ್ಣನ್ನು ಅಗೆದು ತೆಗೆಯಲಾಗುತ್ತಿದೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]
ಶನಿವಾರ ಮಧ್ಯರಾತ್ರಿಯ ವೇಳೆಗೆ ಸುಮಾರು 5 ಅಡಿಗಷ್ಟು ಮಣ್ಣನ್ನು ಮಾತ್ರ ತೆಗೆಯಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಲವಾರು ದಿನಗಳಿಂದ ಈ ಬಾವಿಯ ಬಾಯಿಯನ್ನು ಮುಚ್ಚುವಂತೆ ಗ್ರಾಮದ ಅನೇಕರು ಶಂಕರ್ ಗೆ ತಿಳಿ ಹೇಳಿದ್ದರು. ಆದರೆ, ಶಂಕರ್ ಇದಕ್ಕೆ ಸೊಪ್ಪು ಹಾಕಿರಲಿಲ್ಲ.
ಇದೀಗ, ಮಗು ಬಿದ್ದಿರುವ ಸುದ್ದಿ ಕೇಳಿದ ಕೂಡಲೇ ಆತ ಝಂಜರವಾಡ ಗ್ರಾಮದಿಂದ ಕಾಲ್ಕಿತ್ತಿದ್ದಾನೆಂದು ಮೂಲಗಳು ಹೇಳಿವೆ.
ಇದೇ ತಿಂಗಳ ಆರನೇ ತಾರೀಖಿನಂದು ಗುಜರಾತಿನ ಸುರೇಂದ್ರ ನಗರದ ಕರ್ಸಂಗಧ್ ಗ್ರಾಮದಲ್ಲಿ 4 ರ ಹರೆಯದ ಮಗುವೊಂದು 500 ಅಡಿ ಆಳದ ಕೊಳವೆ ಬಾವಿಗೆ ಬಿತ್ತು. ಹಲವಾರು ತಾಸುಗಳ ಕಾರ್ಯಾಚರಣೆ ನಂತರವೂ ಮಗು ಬದುಕಿ ಬರಲಿಲ್ಲ. ಇಂಥ ಘಟನೆಗಳು ಹಲವಾರು ನಡೆಯುತ್ತಿದ್ದರೂ ಜನ ಈ ಬಗ್ಗೆ ಅರಿವು ಮೂಡಿಸಿಕೊಂಡಿಲ್ಲ ಎಂಬುದು ಈಗ ಅಥಣಿ ಪ್ರಕರಣದಲ್ಲಿ ಮತ್ತೆ ಸಾಬೀತಾಗಿದೆ.