ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು
ಬೆಂಗಳೂರು, ಏಪ್ರಿಲ್ 14 : ಇಂದಿನಿಂದ ಬಿಜೆಪಿಯಲ್ಲಿ ಯಡಿಯೂರಪ್ಪ ಪರ್ವ. ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಗುರುವಾರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದು ಬೆಳಗ್ಗೆ 11.15ಕ್ಕೆ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಸಂಜೆ 4.30ಕ್ಕೆ ಅರಮನೆ ಮೈದಾನ (ಗಾಯತ್ರಿ ವಿಹಾರ)ದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ಪಾಳಯದಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದ್ದು, ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಮತ್ತು ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. [ಬಿಜೆಪಿಯಲ್ಲಿ ಯಡಿಯೂರಪ್ಪ ಏನು ಬದಲಾವಣೆ ತರಬಲ್ಲರು?]
ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನ ಉಂಟಾಗಿದೆ. ವಿವಿಧ ಕಾರಣಗಳಿದಾಗಿ ಹಿಂದೆ ಪಕ್ಷ ತೊರೆದಿದ್ದ ಅನೇಕ ನಾಯಕರು ಪುನಃ ಪಕ್ಷಕ್ಕೆ ವಾಪಸ್ ಆಗುವ ಚಿಂತನೆ ನಡೆಸಿದ್ದಾರೆ. [FIR ರದ್ದಾದರೂ ಕಾನೂನು ಹೋರಾಟ ಮುಗಿದಿಲ್ಲ]
ಎರಡು ವರ್ಷಗಳ ಕಾಲ ರಾಜ್ಯದಲ್ಲಿ ಯಾವುದೇ ಚುನಾವಣೆ ಇಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಯಡಿಯೂರಪ್ಪ ಅವರು ಪಕ್ಷ ಸಂಘಟನೆ ಆರಂಭಿಸಲಿದ್ದಾರೆ. ಯಡಿಯೂರಪ್ಪ ಅವರ ಮುಂದಿರುವ ಪ್ರಮುಖ ಸವಾಲುಗಳೇನು? ಚಿತ್ರಗಳಲ್ಲಿ ನೋಡಿ........ ['ಸಿಎಂ ಆಗುವುದಕ್ಕಿಂತ 150 ಸ್ಥಾನ ಗೆಲ್ಲುವುದು ನನ್ನ ಗುರಿ': ಬಿಎಸ್ವೈ]
ಕಾನೂನು ಹೋರಾಟದಿಂದ ಮುಕ್ತಿ ಪಡೆಯುವುದು
ಯಡಿಯೂರಪ್ಪ ಅವರು ಪ್ರಮುಖವಾಗಿ ಕಾನೂನು ಹೋರಾಟದಿಂದ ಮುಕ್ತಿ ಪಡೆಯಬೇಕಿದೆ. ಯಡಿಯೂರಪ್ಪ ಅವರ ವಿರುದ್ಧದ 15 ಅಕ್ರಮ ಡಿನೋಟಿಫಿಕೇಶನ್ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಲಯ, ಲೋಕಾಯುಕ್ತ ನ್ಯಾಯಾಲಯದಲ್ಲಿ ಯಡಿಯೂರಪ್ಪ ಅವರ ವಿರುದ್ಧದ ಮೂರು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ. ಇವುಗಳಿಂದ ಅವರು ಮುಕ್ತಿಪಡೆಯಬೇಕಿದೆ. ಮತ್ತೊಂದು ಕಡೆ 15 ಪ್ರಕರಣ ರದ್ದು ಮಾಡಿರುವ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು
ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವ ವಿಚಾರದಲ್ಲಿ ಬಿಜೆಪಿಯ ಕೆಲವು ನಾಯಕರಲ್ಲಿ ಭಿನ್ನಾಭಿಪ್ರಾಯವಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಪಕ್ಷ ಸಂಘಟನೆಗೆ ತೊಡಗಿಕೊಳ್ಳುವ ಮುನ್ನ ಯಡಿಯೂರಪ್ಪ ಅವರು ಪಕ್ಷದಲ್ಲಿನ ಆಂತರಿಕ ಭಿನ್ನಮತವನ್ನು ಶಮನಗೊಳಿಸಬೇಕು. ಪಕ್ಷದ ಹೈಕಮಾಂಡ್ ನಾಯಕರು ಸಹ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗಬೇಕು ಎಂದು ಯಡಿಯೂರಪ್ಪ ಅವರಿಗೆ ಸಂದೇಶ ನೀಡಿದ್ದಾರೆ.
ಎಲ್ಲಾ ವರ್ಗಗಳ ನಾಯಕರಾಗಿ ಬೆಳೆಯುವುದು
ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಬಲ ನಾಯಕರು. ಆದರೆ, ಅವರು ತಮ್ಮ ಸಮುದಾಯಕ್ಕೆ ಮಾತ್ರ ನಾಯಕರಲ್ಲ. ಎಲ್ಲಾ ಸಮುದಾಯಕ್ಕೂ ನಾಯಕರಾಗಿ ಬೆಳೆಯಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಎಲ್ಲಾ ಸಮುದಾಯದ ನಾಯಕರ ವಿಶ್ವಾಸವನ್ನುಗಳಿಸಬೇಕಾಗಿದೆ.
ಹೈಕಮಾಂಡ್ ನಿರೀಕ್ಷೆ ಹುಸಿ ಮಾಡಬಾರದು
2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯೊಂದಿಗೆ ಯಡಿಯೂರಪ್ಪ ಅವರಿಗೆ ಪಕ್ಷದ ಹೈಕಮಾಂಡ್ ನಾಯಕರು ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದಾರೆ. ಇದರ ಜೊತೆಗೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಬಲ ಹೋರಾಟವನ್ನು ಅವರು ಮಾಡಬೇಕಾಗಿದೆ. ಹೈಕಮಾಂಡ್ ನಾಯಕರು ಅವರ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಬಿಎಸ್ವೈ ಮೇಲಿದೆ.
ವಿವಿಧ ಘಟಕಗಳ ಪುನಾರಚನೆ
ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪಕ್ಷದ ವಿವಿಧ ಘಟಕಗಳನ್ನು ಪುನಾರಚನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಬೆಂಬಲಿಗರಿಗೆ ಮಾತ್ರ ಸ್ಥಾನವನ್ನು ನೀಡದೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ವಿವಿಧ ಹುದ್ದೆಗಳನ್ನು ನೀಡಿ, ಪಕ್ಷ ಸಂಘಟನೆ ಆರಂಭಿಸುವ ಹೊಣೆ ಯಡಿಯೂರಪ್ಪ ಅವರ ಮೇಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಬಿಸಿ ಮುಟ್ಟಿಸುವುದು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಯಡಿಯೂರಪ್ಪ ಅವರ ಮೇಲಿದೆ. ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಜನರಿಗೆ ಈ ಕುರಿತು ಮಾಹಿತಿ ನೀಡುತ್ತಾ 2018ರ ವಿಧಾನಸಭೆ ಚುನಾವಣೆಗಾಗಿ ಸಿದ್ದವಾಗಬೇಕಿದೆ.