ಗೋವಾಕ್ಕೆ ಹೆದ್ದಾರಿ, 37 ಸಾವಿರ ಮರ ಕಾಪಾಡೋರು ಯಾರ್ರಿ?
ಬೆಂಗಳೂರು, ಆಗಸ್ಟ್, 09: ಕರ್ನಾಟಕ ಮತ್ತು ಗೋವಾ ನಡುವೆ ಮಹಾದಾಯಿ ವಿವಾದ ತಣ್ಣಗಾಗುವ ಲಕ್ಷಣ ಕಾಣದೇ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂದು ಸಮಸ್ಯೆ ಓಡಾಡುತ್ತಿದೆ. ಆದರೆ ರಾಜ್ಯಗಳ ನಡುವೆ ದೊಡ್ಡ ದೊಡ್ಡ ಲಾರಿಗಳು, ಬಸ್ ಗಳು ಓಡಾಡಲು ಹೆದ್ದಾರಿ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ.
ಕರ್ನಾಟಕ ಮತ್ತು ಗೋವಾ ನಡುವೆ (ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ) ಹೆದ್ದಾರಿ ಅಗಲೀಕರಣಕ್ಕೆ37, 862 ಮರಗಳು ಧರೆಗೆ ಉರುಳಲಿವೆ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲೇಬೇಕಾಗಿದೆ.[ಪರಿಸರ ಚರ್ಚೆಗೆ ನಾಂದಿ ಹಾಡಿದ ಸರ್ಕಾರದ ವಿಧೇಯಕ]
ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆ ಮೂಲಕ ಗೋವಾ ತಲುಪಲಿರುವ ಎನ್ ಎಚ್ 4ಎ ಗಾಗಿ ಮರಗಳ ಮಾರಣಹೋಮ ನಡೆಯಲಿದೆ. ದಾಂಡೇಲಿ ಅಭಯಾರಣ್ಯದ ಮೇಲೆ ಹಾದು ಬಂದಿರುವ ಹೆದ್ದಾರಿ ಪಕ್ಕದ ಮರಗಳ ಕಣ್ಣಲ್ಲಿ ಕಣ್ಣೀರು ಆರಂಭವಾಗಿದೆ.
2015 ರ ಡಿಸೆಂಬರ್ ನಲ್ಲಿಯೇ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಒಪ್ಪಿಗೆ ನೀಡಿದೆ. ಹೆದ್ದಾರಿ ಅಗಲೀಕರಣದ ಹೆಸರಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಬೀಳುವುದು ನಿಶ್ಚಿತವಾಗಿದೆ.[ನಾವು ಎಲ್ಲಿ ಬಿದ್ದು ಸಾಯಬೇಕು: ಮರದ ಪ್ರಶ್ನೆಗೆ ಇಲ್ಲ ಉತ್ತರ]
'ಇದು ನಮ್ಮ ದುರ್ದೈವ. ಈಗಾಗಲೇ ದೊಡ್ಡ ಪ್ರಮಾಣದ ಅರಣ್ಯವನ್ನು ಕಳೆದುಕೊಂಡಿದ್ದೇವೆ. ಹಿಂದಿನ ವರ್ಷ ಬರ ಮತ್ತು ಕಾಡ್ಗಿಚ್ಚಿನಿಂದ ಅರಣ್ಯ ನಾಶವಾಗಿದ್ದು ಈಗ ಕೈಯಾರೆ ಮರ ಕಡಿತಕ್ಕೆ ಸರ್ಕಾರ ಮುಂದಾಗಿದೆ' ಎಂದು ಬೆಳಗಾವಿಯ ಪರಿಸರವಾದಿ ಉದಯ ಕುಮಾರ ದೇಸಾಯಿ ಆತಂಕ ವ್ಯಕ್ತಪಡಿಸುತ್ತಾರೆ.
ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಸದಸ್ಯರಲ್ಲಿ ಒಬ್ಬರಾದ ಪರಿಸರ ಹೋರಾಟಗಾರ ಡಾ.ಯಲ್ಲಪ್ಪ ರೆಡ್ಡಿ ಈ ಯೋಜನೆ ಬಗ್ಗೆ ನೀಡಿರುವ ಎಚ್ಚರಿಕೆಗಳಿಗೆ ಯಾರೂ ಬೆಲೆ ನೀಡಿಲ್ಲ.
ಪರಿಸರವಾದಿಗಳು ತಮ್ಮ ಹೋರಾಟವನ್ನು ಮುಂದುವರಿಸಿದ್ದು ಮರಗಳನ್ನು ಕಡಿಯದೇ ಹೆದ್ದಾರಿ ಅಗಲೀಕರಣ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.