ರಾಯಚೂರು ಪಿಯು ಪ್ರಶ್ನೆ ಪತ್ರಿಕೆ ಅಕ್ರಮ: ಪ್ರಿನ್ಸಿಪಾಲ್ ಸೇರಿ ಮೂವರ ಬಂಧನ
ಕಾಮರ್ಸ್ ವಿಷಯಕ್ಕೆ ಸೇರಿದ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಇಂದು ರಾಯಚೂರು ವಿದ್ಯಾರ್ಥಿಗಳ ಮೊಬೈಲುಗಳಲ್ಲಿ ಓಡಾಡಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು, ಮಾರ್ಚ್ 13: ರಾಯಚೂರಿನಲ್ಲಿ ದ್ವಿತೀಯ ಪದವಿಪೂರ್ವ ಪರೀಕ್ಷೆಯ ಕಾಮರ್ಸ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು ಎಫ್ಐಆರ್ ದಾಖಲಿಸಿದ್ದಾರೆ.
ರಾಯಚೂರಿನ ಮಾನ್ವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ರಾಯಚೂರಿನ ಕಳಿಂಗ ಕಾಲೇಜಿನ ಪ್ರಿನ್ಸಿಪಾಲ್ ಮಹೇಶ್, ಉಪನ್ಯಾಸಕ ಶರಣಬಸವ ಹಾಗೂ ಕಲ್ಮಠ ಕಾಲೇಜಿ ಉಪನ್ಯಾಸಕ ಸಿದ್ಧನಗೌಡ ಬಂಧಿತರಾಗಿದ್ದಾರೆ.[ರಾಯಚೂರು: ಮತ್ತೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ?]
ದ್ವಿತೀಯ ಪದವಿಪೂರ್ವ ಕಾಮರ್ಸ್ ವಿಷಯದ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆಯ ಅಕ್ರಮದಲ್ಲಿ ಭಾಗಿಯಾದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.
ಇಂದು ಬೆಳಿಗ್ಗೆ ಕಾಮರ್ಸ್ ವಿಷಯಕ್ಕೆ ಸೇರಿದ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ರಾಯಚೂರು ವಿದ್ಯಾರ್ಥಿಗಳ ಮೊಬೈಲುಗಳಲ್ಲಿ ಓಡಾಡಿತ್ತು. ಈ ವಿಚಾರ ಬೆಳಿಗ್ಗೆ 12 ಗಂಟೆ 30 ನಿಮಿಷಕ್ಕೆ ರಾಯಚೂರು ಜಿಲ್ಲಾಧಿಕಾರಿ ಗಮನಕ್ಕೆ ಬಂದಿದೆ. ಅಂದರೆ 10:30 ಕ್ಕೆ ಪರೀಕ್ಷೆ ಆರಂಭವಾದ 2 ಗಂಟೆಗಳ ನಂತರ ಈ ವಿಚಾರ ಗೊತ್ತಾಗಿದೆ.[ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]
ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಹಾಲಿಗೆ 10: 15ಕ್ಕೆ ಪ್ರವೇಶಿಸುವಾಗ ಈ ಪ್ರಶ್ನೆ ಪತ್ರಿಕೆ ಲೀಕ್ ಆಗಿರಲಿಲ್ಲ. ಒಮ್ಮೆ ಒಳಗೆ ಬಂದ ನಂತರ ವಿದ್ಯಾರ್ಥಿಗಳನ್ನು ಹೊರಗೆಯೂ ಬಿಟ್ಟಿಲ್ಲ. ಇದರ ಮಧ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಎಲ್ಲಾ ಪುಟಗಳೂ ಲೀಕ್ ಆಗಿಲ್ಲ. ಕೇವಲ ಒಂದು ಪುಟವಷ್ಟೇ ವಾಟ್ಸಪ್ ನಲ್ಲಿ ಬಂದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಹೇಳಿದ್ದರು.
ತದ ನಂತರ ರಾಯಚೂರು ಎಸ್ಪಿ ಚೇತನ್ ಸಿಂಗ್ ರಾಥೋಡ್ ಈ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿದ್ದರು. ಇದೀಗ ತನಿಖೆಯ ನಂತರ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. "ವಾಟ್ಸಾಪ್ ನಲ್ಲಿ ಜಿಲ್ಲಾಧಿಕಾರಿಗೆ ಸಂದೇಶ ಬಂದಿದೆ ಅಷ್ಟೆ. ಈ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಅಧೀಕ್ಷಕ ವಿಜಯ್ ಕುಮಾರ್ ರನ್ನು ಸಸ್ಪೆಂಡ್ ಮಾಡಲಾಗಿದೆ.