ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಆರೋಪಿಗಳಿಗೆ ಜಾಮೀನು
ಬೆಂಗಳೂರು, ಸೆಪ್ಟೆಂಬರ್ 02 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಇಬ್ಬರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈಗಾಗಲೇ ಈ ಪ್ರಕರಣದಲ್ಲಿ 5 ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಗುರುವಾರ ಕರ್ನಾಟಕ ಹೈಕೋರ್ಟ್ ಪ್ರಕರಣದ ಆರೋಪಿಗಳಾದ ಟ್ಯುಟೋರಿಯಲ್ ಮುಖ್ಯಸ್ಥ ಮುರಳೀಧರ್ ಮತ್ತು ಸತೀಶ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣ ಇತರ ಆರೋಪಿಗಳಿಗೂ ಜಾಮೀನು ನೀಡಲಾಗಿದೆ. ಇದೇ ಆಧಾರದ ಮೇಲೆ ಇಬ್ಬರಿಗೆ ಜಾಮೀನು ನೀಡಲಾಗಿದೆ.[ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ಗಂಗಬೈರಯ್ಯಗೆ ಜಾಮೀನು]
ಈ ಆರೋಪಿಗಳು ಮೊದಲ ಆರೋಪಿ ಮಂಜುನಾಥ್ಗೆ ಹಣ ನೀಡಿ ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ್ದಾರೆ ಎಂಬ ಆರೋಪವಿದೆ. ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಬಿ.ಶ್ರೀನಿವಾಸ ಗೌಡ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.[ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನಾಲ್ವರಿಗೆ ಜಾಮೀನು]
ಜಾಮೀನು ಸಿಕ್ಕಿದವರು : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಇದುವರೆಗೂ ಪ್ರಕರಣದ ಆರೋಪಿಗಳಾದ ಎಂ.ವಿ.ರುದ್ರಪ್ಪ, ಕೆ.ಎಸ್.ರಂಗನಾಥ್, ಬಿ.ಅನಿಲ್ ಕುಮಾರ್ ಮತ್ತು ಮಾಜಿ ಬಿಬಿಎಂಪಿ ಸದಸ್ಯ ಗಂಗಬೈರಯ್ಯ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.